ಕೊಪ್ಪಳ; ದುಬಾರಿ ಬೆಲೆಗೆ ಗೊಬ್ಬರ ಮಾರಾಟ, ಎಚ್ಚರಿಕೆ
ಕೊಪ್ಪಳ, ಆಗಸ್ಟ್, 3: ರಸಗೊಬ್ಬರಗಳನ್ನು ದುಬಾರಿ ಬೆಲೆಗೆ ಮಾರಾಟ ಹಾಗೂ ಯೂರಿಯಾಕ್ಕಾಗಿ ರೈತರ ಪರದಾಟದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಕೊಪ್ಪಳದ ಜಂಟಿ ಕೃಷಿ ನಿರ್ದೇಶಕರಾದ ಸದಾಶಿವ ಸ್ಪಷ್ಟೀಕರಣ ನೀಡಿದ್ದಾರೆ.
ರಸಗೊಬ್ಬರ ದಾಸ್ತಾನು ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ರಸಗೊಬ್ಬರ ನಿಯಂತ್ರಣ (ಆದೇಶ) 1985ರ ಪ್ರಕಾರ ಪ್ರತಿ ಲೈಸೆನ್ಸ್ ಹೊಂದಿರುವ ಮಾರಾಟಗಾರರು ರಸಗೊಬ್ಬರ ಖರೀದಿಸುವ ರೈತರಿಗೆ ಬಿಲ್ಗಳನ್ನು ನೀಡಬೇಕು ಎಂದು ಸೂಚಿಸಿದ್ದಾರೆ.
ರಾಯಚೂರು: ಅಸಮರ್ಪಕ ಮಳೆ ಮಧ್ಯೆ ಮುಂಗಾರು ಬಿತ್ತನೆ ಪೂರ್ಣ
ಅಂಗಡಿಗಳಲ್ಲಿ ದಾಸ್ತಾನು ಮತ್ತು ದರಪಟ್ಟಿಯನ್ನು ಪ್ರದರ್ಶಿಸಬೇಕು. ಈ ವಿಷಯವಾಗಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಮಾರಾಟಗಾರರ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಡ್ಡಾಯವಾಗಿ ಬಿಲ್ಗಳನ್ನು ನೀಡಲು ಮತ್ತು ದಾಸ್ತಾನು ದರಪಟ್ಟಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಿ ರಸಗೊಬ್ಬರ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
ನಿಮ್ಮ ಟ್ರ್ಯಾಕ್ಟರ್ ಸಿದ್ಧವಾಗಿಟ್ಟುಕೊಳ್ಳಿ'; ಮತ್ತೊಂದು ಆಂದೋಲನ ಬೇಕಾಗಿದೆ: ಟಿಕಾಯತ್
ಈಗಾಗಲೇ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಈವರೆಗೆ 543 ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿರುತ್ತಾರೆ. ಆದೇಶ ಉಲ್ಲಂಘನೆ ಮಾಡಿದ ಮಾರಾಟಗಾರರ ಮಳಿಗೆಗಳಲ್ಲಿ 131.65 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ 14.675 ಟನ್ ರಸಗೊಬ್ಬರ ದಾಸ್ತಾನ ಅನ್ನು ಜಪ್ತಿ ಮಾಡಲಾಗಿರುತ್ತದೆ.
ಅಲ್ಲದೇ 17 ಜನ ಮಾರಾಟಗಾರರಿಗೆ ಮಾರಾಟ ತಡೆ ನೋಟಿಸ್ ಜಾರಿ ಮಾಡಲಾಗಿದ್ದು, 6 ಪ್ರಕರಣಗಳಲ್ಲಿ ರಸಗೊಬ್ಬರ ಮಾರಾಟಗಾರರ ಲೈಸೆನ್ಸ್ ಅಮಾನತು ಮಾಡಲಾಗಿದೆ.
ಬೇಡಿಕೆ ಹೆಚ್ಚಾಗಿದೆ; ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಮೇಲುಗೊಬ್ಬರ ಬಳಕೆಗಾಗಿ ಮತ್ತು ತುಂಗಭದ್ರ ಡ್ಯಾಂನಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ ಮಾಡಿರುವುದರಿಂದ ನೀರಾವರಿ ಮತ್ತು ಖುಷ್ಕಿ ಪ್ರದೇಶಕ್ಕೆ ಏಕಕಾಲಕ್ಕೆ ರಸಗೊಬ್ಬರ ಬೇಡಿಕೆ ಸಹಜವಾಗಿ ಹೆಚ್ಚಾಗಿದೆ.
ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದ್ದು, ಯಾವುದೇ ಅಭಾವ ಇರುವುದಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಯೂರಿಯಾ 6513 ಟನ್, ಡಿಎಪಿ 1396 ಟನ್, ಪೊಟ್ಯಾಷ್ 766 ಟನ್, ಕಾಂಪ್ಲೆಕ್ಸ್ 13263 ಟನ್ ಮತ್ತು ಎಸ್.ಎಸ್.ಪಿ 525 ಟನ್ ರಸಗೊಬ್ಬರ ಲಭ್ಯವಿದ್ದು, ಮುಂದಿನ ಒಂದು ವಾರದೊಳಗೆ ಯೂರಿಯಾ 2001 ಟನ್, ಕಾಂಪ್ಲೆಕ್ಸ್ 3500 ಟನ್ ಗಳಷ್ಟು ರಸಗೊಬ್ಬರ ಬರುವ ನಿರೀಕ್ಷೆ ಇದೆ.
ಜಿಲ್ಲೆಯಲ್ಲಿ ನ್ಯಾನೋ ಯೂರಿಯಾ ಲಭ್ಯವಿದ್ದು, ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾವನ್ನು ರೈತರು ಬೆಳೆಗಳಿಗೆ ಸಿಂಪರಣೆಗಾಗಿ ಬಳಸಬಹುದಾಗಿದೆ. ಪೂರೈಕೆಯಾದ ರಸಗೊಬ್ಬರವನ್ನು ರೈತರಿಗೆ ನಿಗದಿತ ದರದಲ್ಲಿ ಸಮಯಕ್ಕೆ ಸರಿಯಾಗಿ ವಿತರಣೆಗೆ ಕೃಷಿ ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದು, ಮಾರಾಟಗಾರರ ಮೇಲೆ ಯಾವಾಗಲೂ ನಿಗಾ ಇರಿಸಲಾಗಿದೆ.
ರೈತರು ರಸಗೊಬ್ಬರವನ್ನು ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಿ ಕಡ್ಡಾಯವಾಗಿ ರಶೀದಿ ಪಡೆಯಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆ ಮೂಲಕ ಕೋರಿದ್ದಾರೆ.