ನಮ್ಮ ಅವಶ್ಯಕತೆಗಾಗಿ ಇಲ್ಲಿವರೆಗೂ ಬಂದಿದ್ದೇವೆ; ಕ್ಷಮೆ ಯಾಚಿಸಿದ ರೈತ ಸಂಘ
ನವದೆಹಲಿ, ಡಿಸೆಂಬರ್ 14: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟ 19ನೇ ದಿನಕ್ಕೆ ತಲುಪಿದೆ. ತಮ್ಮ ಹೋರಾಟದ ಭಾಗವಾಗಿ ಇಂದು ರೈತರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ದೆಹಲಿಯ ಗಡಿಯಲ್ಲಿ ಸುಮಾರು 40ಕ್ಕೂ ಹೆಚ್ಚು ರೈತ ಸಂಘಟನೆಗಳು ಹೆದ್ದಾರಿ ತಡೆದು ಧರಣಿ ನಡೆಸುತ್ತಿವೆ.
ಹೋರಾಟದಿಂದಾಗಿ ಸಾರ್ವಜನಿಕರ ದಿನನಿತ್ಯದ ಬದುಕಿಗೆ ಸಮಸ್ಯೆಯಾಗುತ್ತಿರುವುದಕ್ಕೆ ರೈತ ಸಂಘ ಕ್ಷಮೆ ಯಾಚಿಸಿದೆ. ಸಂಯುಕ್ತ ಕಿಸಾನ್ ಮೋರ್ಚಾ ಸಂಘವು ಕರಪತ್ರ ಹಂಚುವ ಮೂಲಕ ಜನರಲ್ಲಿ ಕ್ಷಮೆ ಯಾಚಿಸಿದೆ.
ರೈತರ ಪ್ರತಿಭಟನೆ ಬೆಂಬಲಿಸಿ ಪಂಜಾಬ್ ಡಿಐಜಿ ರಾಜೀನಾಮೆ
ಕರಪತ್ರದಲ್ಲಿ, "ನಾವು ರೈತರು. ನಮ್ಮನ್ನು ಅನ್ನದಾತರು ಎಂದು ಕರೆಯುತ್ತಾರೆ. ಪ್ರಧಾನಿ ಮೋದಿಯವರು, ತಮಗೆ ಈ ಮೂರು ಕೃಷಿ ಕಾಯ್ದೆಗಳನ್ನು ಕೊಡುಗೆಯಂತೆ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ ಇದು ಕೊಡುಗೆಯಲ್ಲ, ಶಿಕ್ಷೆ. ನೀವು ನಮಗೆ ಕೊಡುಗೆ ನೀಡಬೇಕು ಎಂದಿದ್ದರೆ, ನಮ್ಮ ಬೆಳೆಗಳಿಗೆ ಸೂಕ್ತ ಬೆಲೆಯ ಭರವಸೆ ಕೊಡಿ ಸಾಕು" ಎಂದು ಬರೆದಿದ್ದಾರೆ.
"ರಸ್ತೆಗಳನ್ನು ತಡೆದು, ಸಾರ್ವಜನಿಕರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ನಮ್ಮ ಅವಶ್ಯಕತೆಗಳಿಗಾಗಿ ನಾವು ಇಲ್ಲಿ ಕುಳಿತಿದ್ದೇವೆ. ನಿಮಗೆ ನಮ್ಮ ಈ ಹೋರಾಟ ಬೇಸರ, ನೋವು ತರಿಸುತ್ತಿದ್ದರೆ, ನಿಮ್ಮ ಮುಂದೆ ನಾವು ಕೈ ಕಟ್ಟಿ ಕ್ಷಮೆ ಯಾಚಿಸುತ್ತಿದ್ದೇವೆ" ಎಂದು ಬರೆಯಲಾಗಿದೆ.
"ನಮಗೆ ದಾನ ಬೇಡ, ಬೆಲೆ ಬೇಕು. ಇದೊಂದೇ ಬೇಡಿಕೆಯೊಂದಿಗೆ ದೆಹಲಿವರೆಗೂ ಬಂದಿದ್ದೇವೆ. ನಮ್ಮ ಉದ್ದೇಶವನ್ನು ಪ್ರಧಾನಿಯವರಿಗೆ ತಿಳಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮೊಂದಿಗೆ ಮಾತನಾಡುವಂತೆ ಸರ್ಕಾರ ನಟಿಸುತ್ತಿದೆ. ಆದರೆ ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ನಿಮ್ಮಲ್ಲಿ ರೋಗಿಗಳಿದ್ದು, ತುರ್ತು ಚಿಕಿತ್ಸೆ ಅವಶ್ಯಕವಿದ್ದರೆ, ಹಿರಿಯರಿಗೆ ತೊಂದರೆಯಿದ್ದರೆ, ಆಂಬುಲೆನ್ಸ್ ಗೆ ನಮ್ಮಿಂದ ತಡೆಯಾಗುತ್ತಿದ್ರೆ ತಕ್ಷಣವೇ ನಮಗೆ ತಿಳಿಸಿ. ನಿಮ್ಮ ಸಹಾಯಕ್ಕೆ ನಾವು ನಿಲ್ಲುತ್ತೇವೆ" ಎಂದು ಕರಪತ್ರದಲ್ಲಿ ತಿಳಿಸಿದ್ದಾರೆ.