ಬಿತ್ತನೆ ಬೀಜ-ಆತ್ಮ ನಿರ್ಭರ್ ಮತ್ತು ರಫ್ತು ಅವಕಾಶಗಳು...
ಹಿಂದೆ ಭಾರತ ದೇಶದಲ್ಲಿ ಬಿತ್ತನೆ ಬೀಜ ಕೊಳ್ಳುವ ವಸ್ತು ಆಗಿರಲಿಲ್ಲ. ಈ ವರ್ಷ ಬೆಳೆದ ಬೆಳೆಯಲ್ಲಿ ಉತ್ತಮ ಬೀಜಗಳನ್ನು ಆಯ್ದು (ಬೀಜದ ಕಾಯಿಗಳನ್ನು ಆಯ್ದು) ಶೇಖರಿಸಿಟ್ಟುಕೊಂಡು ಮುಂದಿನ ಬೆಳೆಗೆ ಬಳಸುತ್ತಿದ್ದದ್ದು ವಾಡಿಕೆ. ಈಗಲೂ ಕೋಟ್ಯಂತರ ರೈತರು ಅದೇ ಕ್ರಮ ಅನುಸರಿಸುತ್ತಿದ್ದಾರಾದರೂ ಹಸಿರು ಕ್ರಾಂತಿಯ ನೆಪವಾಗಿ ಹೈಬ್ರಿಡ್ ಗಳು ಬಂದಾಗಿನಿಂದ ಬೀಜಗಳು ಅಂಗಡಿ ಸರಕಾಗಿದ್ದು ಈಗ ಇತಿಹಾಸ.
ರೈತರಿಗೆ ಬೀಜಗಳನ್ನು ಕೊಳ್ಳುವುದೂ ರೂಢಿಯಾಗಿದೆ. ಕಾರಣಗಳೇನೇ ಇರಲಿ, ರೈತರು ಪ್ರತಿ ವರ್ಷ ಬೀಜಗಳನ್ನು ಕೊಳ್ಳುತ್ತಿರುವುದು ಸುಳ್ಳಲ್ಲ. ಹಾಗಾಗಿ ಇದೊಂದು ದೊಡ್ಡ ಉದ್ಯಮವಾಗಿಯೂ ಬೆಳೆದಿದೆ. ಜಾಗತಿಕ ಮಟ್ಟದಲ್ಲೂ ಭಾರತ ಉತ್ತಮ ಗುಣಮಟ್ಟದ ಬೀಜಗಳನ್ನು ಉತ್ಪಾದಿಸುತ್ತಿದೆ ಎಂಬ ಕೀರ್ತಿಯನ್ನೂ ಪಡೆದಿದೆ. ಅಲ್ಲದೆ ಭಾರತ ಬೀಜ ಉತ್ಪಾದನೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದೆ. 18,000 ಕೋಟಿ ರೂ.ಗಳ ಮೌಲ್ಯದ ಬೀಜೋತ್ಪಾದನಾ ಕ್ಷೇತ್ರವನ್ನು ಭಾರತ ಹೊಂದಿದೆ. ದೇಶದಲ್ಲಿ ಅನೇಕ ಹಳ್ಳಿಗಳು ಬೀಜೋತ್ಪಾದನೆಯಲ್ಲಿಯೇ ತೊಡಗಿವೆ. ಬೀಜೋತ್ಪಾದನೆಯಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತೆಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಮುಂಚೂಣಿಯಲ್ಲಿವೆ.
ಬೀಜೋತ್ಪಾದನೆಯಲ್ಲಿ ಹೆಚ್ಚಿನ ಆದಾಯ
ರೈತರು ವಾಣಿಜ್ಯ ಬೆಳೆಗಳನ್ನು ಬೆಳೆದಾಗ ಸಿಗುವ ಲಾಭಕ್ಕಿಂತ ಬೀಜೋತ್ಪಾದನೆಯಲ್ಲಿ ಹೆಚ್ಚಿನ ಮತ್ತು ಖಾತ್ರಿಯಾದ ಆದಾಯ ಪಡೆಯಲು ಸಾಧ್ಯವಾಗಿದೆ. ಬೀಜ ಕಂಪನಿಗಳು ರೈತರಿಗೆ ಅಗತ್ಯ ಬೀಜಗಳನ್ನು ಒದಗಿಸಿ, ಬೆಳೆಯುವ ತಾಂತ್ರಿಕ ಮಾಹಿತಿಯನ್ನೂ ಒದಗಿಸುವುದರ ಜೊತೆಗೆ ಉತ್ಪಾದನೆಯಾದ ಬೀಜಗಳನ್ನು ತಾವೇ ಕೊಂಡುಕೊಳ್ಳುವುದರಿಂದ ರೈತರಿಗೆ ಖಾತ್ರಿಯಾದ ಆದಾಯ ಸಿಗುತ್ತದೆ. ಹಾಗಾಗಿ ಬ್ಯಾಂಕುಗಳು ಬೀಜೋತ್ಪಾದನೆ ಮಾಡುವ ರೈತರಿಗೆ ಸಾಲ ಕೊಡಲು ಹಿಂಜರಿಯುವುದೂ ಇಲ್ಲ.
300 ಕೋಟಿ ಮೌಲ್ಯದ ಅಕ್ರಮ HT ಹತ್ತಿ ಬೀಜಗಳ ಮಾರಾಟ ಬಟಾಬಯಲು
ಜಾಗತಿಕವಾಗಿ ಬೀಜ ವಹಿವಾಟು 14 ಬಿಲಿಯನ್ ಡಾಲರ್
ಪ್ರಸ್ತುತ ಭಾರತ ಒಂದು ಸಾವಿರ ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಬೀಜಗಳನ್ನು ರಫ್ತು ಮಾಡುತ್ತಿದೆ. ಜಾಗತಿಕವಾಗಿ ವಾರ್ಷಿಕ ಬೀಜ ವಹಿವಾಟು ಸುಮಾರು 14 ಬಿಲಿಯನ್ ಡಾಲರ್ ನಷ್ಟಿದೆ. ಭಾರತ ಇದರಲ್ಲಿ ಕನಿಷ್ಠ ಶೇಕಡಾ 10 ರಷ್ಟು, ಅಂದರೆ 1.4 ಬಿಲಿಯನ್ ಡಾಲರ್ ಅಥವಾ 10,000 ಕೋಟಿ ರೂಗಳಷ್ಟು ತನ್ನ ಪಾಲನ್ನು ಪಡೆಯಬಹುದು. ಇಷ್ಟನ್ನು ಮುಂದಿನ ಎಂಟು ವರ್ಷಗಳಲ್ಲಿ ಸಾಧಿಸಬಹುದಾದ ಅವಕಾಶಗಳು ದೇಶದ ಮುಂದಿದೆ.
ಅವಕಾಶಗಳನ್ನು ಬಳಸಿಕೊಳ್ಳುವ ಮನಸ್ಸು ಮಾಡಬೇಕು
ಭಾರತದ ಬೀಜೋತ್ಪಾದನಾ ಕೈಗಾರಿಕೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ದೇಶದಲ್ಲಿ ವೈವಿಧ್ಯಮಯ ಕೃಷಿ ಪರಿಸರಗಳಿವೆ. (Agro Climatic Conditions). ಬೀಜೋತ್ಪಾದನೆಯಲ್ಲಿ ಪರಿಣತಿ ಇದೆ. ಬೀಜಗಳ ಗುಣಮಟ್ಟ ನಿರ್ವಹಣೆಯಲ್ಲೂ ಸೈ. ಇದೆಲ್ಲಾ ಮಾಡಲು ಬೇಕಾದ ಮೂಲ ಸೌಕರ್ಯಗಳಿಗೂ ಕೊರತೆ ಇಲ್ಲ. ಇದೀಗ ಚಿಲಿ, ಅರ್ಜೆಂಟೈನಾ ಮತ್ತು ದಕ್ಷಿಣ ಆಫ್ರಿಕಾಗಳಂತೆ ಮುಂದಿರುವ ಅವಕಾಶಗಳನ್ನು ಭಾರತವೂ ಬಳಸಿಕೊಳ್ಳುವ ಮನಸ್ಸು ಮಾಡಬೇಕಷ್ಟೇ. ಈ ಮೂರೂ ದೇಶಗಳು ವಿಶ್ವದ ಬೀಜ ವಹಿವಾಟಿನಲ್ಲಿ ಮುಂಚೂಣಿಯಲ್ಲಿವೆ. ಅಗತ್ಯ ಪ್ರಮಾಣದ ಗುಣಮಟ್ಟದ ಬೀಜಗಳನ್ನು ಸಮಯಕ್ಕೆ ತಲುಪಿಸುವ ಕೆಲಸ ಮಾಡುತ್ತಿವೆ.
ಭೂ ಸುಧಾರಣೆ ಸುಗ್ರೀವಾಜ್ಞೆ: ಗಾಂಧಿ ಮಾರ್ಗದಲ್ಲಿ ಚಳವಳಿಗಳು ನಡೆಯಬೇಕು...
ಬೇರೆ ಬೇರೆ ಬೀಜಗಳ ಉತ್ಪಾದನೆಯಲ್ಲಿ ತೊಡಗಬೇಕು
ಭಾರತದ ಬೀಜೋತ್ಪಾದನೆಯೂ ಹೆಚ್ಚು ಮಾಡಿಕೊಳ್ಳಲು ಸಾಧ್ಯವಿದೆ. ಈಗಿರುವ ಭತ್ತ, ಮೆಕ್ಕೆ ಜೋಳ ಮತ್ತು ಕೆಲ ತರಕಾರಿ ಬೀಜಗಳ ಉತ್ಪಾದನೆಯ ಜೊತೆಗೆ ಬೇರೆ ಬೇರೆ ಬೀಜಗಳ ಉತ್ಪಾದನೆಯಲ್ಲೂ ಹೆಚ್ಚಿನ ರೀತಿಯಲ್ಲಿ ತೊಡಗಬೇಕು. ಅಂದಹಾಗೆ ಭಾರತದಲ್ಲಿ ಬಹುತೇಕ ಎಲ್ಲ ರೈತರು ಬಳಸುತ್ತಿರುವುದು ಸ್ಥಳೀಯವಾಗಿ ಉತ್ಪಾದನೆಯಾದ ಬೀಜಗಳನ್ನೇ ಎಂಬುದು ವಿಶೇಷ. ಅಷ್ಟರ ಮಟ್ಟಿಗೆ ಬೀಜಗಳ ವಿಷಯವಾಗಿ ‘ಆತ್ಮ ನಿರ್ಭರ್" ತಂತಾನೇ ಆಗಿ ಬಿಟ್ಟಿದೆ.
(ಮುಂದುವರೆಯುವುದು)