ಕನ್ನಡದ ವಿಜ್ಞಾನಿಯಿಂದ 27 ಕೀಟನಾಶಕಗಳ ಪರ ಬ್ಯಾಟಿಂಗ್…
ಭಾರತದಲ್ಲಿ 27 ರಾಸಾಯನಿಕ ಕೀಟನಾಶಕಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಆದೇಶದ ಕರಡನ್ನು ಹಿಂಪಡೆಯಲು ಕಾಸರಗೋಡಿನ ಸಿ.ಪಿ.ಸಿ.ಆರ್.ಐ ನ ಮಾಜಿ ನಿರ್ದೇಶಕರು, ಕನ್ನಡದವರೇ ಆದ ಖ್ಯಾತ ವಿಜ್ಞಾನಿ ಡಾ.ಪಿ.ಚೌಡಪ್ಪ ಕೇಂದ್ರ ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿ ಅನಿಲ್ ಅಗರ್ ವಾಲ್ ಅವರಿಗೆ ಮೊನ್ನೆಯಷ್ಟೇ (10 June) ಪತ್ರ ಬರೆದು ತಾಕೀತು ಮಾಡಿದ್ದಾರೆ.
Recommended Video
ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಕೀಟನಾಶಕಗಳು, ವಿಶೇಷವಾಗಿ ಶಿಲೀಂಧ್ರನಾಶಕಗಳನ್ನು ನಿಷೇಧಿಸಿ ದುಬಾರಿ ಬೆಲೆಯ ಉತ್ಪನ್ನಗಳನ್ನು ಪರಿಚಯಿಸುವುದರಿಂದ ಯಾವುದೂ ಪ್ರಯೋಜನವಾಗುವುದಿಲ್ಲವೆಂದು ಹೇಳಿದ್ದಾರೆ. ಮ್ಯಾಂಕೋಜಿಬ್ ನಂತಹ ಕಡಿಮೆ ಬೆಲೆಯ ಶಿಲೀಂಧ್ರ ನಾಶಕವನ್ನು ನಿಷೇಧಿಸುವ ಮುಖೇನ ಅದರಿಂದ ತಯಾರಾಗುವ ಅನೇಕ ಉಪಯುಕ್ತ ಉತ್ಪನ್ನಗಳ ಬಳಕೆ ಇಲ್ಲವಾಗಿಸಿದಂತಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಸೂಚಿಸುವ ರಾಸಾಯನಿಕ ಅತ್ಯಂತ ದುಬಾರಿಯಾದದ್ದು ಎಂದಿದ್ದಾರೆ. ಈ ಕುರಿತು ಒನ್ ಇಂಡಿಯಾದೊಂದಿಗೆ ಅವರ ಮಾತು ಇಲ್ಲಿದೆ...
ವಿಜ್ಞಾನಿ ಡಾ.ಪಿ.ಚೌಡಪ್ಪ ಅವರ ಪತ್ರದ ಪೂರ್ಣ ಪಾಠ...
2022ಕ್ಕೆ ರೈತರ ಆದಾಯ ಎರಡುಪಟ್ಟು ಹೆಚ್ಚು ಮಾಡುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರ ಇದೀಗ ನಿಷೇಧ ಹೇರಿರುವ 27 ರಾಸಾಯನಿಕಗಳ ಬಗ್ಗೆ ಮರುಪರಿಶೀಲಿಸಬೇಕೆಂದು ಪತ್ರದೊಂದಿಗೆ ತಾಕೀತು ಮಾಡಿದ್ದಾರೆ.
ಬಿಟಿ ಬಗ್ಗೆ ವಕಾಲತ್ತು ವಹಿಸಿರುವ ರೈತ ಮುಖಂಡರ ಆಸ್ತಿ ಲೆಕ್ಕ ಕೇಳಿ!
ಭಾರತದಲ್ಲಿ ಶೇಕಡಾ 55ಕ್ಕಿಂತ ಹೆಚ್ಚು ಜನರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮೀಣ ಭಾರತದಲ್ಲಿ ಶೇಕಡಾ 70ಕ್ಕಿಂತ ಹೆಚ್ಚಿನ ಜನ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿಯೇ ಬದುಕುತ್ತಿದ್ದಾರೆ. ಒಟ್ಟಾರೆ ರೈತರಲ್ಲಿ 82% ರಷ್ಟು ಮಂದಿ ಸಣ್ಣ ಮತ್ತು ಅತಿ ಸಣ್ಣ ರೈತರೇ ಇದ್ದಾರೆ. 1960ರ ದಶಕದ ಕೊನೆಗೆ ಕೃಷಿಯಲ್ಲಿ ರಸಗೊಬ್ಬರ, ಹೆಚ್ಚು ಇಳುವರಿ ಕೊಡುವ ಹೈಬ್ರಿಡ್ ಗಳು, ವಿದ್ಯುತ್ ಹಾಗೂ ನೀರಾವರಿಗೆ ಸಹಾಯಧನ ಹೆಚ್ಚಾಗಿ ದೊರೆಯುತ್ತಾ ಸಾಗಿತು. ಇದರ ಪರಿಣಾಮ ಆಹಾರ ಉತ್ಪಾದನೆ ಹೆಚ್ಚಾಯಿತು. 1970ರ ದಶಕದ ಅಂತ್ಯಕ್ಕೆ ದೇಶ ಆಹಾರ ಭದ್ರತೆಯನ್ನು ಸಾಧಿಸಿತು. 2019-20 ರ ಅವಧಿಯಲ್ಲಿ ಭಾರತ 291.95 ಮಿಲಿಯನ್ ಟನ್ ಆಹಾರ ಉತ್ಪಾದಿಸಿದೆ. ತೋಟಗಾರಿಕಾ ಬೆಳೆಗಳಲ್ಲಿ 313.35 ಮಿಲಿಯನ್ ಟನ್ ಉತ್ಪಾದನೆಯಾಗಿದೆ...
ಉತ್ಪಾದನೆಯಲ್ಲಿ 20 ರಿಂದ 25%ರಷ್ಟು ಬೆಳೆ ನಷ್ಟ
2050ನೇ ಇಸವಿಯಷ್ಟರಲ್ಲಿ ಭಾರತದ ಜನಸಂಖ್ಯೆ 1.5 ಬಿಲಿಯನ್ ಮುಟ್ಟಿರುತ್ತದೆ. ಇದೀಗ (1.3 ಬಿಲಿಯನ್). ಭಾರತದ ಒಟ್ಟಾರೆ ಆಹಾರ ಉತ್ಪಾದನೆ ಈಗಿರುವುದರ ಮೇಲೆ ಶೇಕಡಾ 25 ರಿಂದ 70ರ ಅಂತರದಲ್ಲಿ ಯಾವುದೋ ಒಂದು ಮೊತ್ತಕ್ಕೆ ಹೆಚ್ಚಿಸಬೇಕಿದೆ. ಆದರೆ ನೀರಿನ ಕೊರತೆ, ಮಣ್ಣಿನ ಆರೋಗ್ಯ ಕ್ಷೀಣವಾಗುತ್ತಿರುವುದು, ಕೃಷಿ ಕೆಲಸಗಾರರು ಕಡಿಮೆ ಆಗುತ್ತಿರುವುದು, ಬೆಳೆಗಳಿಗೆ ಕೀಟ ರೋಗಗಳ ಹಾವಳಿಯಿಂದ ಉತ್ಪಾದನೆ ಕುಂಠಿತವಾಗುತ್ತಿದೆ.
ಕೀಟ, ರೋಗ ಮತ್ತು ಕಳೆಯಿಂದಾಗಿ ಒಟ್ಟಾರೆ ಉತ್ಪಾದನೆಯ ಶೇಕಡಾ 20 ರಿಂದ 25ರಷ್ಟು ಬೆಳೆ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ವಾರ್ಷಿಕ ಸರಾಸರಿ ಶೇಕಡಾ 20ರಷ್ಟು ಬೆಳೆ ನಷ್ಟವಾಯಿತೆಂದರೂ 1,40,000 ಕೋಟಿ ರೂಪಾಯಿ ಮೌಲ್ಯದ ಬೆಳೆ ಕೈತಪ್ಪಿ ಹೋಗುತ್ತಿದೆ. ಪ್ರತಿ ವರ್ಷ ಸುಮಾರು 65 ಮಿಲಿಯನ್ ಟನ್ ಆಹಾರ ಬೆಳೆಗಳು ಮತ್ತು 69 ಮಿಲಿಯನ್ ಟನ್ ತೋಟಗಾರಿಕಾ ಉತ್ಪನ್ನಗಳು ಕೀಟ ರೋಗ ಮತ್ತು ಕಳೆಯಿಂದ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಸಮಗ್ರ ಬೇಸಾಯ ಪದ್ಧತಿ ಅನುಸರಿಸಲು ಕೃಷಿ ವಿಜ್ಞಾನಿಗಳ ತಾಕೀತು
ಕೃಷಿ ವಿಜ್ಞಾನಿಗಳು ರೈತರಿಗೆ ಸಮಗ್ರ ಬೇಸಾಯ ಪದ್ಧತಿಗಳನ್ನು ಅನುಸರಿಸಲು ತಾಕೀತು ಮಾಡುತ್ತಾರೆ. ಬೆಳೆಗಳಿಗೆ ಕೀಟ ರೋಗಗಳ ಹೊಡೆತ ಕಡಿಮೆ ಮಾಡಲು, ಉತ್ಪಾದಕತೆ ಹೆಚ್ಚಿಸಲು ಬೇಕಾದ ನಿರ್ವಹಣಾ ಕ್ರಮಗಳು, ಅದರಲ್ಲೂ ಮನುಷ್ಯರು ಹಾಗೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡದಂತಹ ಪರಿಕರಗಳನ್ನೇ ಬಳಸಲು ತಿಳಿಸುತ್ತಾರೆ.
ರೈತರೇ.. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಬೇಡ: ಕೃಷಿ ತಜ್ಞರ ಅಭಿಪ್ರಾಯ
ಯಾವ ಪರಿಸ್ಥಿತಿಯಲ್ಲಿ ರಾಸಾಯನಿಕಗಳ ಬಳಕೆ ಮಾಡದೆ ಇರಲು ಸಾಧ್ಯವಿಲ್ಲವೋ ಅಂತಹ ಕಡೆ ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ಹೆಚ್ಚು ಪರಿಣಾಮಕಾರಿಯಾದ ಮತ್ತು ಮನುಷ್ಯರಿಗೆ, ಪ್ರಾಣಿ ಪಕ್ಷಿಗಳಿಗೆ, ಪರಿಸರಕ್ಕೆ ಅತ್ಯಂತ ಕಡಿಮೆ ಟಾಕ್ಸಿಕ್ (ವಿಷಕಾರಿ)ಆದ ಮತ್ತು ಕಡಿಮೆ ಬೆಲೆಯ ಕೀಟನಾಶಕಗಳನ್ನು ಸಿಂಪಡಿಸಲು ಸೂಚಿಸಲಾಗುತ್ತದೆ. ಭಾರತದಲ್ಲಿ ಪ್ರತಿ ಹೆಕ್ಟೇರ್ ಗೆ 0.29 ಕೆ.ಜಿ ಬಳಸಲಾಗುತ್ತಿದೆ. ಇತರೆ ದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇದು. ಚೈನಾ ದಲ್ಲಿ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 13.6 ಕೆ.ಜಿ, ಜಪಾನ್ ನಲ್ಲಿ 11.85 ಕೆ.ಜಿ. ಬ್ರೆಜಿಲ್ ನಲ್ಲಿ 4.57 ಕೆ.ಜಿ ಕೀಟನಾಶಕಗಳನ್ನು ಬಳಸಲಾಗುತ್ತಿದೆ.
ಅನುಮೋದನೆ ಪಡೆದ ಕೀಟನಾಶಕಗಳ ಬಳಕೆ
ಕೀಟನಾಶಕಗಳು ಸೆಂಟ್ರಲ್ ಇನ್ಸೆಕ್ಟಿಸೈಡ್ಸ್ ಬೋರ್ಡ್ ಅಂಡ್ ರಿಜಿಸ್ಟ್ರೇಷನ್ ಕಮಿಟಿ (CIBRC) ಯಿಂದ ಅನುಮೋದನೆ ಪಡೆದಿರುತ್ತವೆ. ಅನುಮೋದನೆಗೂ ಮುನ್ನ ಅವುಗಳ ರಾಸಾಯನಿಕ ಅಂಶಗಳು, ವಿಷಕಾರಕ ಅಂಶ ಮತ್ತು ಸಾಮರ್ಥ್ಯಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಲಾಗಿರುತ್ತದೆ. ಭಾರತದಲ್ಲಿ ಸುಮಾರು 295 ಕೀಟನಾಶಗಳು CIBRC ಅಡಿ ರಿಜಿಸ್ಟರ್ ಆಗಿವೆ. ಅದರಲ್ಲಿ ಬಳಸಲು ನಿಷೇಧಿಸಲಾಗಿರುವ, ಉತ್ಪಾದನೆ ನಿಲ್ಲಿಸಿರುವ, ಹಳತಾಗಿರುವವನ್ನು ಹೊರತುಪಡಿಸಿ ಸಾಮಾನ್ಯವಾಗಿ 100 ಕೀಟನಾಶಕಗಳು ಎಲ್ಲೆಡೆ ಬಳಕೆಯಲ್ಲಿವೆ. ಇಡೀ ವಿಶ್ವದಲ್ಲೇ ಅತಿ ಕಡಿಮೆ ಕೀಟನಾಶಕಗಳು ರಿಜಿಸ್ಟರ್ ಆಗಿರುವುದು ಭಾರತದಲ್ಲಿ. ಅಮೆರಿಕಾ 632, ಚೀನಾ 672.
ಮುಂಗಾರು ಆರಂಭ; ರೈತರ ನೆರವಿಗೆ ಬಂದ ಕೇಂದ್ರ ಸರ್ಕಾರ
ಇದೀಗ ಭಾರತದಲ್ಲಿ ನಿಷೇಧಿಸಿರುವ 27 ರಾಸಾಯನಿಕಗಳಲ್ಲಿ 12 ಕೀಟನಾಶಕಗಳು, 7 ಕಳೆನಾಶಕಗಳು, 8 ಶಿಲೀಂಧ್ರನಾಶಕಗಳಿವೆ. ಈಗ ದೇಶದಲ್ಲಿ ನಿಷೇಧಿಸಿರುವ ಕೀಟನಾಶಕಗಳ ಪೈಕಿ ಒಂದು ರಾಸಾಯನಿಕ ಯಾವುದೇ ದೇಶದಲ್ಲಿ ನಿಷೇಧಿಸಲಾಗಿಲ್ಲ, 12 ಕೀಟನಾಶಕಗಳು 1 ರಿಂದ 3 ದೇಶಗಳಲ್ಲಿ ನಿಷೇಧಿಸಲಾಗಿದೆ ಎಂದು ತೋರಿಸಿದ್ದಾರೆ. ಮತ್ತೊಂದು 6 ದೇಶಗಳಲ್ಲಿ, ಇನ್ನುಳಿದ 11, 27-37 ದೇಶಗಳಲ್ಲಿ ನಿಷೇಧ ಹೇರಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.
(ನಿಷೇಧದ ಕರಡಿನಲ್ಲಿ ಏನೆಲ್ಲಾ ಇದೆ ಎಂಬುದನ್ನು ಮುಂದಿನ ಕಂತಿನಲ್ಲಿ ನೋಡೋಣ)- ಮುಂದುವರೆಯುವುದು