ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗೆ ರೈತಸಂಘ ನಿರ್ಧಾರ
ಮೈಸೂರು, ಮೇ.23: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘವು ಪ್ರತಿಭಟನೆ ಕೈಗೊಳ್ಳಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
Recommended Video
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ರೈತರು ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗೆ ಸಂಘ ನಿರ್ಧರಿಸಿದ್ದು, ದೇಶ ವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗುವುದು" ಎಂದರು.
ಎಪಿಎಂಸಿ ಸುಗ್ರಿವಾಜ್ಞೆ: ಯಡಿಯೂರಪ್ಪ ರೈತರಿಗೆ ಕೊಟ್ಟ ಭರವಸೆಗಳು
ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಕೇಂದ್ರ ಸರ್ಕಾರದ ಒತ್ತಾಯಕ್ಕೆ ಮಣಿದ ಸಿಎಂ ಯಡಿಯೂರಪ್ಪನವರು ಈ ನಿರ್ಧಾರ ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಸಚಿವ ಮಾಧುಸ್ವಾಮಿ ಅವರಿಗೂ ಈ ಕಾಯ್ದೆ ತಿದ್ದುಪಡಿ ಮಾಡುವುದಕ್ಕೆ ಒಪ್ಪಿಗೆ ಇರಲಿಲ್ಲ. ಅನಿವಾರ್ಯವಾಗಿ ಕೇಂದ್ರದ ಒತ್ತಡಕ್ಕೆ ಮಣಿದು ಈ ನಿರ್ಧಾರ ಮಾಡಿದ್ದಾರೆ. ಕೆಲವು ರಾಜ್ಯ ಸರ್ಕಾರಗಳೇ ಈ ಕಾಯ್ದೆ ತಿದ್ದುಪಡಿ ಮಾಡುವುದಿಲ್ಲವೆಂದು ಹೇಳಿವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ ತಿದ್ದುಪಡಿ ಮಾಡಲಾಗುತ್ತಿದ್ದು, ಇದರಿಂದ ಎಪಿಎಂಸಿ ಖಾಸಗೀಕರಣ ಆಗುತ್ತಿದೆ ಎಂದು ಆರೋಪಿಸಿದರು.
ಕಾಯ್ದೆ ರೈತರಿಗಷ್ಟೆ ಅಪಾಯ ಅಲ್ಲ. ಲಕ್ಷಾಂತರ ಕಾರ್ಮಿಕರು, ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೂ ತೊಂದರೆ ಆಗಲಿದೆ. ಸರ್ಕಾರದ ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಬೀಜ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು. ಇನ್ನು ಮುಂದೆ ಪ್ರತಿಭಟನೆ ಪರ್ವ ಆರಂಭವಾಗಲಿದೆ. ಜೂನ್ 10ರ ನಂತರ ಖಾಸಗೀಕರಣ ವಿರೋಧಿಸಿ ಬೃಹತ್ ಚಳವಳಿ ನಡೆಸಲಾಗುವುದು ಎಂದರು.