ಈ ಬಾರಿಯೂ ದಾವಣಗೆರೆ ಜನರಿಗಿಲ್ಲ ಒಂದೇ ವೇದಿಕೆಯಲ್ಲಿ ಮಾಜಿ, ಹಾಲಿ ಸಿಎಂ ನೋಡುವ ಭಾಗ್ಯ!
ದಾವಣಗೆರೆ, ಮಾರ್ಚ್ 7: ದಾವಣಗೆರೆ ಜಿಲ್ಲೆ ಹೊನ್ನಾಳಿಯ ಹಿರೇಕಲ್ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕೃಷಿ ಮೇಳಕ್ಕೆ ಇಂದು ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಇಂದು ತೆರೆ ಬೀಳಲಿದ್ದು, ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ. ಮಧ್ಯಾಹ್ನ ಹೆಲಿಕ್ಯಾಪ್ಟರ್ ಮೂಲಕ ಸಿಎಂ ಯಡಿಯೂರಪ್ಪ ಹೊನ್ನಾಳಿಗೆ ಆಗಮಿಸಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೊನ್ನಾಳಿಯಲ್ಲಿ ಕೃಷಿಮೇಳ ಉದ್ಘಾಟಿಸಲಿರುವ ಶಿವರಾಜಕುಮಾರ್
ನಂತರ 4.30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಇದಾದ ನಂತರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ 5:30ಕ್ಕೆ ಕಲ್ಮಠಕ್ಕೆ ಆಗಮಿಸಲಿದ್ದು, ಮಾಜಿ ಹಾಗೂ ಹಾಲಿ ಸಿಎಂಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಜನತೆಗೆ ಇಲ್ಲದಂತಾಗಿದೆ.
ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದರೂ, ಇವರಿಬ್ಬರನ್ನೂ ಕೃಷಿ ವಿಚಾರವಾಗಿ ಒಂದೇ ವೇದಿಕೆಯಲ್ಲಿ ನೋಡಬೇಕೆಂಬ ಕುತೂಹಲ ಜನರಲ್ಲಿತ್ತು. ಆದರೆ ಆ ಭಾಗ್ಯ ಇಲ್ಲದಂತಾಗಿರುವುದು ಆಯೋಜಕರ ತಪ್ಪೋ ಅಥವಾ ಒಬ್ಬರನ್ನೊಬ್ಬರು ನೋಡದ ಮನೋಭಾವನೆಯಿಂದ ಆ ಮುಖಂಡರೇ ಸಮಯ ಬದಲಾಯಿಸಿದ್ದಾರೋ ಗೊತ್ತಿಲ್ಲ. ಈ ಹಿಂದೆ ವಾಲ್ಮೀಕಿ ಜಾತ್ರೆಯಲ್ಲಿ ಸಹ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕೇವಲ ಹತ್ತು ನಿಮಿಷದ ಅಂತರದಲ್ಲಿ ವೇದಿಕೆ ಬದಲಾಯಿಸಿದ್ದು ಮೂವರನ್ನು ಒಂದೇ ವೇದಿಕೆಯಲ್ಲಿ ನೋಡುವ ಕನಸಿಗೆ ನಿರಾಸೆಯಾಗಿತ್ತು. ಅದೇ ನಿರಾಸೆ ಈ ಬಾರಿ ಮತ್ತೊಮ್ಮೆ ಆಗಿದೆ.