ಮಾಜಿ ಸಿಎಂ ಎಚ್ಡಿಕೆಗೆ ಜೋಳದ ರೊಟ್ಟಿ ಕಳಿಸಿದ್ದು ಯಾಕೇ?
ಬೆಂಗಳೂರು, ಡಿ. 18: ಇವತ್ತು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೆಪಿ ನಗರದ ಮನೆಗೆ ದೊಡ್ಡ ಪಾರ್ಸಲ್ವೊಂದು ಬಂದಾಗ ಅಲ್ಲಿದ್ದ ಸಿಬ್ಬಂದಿಗೆ ಕುತೂಹಲ, ಮತ್ತೊಂದೆಡೆ ಇಷ್ಟು ದೊಡ್ಡ ಬಾಕ್ಸ್ನಲ್ಲಿ ಏನಿದೆ ಅನ್ನೊ ಆತಂಕ ಕೂಡ. ಕೊನೆಗೆ ಬಾಕ್ಸ್ ಓಪನ್ ಮಾಡಿ ನೋಡಿದಾಗ ಅದರಲ್ಲಿ ಇದ್ದುದ್ದು ಖಡಕ್ ಜೋಳದ ರೊಟ್ಟಿ, ಶೇಂಗಾ ಚಟ್ನಿ, ಡ್ರೈ ಪಲ್ಯಾ, ಜೊತೆಗೆ ಒಂದು ಪತ್ರ. ಪತ್ರವನ್ನು ಬರೆದಿದ್ದು ಉತ್ತರ ಕರ್ನಾಟಕ ಭಾಗದ ರೈತರೊಬ್ಬರು.
ಪತ್ರವನ್ನು ಓದಿದಾಗ ಗೊತ್ತಾಗಿದ್ದು ಆ ರೈತ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಗೋವಿಂದಪ್ಪ ಶ್ರೀಹರಿ ಅಂತಾ. ಹೌದು ಸಾಲ ಬಾಧೆಯಿಂದ ಬಳಲಿ ಆತ್ಮಹತ್ಯೆಗೆ ಮುಂದಾಗಿದ್ದ ರೈತ ಗೋವಿಂದಪ್ಪ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಸ್ವಾವಲಂಬನೆಯ ಜೀವನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಅದಕ್ಕೆ ಕಾರಣವಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವಿಶೇಷ ಉಡುಗೊರೆ ಕಳಿಸಿ ಮಾಜಿ ಸಿಎಂಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳದಂತೆ ಧೈರ್ಯ ತುಂಬಿದ್ದ ಎಚ್ಡಿಕೆ
ಸಾಲ ಬಾಧೆಯಿಂದ ನಮ್ಮ ದೇಶದಲ್ಲಿ ಪ್ರತಿ ದಿನ ಸುಮಾರು 31 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ರಾಷ್ಟ್ರೀಯ ಅಪಾರಾಧ ದಾಖಲೆಗಳ ಬ್ಯೂರೊ (NCRB) ವರದಿಯೇ ಹೇಳುತ್ತದೆ. ಆದರೆ ಸೂಕ್ತ ಕಾಲದಲ್ಲಿ ಆಡಳಿತ ನಡೆಸುವವರು ಸ್ಪಂದನೆ ಮಾಡಿದರೆ ಕೆಲವೊಂದಿಷ್ಟು ಕೃಷಿಕರ ಆತ್ಯಹತ್ಯೆಗಳನ್ನಾದರೂ ತಡೆಯಬಹುದು ಎಂಬುದಕ್ಕೆ ಈ ರೈತನೇ ಉತ್ತಮ ಉದಾಹರಣೆ. ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೇನೆಂದು ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಗೋವಿಂದಪ್ಪ ಶ್ರೀಹರಿ ಪತ್ರ ಬರೆದು ನೋವು ಹೇಳಿಕೊಂಡಿದ್ದರು.
ಸಿಎಂ ಸಚಿವಾಲಯದ ಸಿಬ್ಬಂದಿ ಆ ಪತ್ರವನ್ನು ಆಗಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೊಟ್ಟಿದ್ದರು. ಪತ್ರ ಓದಿದ್ದ ಎಚ್ಡಿಕೆ, ತಕ್ಷಣವೇ ಪತ್ರದಲ್ಲಿದ್ದ ಮೊಬೈಲ್ ನಂಬರ್ಗೆ ತಾವೇ ಮೊಬೈಲ್ ಕರೆ ಮಾಡಿದ್ದರು. ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗಬಾರದು ಅಂತಾ ಆತ್ಮವಿಶ್ವಾಸ ತುಂಬಿದ್ದರು. ರೈತರ ಸಾಲ ಮನ್ನಾ ಆಗಲಿದೆ. ಜೊತೆಗೆ ಸರ್ಕಾರ ರೈತರೊಂದಿಗೆ ಇದೆ ಅಂತಾ ಎಚ್ಡಿಕೆ ಗೋವಿಂದಪ್ಪ ಅವರಿಗೆ ಸಮಾಧಾನ ಮಾಡಿದ್ದರು.
ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಬ್ರೇಕ್; ಬಿಜೆಪಿ ಮೇಲೆ ಎಚ್ಡಿಕೆ ಕಿಡಿ ಕಿಡಿ
ಶೇಂಗಾ ಚಟ್ನಿ, ಜೊತೆಗೆ ಕೃತಜ್ಞತಾ ಪತ್ರವನ್ನು ಬರೆದ ರೈತ
ಬಳಿಕ ರೈತರ ಸಾಲಮನ್ನಾ ಯೋಜನೆಯಡಿ ಗೋವಿಂದಪ್ಪ ಶ್ರೀಹರಿ ಅವರ ಸಾಲವೂ ಮನ್ನಾ ಆಗಿತ್ತು. ರಾಜಕೀಯ ಸ್ಥಿತ್ಯಂತರಗಳಲ್ಲಿ ಸಿಎಂ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಮಾಜಿ ಸಿಎಂ ಆದರು. ಆದರೆ ಸಾಲಮನ್ನಾ ಯೋಜನೆ ಜಾರಿಗೆ ತರುವ ಮೂಲಕ ರಾಜ್ಯದ ರೈತರ ಸುಮಾರು 46 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನ ಗೋವಿಂದಪ್ಪ ಮರೆತಿರಲಿಲ್ಲ. ಸಾಲಮನ್ನಾ ಮೂಲಕ ರೈತರ ಜೀವನದಲ್ಲಿ ಆತ್ಮವಿಶ್ವಾಸ ತುಂಬಿದ್ದ ಕುಮಾರಸ್ವಾಮಿ ಅವರಿಗೆ ವಿಶೇಷ ಉಡುಗೊರೆ ಕೊಡಲು ತೀರ್ಮಾನಿಸಿ, ತಮ್ಮ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಜೋಳದ ರೊಟ್ಟಿ , ಶೇಂಗಾ ಚಟ್ನಿ ಪುಡಿ, ಡ್ರೈ ಪಲ್ಯಾವನ್ನ ತಯಾರು ಮಾಡಿ ಒಂದು ದೊಡ್ಡ ಬಾಕ್ಸ್ನಲ್ಲಿ ಹಾಕಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಬೆಂಗಳೂರಿನ ಜೆಪಿ ನಗರ ನಿವಾಸಕ್ಕೆ ಕೊರಿಯರ್ ಮಾಡಿ ವಿಶೇಷ ಕೃತಜ್ಞತೆಗಳನ್ನ ಎಚ್ಡಿಕೆಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಮಾಜಿ ಸಿಎಂ ಎಚ್ಡಿಕೆಗೆ ರೈತ ಬರೆದ ಪತ್ರದಲ್ಲಿ ಏನಿದೆ?
ಇದೀಗ ಸ್ವಾವಲಂಬನೆಯ ಜೀವನ ನಡೆಸುತ್ತಿರುವ ರೈತ ಗೋವಿಂದಪ್ಪ ಶ್ರೀಹರಿ ತಾವೇ ಮಾಜಿ ಸಿಎಂ ಎಚ್ಡಿಕೆಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸನ್ಮಾನ್ಯ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರೆ ನಿಮಗೊಂದು ನಮನ. ನಾವು ಸಾಲ ಮನ್ನಾದ ಸಂಕಷ್ಟದಲ್ಲಿದ್ದಾಗ ಫೋನ್ ಕಾಲ್ ಮೂಲಕ ನಮಗೆ ಹೇಳಿದ ಪರವಾಗಿ ನಿಮಗೆ ಹೇಗೆ ಧನ್ಯವಾದ ತಿಳಿಸಬೇಕೆಂದು ತಿಳಿಯುತ್ತಿಲ್ಲ. ನೇಣಿಗೆ ಶರಣಾಗುವ ಸ್ಥಿತಿಗೆ ತಲುಪಿದ್ದ ನಮಗೆ ಸಮಾಧಾನ ಮಾಡಿದ್ದಕ್ಕಾಗಿ ನಮ್ಮ ಕೈಲಾದ ಕೃತಜ್ಞತೆ ತಿಳಿಸುತ್ತಿದ್ದೇವೆ. ಆದ ಕಾರಣ ನಮ್ಮ ಹೊಲದಲ್ಲಿ ಬೆಳೆದ ಜೋಳ, ಶೇಂಗಾದಿಂದ ತಯಾರಿಸಿದ ಜೋಳದ ರೊಟ್ಟಿ, ಶೇಂಗಾ ಪುಡಿ ಹಾಗೂ ಡ್ರೈ ಪಲ್ಯಾವನ್ನು ತಯಾರಿಸಿ ತಮಗೆ ಕಳುಹಿಸಿ ಕೊಟ್ಟಿದ್ದೇವೆ ಎಂದು ಮುಗ್ದವಾಗಿ ಬರೆದು ಕಳಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅದ್ಧೂರಿ ಷಷ್ಠಿಪೂರ್ತಿ: ವಿಡಿಯೋ ವೈರಲ್
ಇಂಥ ರೈತರೆ ನನ್ನ ಜೀವನಕ್ಕೆ ಸ್ಪೂರ್ತಿ ಎಂದ ಎಚ್ಡಿಕೆ
ಸಾಲಮನ್ನಾ ಯೋಜನೆಗೆ ಆಗಿನ ವಿರೋಧ ಪಕ್ಷವಾಗಿದ್ದ ಬಿಜೆಪಿಯಿಂದ ತೀವ್ರ ಟೀಕೆ ಬಂದಿತ್ತು. ಆಗ ವಿರೋಧ ಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅವರು ಸಾಲಮನ್ನಾ ಯೋಜನೆಯಿಂದ ರೈತರಿಗೆ ಸಹಾಯ ಆಗಿಲ್ಲ ಎಂದು ಆರೋಪಿಸಿದ್ದರು. ಈಗ ಗೋವಿಂದಪ್ಪ ಕಳಿಸಿರುವ ರೊಟ್ಟಿ ಸವಿದಿರುವ ಮಾಜಿ ಸಿಎಂ ಕುಮಾರಸ್ವಾಮಿ, ರೈತ ಗೋವಿಂದಪ್ಪ ಶ್ರೀಹರಿಯವರು ಕಳಿಸಿರುವ ವಿಶೇಷ ಉಡುಗೊರೆ ನನಗೆ ಅತ್ಯಂತ ದೊಡ್ಡದು. ಅವರು ಬದಲಾಗಿ ಸ್ವಾವಲಂಬನೆಯ ಜೀವನ ನಡೆಸುತ್ತಿರುವುದು ನನಗೆ ಸ್ಪೂರ್ತಿ. ಗೋವಿಂದಪ್ಪರಂಥ ರೈತರೇ ನನ್ನ ರಾಜಕೀಯ ಜೀವನಕ್ಕೆ ಸ್ಪೂರ್ತಿ ಎಂದು ಭಾವುಕರಾಗಿದ್ದಾರೆ. ರೈತ ಗೋವಿಂದಪ್ಪ ಶ್ರೀಹರಿ ಅವರ ಮೊಬೈಲ್ ದೂರವಾಣಿ ಸಂಖ್ಯೆ: 9900466983, 7349553051