"ಬೆಳೆ ಸಮೀಕ್ಷೆಯಲ್ಲಿ ರೈತರೇ ಬೆಳೆ ಮಾಹಿತಿ ಅಪ್ಲೋಡ್ ಮಾಡಲು ಅವಕಾಶ''
ಶಿವಮೊಗ್ಗ, ಆಗಸ್ಟ್ 16: ಇದೇ ಮೊದಲ ಬಾರಿಗೆ ಬೆಳೆ ಸಮೀಕ್ಷೆಯಲ್ಲಿ ರೈತರು ನೇರವಾಗಿ ಭಾಗಿಯಾಗಲು ಅವಕಾಶ ನೀಡಲಾಗಿದ್ದು, ರೈತರು ನಿಗದಿತ ಆ್ಯಪ್ ನಲ್ಲಿ ಬೆಳೆ ಮಾಹಿತಿಯನ್ನು ಅಪ್ಲೋಡ್ ಮಾಡಬಹುದಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳೆ ಸಮೀಕ್ಷೆ ಕುರಿತಾದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ಮಾತನಾಡಿ, ಅವರು ಈ ಬಾರಿ ಬೆಳೆ ಸಮೀಕ್ಷೆ ಆಗಸ್ಟ್ 24 ರವರೆಗೆ ನಡೆಯಲಿದ್ದು, ಬೆಳೆ ಸಮೀಕ್ಷೆ ಉತ್ಸವವಾಗಿ ಆಚರಿಸಲಾಗುತ್ತಿದೆ ಎಂದರು.
ರೈತರು ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಸ್ವತಃ ತಾವೇ "ಫಾರ್ಮರ್ಸ್ ಕ್ರಾಪ್ ಸರ್ವೇ ಆಪ್ 2020-21' ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ರೈತರು ತಾವು ಬೆಳೆದ ಬೆಳೆಗಳ ಛಾಯಾಚಿತ್ರವನ್ನು ಈ ಮೊಬೈಲ್ ಆ್ಯಪ್ ಬಳಸಿಕೊಂಡು ನಿಗದಿತ ಸಮಯದ ಒಳಗಾಗಿ ಅಪ್ಲೋಡ್ ಮಾಡಬೇಕೆಂದು ತಿಳಿಸಿದರು.
ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್ಗೆ ಮಾಹಿತಿ ತುಂಬುವುದು ಹೇಗೆ?
ಸಾಧ್ಯವಾಗದಿದ್ದರೆ ಕೃಷಿ ಇಲಾಖೆ ಸಿಬ್ಬಂದಿಯಿಂದ ಅಪ್ಲೋಡ್
ರೈತರು ನಿಗದಿತ ಸಮಯದ ಒಳಗಾಗಿ ತಾವು ಬೆಳೆದ ಬೆಳೆಗಳ ಛಾಯಾಚಿತ್ರವನ್ನು ಅಪ್ಲೋಡ್ ಮಾಡದೇ ಇದ್ದಲ್ಲಿ ತಂತ್ರಾಂಶದ ಅರಿವುಳ್ಳ ಯುವಕರು ಖಾಸಗಿ ನಿವಾಸಿಗಳ ಜತೆಗೆ ಅಪ್ಲೋಡ್ ಮಾಡಬಹುದಾಗಿದೆ. ಇದೂ ಸಾಧ್ಯವಾಗದಿದ್ದರೆ ಕೃಷಿ ಇಲಾಖೆ ಸಿಬ್ಬಂದಿ ಈ ಕಾರ್ಯ ನೆರವೇರಿಸುವರು ಎಂದು ಹೇಳಿದರು.
ಮಾಹಿತಿಯನ್ನು ಅನುಮೋದಿಸಲು ಅಧಿಕಾರಿಗಳ ತಂಡವನ್ನು ರಚನೆ
ರೈತರು ಮತ್ತು ಖಾಸಗಿ ನಿವಾಸಿಗಳು ನಮೂದಿಸಿದ ಬೆಳೆ ಮಾಹಿತಿಯನ್ನು ಪರಿಶೀಲಿಸಿ, ಫೋಟೋ ಮತ್ತು ನಮೂದಿಸಿದ ಹೆಸರನ್ನು ತಾಳೆ ಮಾಡಿ ಅನುಮೋದಿಸಬೇಕು. ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಅನುಮೋದಿಸಲು ಅಧಿಕಾರಿಗಳ ತಂಡವನ್ನು ರಚಿಸಬೇಕು ಎಂದು ಅವರು ಹೇಳಿದರು.
ರೈತರ ಸಹಾಯಕ್ಕಾಗಿ 'ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್' ಬಿಡುಗಡೆ
ಹಿಸ್ಸಾದಲ್ಲಿ ಬೆಳೆದಿರುವ ಬೆಳೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು
ಹೋಬಳಿ ಮಟ್ಟದಲ್ಲಿ ಖಾಸಗಿ ವ್ಯಕ್ತಿಗಳಿಗೆ ಮುಖ್ಯ ಬೆಳೆ, ಅಂತರ ಬೆಳೆ ಮತ್ತು ಮಿಶ್ರ ಬೆಳೆಗಳನ್ನು ನಮೂದಿಸುವ ಬಗ್ಗೆ, ಉತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿಯನ್ನು ಒದಗಿಸಬೇಕು. ರೈತರ ಪ್ರತಿ ಹಿಸ್ಸಾದಲ್ಲಿ ಬೆಳೆದಿರುವ ಬೆಳೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಬೆಳೆ ಸಮೀಕ್ಷೆಯಲ್ಲಿ ಎಲ್ಲಾ ರೈತರು ಕಡ್ಡಾಯವಾಗಿ ಭಾಗವಹಿಸುವಂತೆ ಖಾತ್ರಿ ಪಡಿಸಬೇಕು ಎಂದು ಅವರು ಹೇಳಿದರು.
ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ
ಬೆಳೆ ಸಮೀಕ್ಷೆ 2020-21ರ ಸಾಲಿನಲ್ಲಿ ರೈತ ಬಾಂಧವರು ತಮ್ಮ ಜಮೀನಿನ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ತಾವೇ ಸ್ವತಃ ಮೊಬೈಲ್ ತಂತ್ರಾಂಶದ ಮೂಲಕ ಹಾಗೂ ಲಿಂಕ್ ಮೂಲಕ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬೆಳೆ ವಿವರ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್, ಜಿಲ್ಲಾ ಸಂಖ್ಯಾಶಾಸ್ತ್ರ ಅಧಿಕಾರಿ ಬ್ರಿಜೆಟ್ ವರ್ಗೀಸ್ ಮತ್ತಿತರ ಅಧಿಕಾರಿಗಳು ಇದ್ದರು.