ರಾಸಾಯನಿಕ ಕೀಟನಾಶಕಗಳು ಏಕೆ ಅವಶ್ಯಕ?; ವಿಜ್ಞಾನಿ ಡಾ.ಪಿ.ಚೌಡಪ್ಪ ವಿವರಣೆ
ಭಾರತದಲ್ಲಿ 27 ರಾಸಾಯನಿಕ ಕೀಟನಾಶಕಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಆದೇಶದ ಕರಡನ್ನು ಹಿಂಪಡೆಯಲು ಕಾಸರಗೋಡಿನ ಸಿ.ಪಿ.ಸಿ.ಆರ್.ಐ ನ ಮಾಜಿ ನಿರ್ದೇಶಕರು, ಕನ್ನಡದವರೇ ಆದ ಖ್ಯಾತ ವಿಜ್ಞಾನಿ ಡಾ.ಪಿ.ಚೌಡಪ್ಪ ಕೇಂದ್ರ ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿ ಅನಿಲ್ ಅಗರ್ ವಾಲ್ ಅವರಿಗೆ ಮೊನ್ನೆಯಷ್ಟೇ (10 June) ಪತ್ರ ಬರೆದು ತಾಕೀತು ಮಾಡಿದ್ದಾರೆ.
27 ರಾಸಾಯನಿಕಗಳನ್ನು ನಿಷೇಧಿಸಲು ನೀಡಿರುವ ಕಾರಣಗಳು ಮತ್ತು ಅದರಿಂದ ಕೃಷಿ ಕ್ಷೇತ್ರ ಹಾಗೂ ರೈತರ ಮೇಲಾಗುವ ದುಷ್ಪರಿಣಾಮಗಳ ಕುರಿತು ಕನ್ನಡದ ಖ್ಯಾತ ವಿಜ್ಞಾನಿ ಡಾ.ಪಿ.ಚೌಡಪ್ಪ ಕೇಂದ್ರ ಸರ್ಕಾರಕ್ಕೆ ನೀಡಿರುವ ಮಾಹಿತಿ/ಒಳನೋಟ ಇಲ್ಲಿದೆ.
ಕೀಟನಾಶಕ ನಿಷೇಧಕ್ಕೆ ಸರ್ಕಾರ ನೀಡಿರುವ ಕಾರಣಗಳು...
27 ಕೀಟನಾಶಕಗಳನ್ನು ನಿಷೇಧಿಸಲು ಸರ್ಕಾರ ನೀಡಿರುವ ಕಾರಣಗಳಲ್ಲಿ ಪ್ರಮುಖವಾದವು ಇಂತಿವೆ. 1. ಎಂಡೋಕ್ರಿನ್ ಡಿಸ್ರಪ್ಷನ್ ಪ್ರಾಪರ್ಟೀಸ್, 2. ಇವುಗಳಿಗೆ ಬದಲಿ ರಾಸಾಯನಿಕಗಳು ಲಭ್ಯವಿರುವುದು 3.ಜೀವವೈವಿಧ್ಯಕ್ಕೆ ವಿಷಕಾರಿ ಅಥವಾ 4. ಜೇನು ಹುಳುಗಳಿಗೆ ಅಪಾಯಕಾರಿ ಎಂದು ಹೇಳಲಾಗಿದೆ. ಇದೀಗ ನಿಷೇಧಿತ ರಾಸಾಯನಿಕಗಳಿಗೆ ಪರ್ಯಾಯವಾಗಿ ಸೂಚಿಸುತ್ತಿರುವ ರಾಸಾಯನಿಕಗಳ ಬಗ್ಗೆ ಮೇಲಿನ ಎಲ್ಲಾ ಅಂಶಗಳ ಬಗ್ಗೆ ಮಾಹಿತಿ ಲಭ್ಯವಿದೆಯೇ? ಇತರೆ ದೇಶಗಳ ಅಧ್ಯಯನದ ಆಧಾರದ ಮೇಲೆ ಒಂದು ರಾಸಾಯನಿಕ ನಿಷೇಧಿಸಿರುವ ಉದಾಹರಣೆಯನ್ನು ನಮ್ಮ ದೇಶದಲ್ಲಿ ನಿಷೇಧಿಸಲು ಆಧಾರವಾಗಿ ತೆಗೆದುಕೊಳ್ಳುವುದರ ಜೊತೆಗೆ ಸ್ಥಳೀಯವಾಗಿ ಅವುಗಳ ನಿಷೇಧಕ್ಕೆ ಸಮಂಜಸವಾದ ವೈಜ್ಞಾನಿಕ ಕಾರಣಗಳಿರಬೇಕು. ಇದೀಗ ನಿಷೇಧ ಮಾಡಿರುವ ರಾಸಾಯನಿಕಗಳನ್ನು ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆ ಬಳಸಬಹುದೆಂದೂ ಅದೇ ಆದೇಶದಲ್ಲಿ ಹೇಳಲಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.!
ಕನ್ನಡದ ವಿಜ್ಞಾನಿಯಿಂದ 27 ಕೀಟನಾಶಕಗಳ ಪರ ಬ್ಯಾಟಿಂಗ್...
ಸರ್ಕಾರ ನಿಷೇಧ ಹೇರಿರುವ ಕೀಟನಾಶಕಗಳು
ನಿಷೇಧ ಹೇರಿರುವ ಕೀಟನಾಶಕಗಳ ಪಟ್ಟಿ ಇಂತಿದೆ. 2.4 D, ಅಸಿಫೇಟ್, ಅಟ್ರಾಜಿನ್, ಬೆನ್ಫುರೋಕಾರ್ಬ್, ಬುಟಾಕ್ಲೋರ್, ಕ್ಯಾಪ್ಟಾನ್, ಕಾರ್ಬೆಂಡಿಜಿಮ್, ಕಾರ್ಬೋಫ್ಯೂರಾನ್, ಕ್ಲೋರೋಫೈರಿಫಾಸ್, ಡೆಲ್ಟಾಮೆಥ್ರಿನ್, ಡೈಕೋಫೋಲ್, ಡೈಮೆಥೋಯೇಟ್, ಡಿನೋಕ್ಯಾಪ್, ಡಿಯೂರಾನ್, ಮೆಲಾಥಿಯಾನ್, ಮ್ಯಾಂಕೋಜಿಬ್, ಮೆಥಿಮಿಲ್, ಮಾನೋಕ್ರೊಟೋಫಸ್, ಆಕ್ಸಿಫ್ಲೂರೋಫೆನ್, ಪೆಂಡಿಮೆಥಲಿನ್, ಕ್ವಿನಾಲ್ಫೋಸ್, ಸಲ್ಫೋಸಫ್ಯೂರಾನ್, ಥಿಯೋಡಿಕಾರ್ಬ್, ಥಿಯೋಫನೇಟ್ ಮೆಥಿಲ್, ಥೈರಾಮ್, ಜಿನೆಬ್ ಮತ್ತು ಜಿರಾಮ್. ಇವೆಲ್ಲವನ್ನೂ ನಿಷೇಧಿಸಿರುವ ಹಿನ್ನೆಲೆಯಲ್ಲಿ ಇದೀಗ ಬೆಳೆಗಳಲ್ಲಿ ಕೀಟಗಳ ಬಾಧೆ ಕಂಡುಬಂದಲ್ಲಿ ನಿಯಂತ್ರಣ ಬಹಳ ಕಷ್ಟವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಸರ್ಕಾರ ವೈಜ್ಞಾನಿಕ ತಳಹದಿಯ ಮೇಲೆ ತೀರ್ಮಾನ ಕೈಗೊಳ್ಳಬೇಕು. ಹಲವು ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು.
"ಬೆಳೆ ಉತ್ಪಾದನಾ ವೆಚ್ಚ ಮೂರು ಪಟ್ಟು ಹೆಚ್ಚುತ್ತದೆ"
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ. ಇದೀಗ ಪ್ರಸ್ತುತ ರಾಸಾಯನಿಕಗಳ ನಿಷೇಧವು ರೈತರಿಗೆ ಬೆಳೆ ಉತ್ಪಾದನಾ ವೆಚ್ಚ ಎರಡರಿಂದ ಮೂರು ಪಟ್ಟು ಹೆಚ್ಚಾಗುತ್ತದೆ. ಉದಾಹರಣೆಗೆ, ಈಗ ನಿಷೇಧ ಮಾಡಿರುವ ಮ್ಯಾಂಕೋಜಿಬ್ ಶಿಲೀಂಧ್ರನಾಶಕ ವಿವಿಧ ಕ್ಷೇತ್ರಗಳಲ್ಲಿ (ಬೆಳೆಗಳು ಹಾಗೂ ಕೃಷಿ ಪರಿಸರಗಳಲ್ಲಿ) ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಮತ್ತು ಮಾರುಕಟ್ಟೆಯಲ್ಲಿ 260 ರೂ, 300 ರೂಪಾಯಿಯಲ್ಲಿ ಒಂದು ಎಕರೆಗೆ ಸಿಂಪಡಿಸಬಹುದಾಗಿದೆ. ಜೊತೆಗೆ ಈ ಉತ್ಪನ್ನ 1960 ರಿಂದ ಮಾರುಕಟ್ಟೆಯಲ್ಲಿದೆ. ಇದಕ್ಕೆ ಬದಲಿ ಉತ್ಪನ್ನವಾದ ಹೊಸ ಪೀಳಿಗೆಯ ಉತ್ಪನ್ನ ಇಪ್ರೊವ್ಯಾಲಿಕಾರ್ಬ್ ಮತ್ತು ಪ್ರೋಪಿನೆಬ್ ಕಾಂಬಿನೇಷನ್ ಉತ್ಪನ್ನವು ಒಂದು ಎಕರೆಗೆ ಸಿಂಪರಣೆ ಕೊಡಬೇಕೆಂದರೆ 2000 ರೂ. ಬೇಕಾಗುತ್ತದೆ.
ಬಿಟಿ ಬಗ್ಗೆ ವಕಾಲತ್ತು ವಹಿಸಿರುವ ರೈತ ಮುಖಂಡರ ಆಸ್ತಿ ಲೆಕ್ಕ ಕೇಳಿ!
ಸುಲಭವಾಗಿ ಬೆರೆವ ರಾಸಾಯನಿಕ
ಅಲ್ಲದೆ ಮ್ಯಾಂಕೋಜಿಬ್ ಇನ್ನೂ ಅನೇಕ ಶಿಲೀಂಧ್ರನಾಶಕಗಳ ಜೊತೆಗೆ ಬೆರೆವ ಮಹತ್ವದ ಉತ್ಪನ್ನ. ಉದಾ: ನಾಮಿಡೋನ್+ಮ್ಯಾಂಕೋಜಿಬ್, ಮೆಟಲ್ಯಾಕ್ಸಿಲ್+ಮ್ಯಾಂಕೋಜಿಬ್, ಕಾರ್ಬೆಂಡಿಜಿಮ್+ಮ್ಯಾಂಕೋಜಿಬ್. ಇದೀಗ ನಿಷೇಧಿಸಿರುವ ರಾಸಾಯನಿಕಗಳ ಬದಲಿಗೆ ಪರ್ಯಾಯ ರಾಸಾಯನಿಕಗಳು ತತ್ ಕ್ಷಣದಲ್ಲಿ ಎಲ್ಲೆಡೆ ಲಭ್ಯವಿಲ್ಲ ಮತ್ತು ದುಬಾರಿ ಬೆಲೆ. ಇವುಗಳಲ್ಲಿ ಅನೇಕ ರಾಸಾಯನಿಕಗಳು ನಿರ್ದಿಷ್ಟ ಕ್ಷೇತ್ರ (ಬೆಳೆ/ಪರಿಸರ)ಕ್ಕೆ ನಿಗದಿತವಾಗಿ ಕೆಲಸ ಮಾಡುವಂತಹವು. ರೋಗಕಾರಕಗಳು ಇವುಗಳಿಂದ ನಿರೋಧಕ ಶಕ್ತಿ ಬೆಳೆಸಿಕೊಳ್ಳಬಲ್ಲವು. ನಿಷೇಧಿತ ರಾಸಾಯನಿಕಗಳಿಗೆ ಪರ್ಯಾಯವಾದ ಉತ್ತಮ ಗುಣಮಟ್ಟದ ಉತ್ಪನ್ನಗಳು ಲಭ್ಯವಿಲ್ಲವಾದಲ್ಲಿ ರೈತರು ಬಹಳ ದೊಡ್ಡ ದಂಡ ತೆರೆಬೇಕಾಗುತ್ತದೆ.
"ಕೃಷಿ ಪರಿಸರಗಳಿಗೆ ಹೊಂದಿಕೊಳ್ಳಬಲ್ಲ ರಾಸಾಯನಿಕಗಳ ಅವಶ್ಯಕತೆ ಇದೆ"
ಕೃಷಿ ಯೋಗ್ಯ ಭೂಮಿ ದಿನೇ ದಿನೇ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರೀಕರಣದ ಕಾರಣಗಳಿಗೆ ಇನ್ನೂ ಕಡಿಮೆ ಆಗುವ ಸಂಭವವಿದೆ. ಹೆಚ್ಚುತ್ತಿರುವ ಜನಸಂಖ್ಯೆಯನ್ನಾಧರಿಸಿ ಮುಂದಿನ ದಿನಗಳಲ್ಲಿ ಆಹಾರ ಉತ್ಪನ್ನಗಳ ಉತ್ಪಾದನೆ ಹೆಚ್ಚಾಗಬೇಕಿದೆ. ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳ ಉತ್ಪಾದಕತೆ ಹೆಚ್ಚಿಸಲು ಕಡಿಮೆ ಬೆಲೆಯ, ಹಲವು ಕೃಷಿ ಪರಿಸರಗಳಿಗೆ ಹೊಂದಿಕೊಳ್ಳಬಲ್ಲ ರಾಸಾಯನಿಕಗಳ ಅವಶ್ಯಕತೆ ಇದೆ.
ರೈತರೇ.. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಬೇಡ: ಕೃಷಿ ತಜ್ಞರ ಅಭಿಪ್ರಾಯ
ನಿಷೇಧಿತ ರಾಸಾಯನಿಕಗಳು ಭಾರತೀಯ ಮಾರುಕಟ್ಟೆಯ ಶೇಕಡಾ 18-20ರಷ್ಟಿವೆ. ಕೊರೊನಾ ಸಂಕಷ್ಟದಲ್ಲಿ ಆಹಾರ ಸರಪಳಿಯೂ ಏರುಪೇರಾಗಿದೆ. ಅವಶ್ಯವಿರುವ ರಾಸಾಯನಿಕಗಳ ನಿಷೇಧ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಇಂತಹ ದುರಿತ ಕಾಲದಲ್ಲಿ ಕಡಿಮೆ ಬೆಲೆಯ ರಾಸಾಯನಿಕಗಳ ಮೇಲೆ ನಿಷೇಧ ಹೇರಿರುವುದನ್ನು ಹಿಂಪಡೆಯಿರಿ. ಭಾರತದ ಕೃಷಿ ಹಾಗೂ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಪಾಲುದಾರರ ನಡುವೆ ಸಮಗ್ರ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವುದು ಸಮಂಜಸವೆಂದು ಭಾವಿಸಿದ್ದೇನೆ.