ರೈತ ಚಳವಳಿ: ಜೂ.26ರಂದು “ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ” ಆಂದೋಲನ
ಬೆವರು- ರಕ್ತ ಬಸಿದು ಬೆಳೆವ ರೈತರಿಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲವೆಂಬ ಕೂಗು ಪ್ರತಿನಿತ್ಯ ದೇಶದುದ್ದಗಲಕ್ಕೂ ಕೇಳಿಬರುತ್ತಿದೆ. ಬೆಳೆ ವೈವಿಧ್ಯತೆಯ ಅಗತ್ಯವಿರುವ ಪಂಜಾಬ್ ರಾಜ್ಯದಲ್ಲಿ ಜೋಳ ಬೆಳೆವ ರೈತರಿಗೆ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆಯ ಕಾಲು ಭಾಗದಷ್ಟು ಮಾತ್ರ ಸಿಗುತ್ತಿದೆ.
ಆಂಧ್ರಪ್ರದೇಶದ ಮಾವು ಬೆಳೆಗಾರರು ಬೀದಿಗೆ ಬಿದ್ದಿದ್ದಾರೆ, ಬೆಲೆಗಾಗಿ ಹೋರಾಟ ನಡೆಸಿದ್ದಾರೆ. ಮಹಾರಾಷ್ಟ್ರದ ಹಾಲು ಉತ್ಪಾದಕರೂ ರಾಜ್ಯದಾದ್ಯಂತ ಚಳವಳಿಯಲ್ಲಿ ತೊಡಗಿದ್ದಾರೆ. ತೆಲಂಗಾಣದ ಹತ್ತಿ ಬೀಜೋತ್ಪಾದಕ ರೈತರ ಬವಣೆಯೂ ಇದಕ್ಕಿಂತ ಏನೂ ಭಿನ್ನವಾಗಿಲ್ಲ.
ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ; ದೇಶವ್ಯಾಪಿ ಚಳವಳಿಗೆ ತಯಾರಿ
ತೆಲಂಗಾಣದಲ್ಲಿ ಜೋಳ ಬೆಳೆದ ರೈತರು ಕೋರ್ಟ್ ಆದೇಶದಂತೆ ಸರ್ಕಾರ ಕೊಳ್ಳಲು ಮುಂದಾಗುವ ಮುನ್ನವೇ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆಗೆ ಮಾರಾಟ ಮಾಡಿದ್ದಾರೆ. ಇದೀಗ ಪರಿಹಾರ ಕೋರುತ್ತಿದ್ದಾರೆ. ಒಡಿಶಾದಲ್ಲಿ ಭತ್ತ ಕೊಳ್ಳುತ್ತಿರುವುದು ತೀರಾ ಕಡಿಮೆ ಇರುವುದರಿಂದ ಅಲ್ಲಿಯೂ ಹೋರಾಟ ನಡೆದಿದೆ.
ಪ್ರತಿ ಕೊಯ್ಲಿನ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳಲ್ಲೂ ಎಲ್ಲಾ ಬೆಳೆಗಳಿಗೂ ಎಲ್ಲಾ ರೈತರ ನಡುವೆಯೂ ಇದೇ ಕಥೆ ಮುಂದುವರೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗಲೂ ಸರ್ಕಾರವು ಸಿ2+50 ಬೆಂಬಲ ಬೆಲೆ ನಿಗದಿ ಮಾಡಲೇ ಇಲ್ಲ. ಸರ್ಕಾರ ಮಾತ್ರ ರೈತರ ಆದಾಯ ದ್ವಿಗುಣ ಮಾಡುವುದಾಗಿ ಪದೇ ಪದೇ ಹೇಳುತ್ತಲೇ ಇದೆ.
ರೈತರು ಬೆಳೆದ ಉತ್ಪನ್ನಗಳಿಗೆ ಖಾತ್ರಿಯಾದ ಲಾಭದಾಯಕ ಬೆಲೆ ಸಿಗುವ ತನಕ ಆದಾಯ ದ್ವಿಗುಣಗೊಳ್ಳುವುದು ಸಾಧ್ಯವಿಲ್ಲ. ಹಾಗಾಗಿ ಈಗ ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿ ದೇಶದ ಎಲ್ಲಾ ರೈತರಿಗೂ ಲಾಭದಾಯಕ ಬೆಲೆ ಸಿಗುವ ತನಕ ಮತ್ತು ಮೂರು ಕರಾಳ ಕೃಷಿ ಕಾನೂನುಗಳನ್ನು ಹಿಂಪಡೆಯುವತನಕ ಮುಂದುವರೆಯಲಿದೆ.
ಭಾರತದ ಅನೇಕ ರಾಜ್ಯಗಳಲ್ಲಿ ಜೂನ್ 26ನೇ ತೇದಿಯಂದು "ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ" ಘೋಷಣೆಯೊಂದಿಗಿನ ಆಂದೋಲನಕ್ಕೆ ತಯಾರಿ ನಡೆದಿದೆ. ರೈತರು ಆಯಾ ರಾಜ್ಯದ ರಾಜ್ಯಪಾಲರ ಕಚೇರಿಗಳಿಗೆ ಜಾಥಾ ಮೂಲಕ ತಲುಪಲಿದ್ದಾರೆ. ರಾಷ್ಟ್ರಪತಿಗಳಿಗೆ ತಮ್ಮ ಹಕ್ಕೋತ್ತಾಯ ಪತ್ರ/ ಬೇಡಿಕೆ ಪತ್ರವನ್ನು ರಾಜ್ಯಪಾಲರ ಮೂಲಕ ತಲುಪಿಸಲಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ರಾಜ್ಯದಲ್ಲಿ ಶೇ.60- 65ರಷ್ಟು ಭತ್ತ ನಾಟಿಯ ಕೆಲಸ ಮುಗಿದಿದೆ. ಹೆಚ್ಚೆಚ್ಚು ರೈತರು ದಿಲ್ಲಿಯ ಚಳವಳಿಗೆ ಬಂದು ಸೇರುತ್ತಿದ್ದಾರೆ. ನಿನ್ನೆ ಬಿ.ಕೆ.ಯು ಯಿಂದ ಸಾವಿರಾರು ರೈತರು ಗಾಜೀಪುರ್ ಗಡಿ ಸೇರಿದ್ದಾರೆ.
ಸ್ಥಳೀಯರು ಚಳುವಳಿನಿರತ ರೈತರಿಗೆ ಹಾಲು ತರಕಾರಿಗಳನ್ನು ಕೊಡುವುದರ ಮೂಲಕ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ವರದಿಯಾದಂತೆ ಸುಮಾರು 50 ಟ್ರಾಲಿ ಲೋಡ್ಗಳಷ್ಟು ಗೋಧಿಯನ್ನು ಈ ಗ್ರಾಮಸ್ಥರು ದೇಣಿಗೆ ನೀಡಿದ್ದಾರೆ. ಚಳವಳಿ ಮುಂದುವರೆಯುತ್ತಿದೆ, ಗಟ್ಟಿಗೊಳ್ಳುತ್ತಿದೆ. ಬೇಡಿಕೆಗಳು ಈಡೇರುವವರೆಗೂ ನಿತ್ಯ ಜಾರಿಯಲ್ಲಿರುತ್ತದೆ.