ಫೆಬ್ರವರಿ 6ರಂದು ರೈತರಿಂದ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ರಸ್ತೆ ತಡೆ
ಬೆಂಗಳೂರು, ಫೆ. 4: ದೆಹಲಿಯಲ್ಲಿ ಹೋರಾಟ ನಿರತ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳನ್ನು ''ಸಂಯುಕ್ತ ಹೋರಾಟ-ಕರ್ನಾಟಕ'' ಖಂಡಿಸಿದೆ ಹಾಗು ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಕೇಂದ್ರದ ಬಜೆಟ್ನ್ನು ವಿರೋಧಿಸಿ ಫೆಬ್ರವರಿ 6, 2021 ರಂದು ರಾಜ್ಯಾದ್ಯಂತ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ರಸ್ತೆ ತಡೆ ಚಳುವಳಿಗೆ ಕರೆ ನೀಡಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಸಂಬಂಧಿತ ಕಾನೂನುಗಳನ್ನು ರದ್ದು ಮಾಡಬೇಕು, ವಿದ್ಯುತ್ ಮಸೂದೆ-2020 ನ್ನು ವಾಪಸು ಪಡೆಯಬೇಕು ಹಾಗು ಎಲ್ಲಾ ಕೃಷಿ ಉತ್ಪನ್ನಗಳಿಗೆ ಡಾ|| ಎಂ.ಎಸ್. ಸ್ವಾಮಿನಾಥನ್ ವರದಿ ಅನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾನೂನನ್ನು ರಚಿಸಬೇಕೆಂದು ಆಗ್ರಹಿಸಲಾಗಿದೆ. ಕಳೆದ ಎರಡು ತಿಂಗಳಿಗೂ ಮೀರಿ ಶಾಂತಯುತವಾಗಿ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ಲಕ್ಷಾಂತರ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಲಾಗಿದೆ.
ಕೃಷಿ ಕ್ಷೇತ್ರ, ರೈತ ಕಲ್ಯಾಣಕ್ಕಾಗಿ ಬಜೆಟ್ ಘೋಷಿಸಿದ 9 ಕ್ರಮಗಳು
ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಕೇಂದ್ರ ಬಜೆಟನ್ನು ವಿರೋಧಿಸಿ ಫೆಬ್ರವರಿ 6, 2021 ರಂದು ರಾಜ್ಯದ ಎಲ್ಲಾ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು, ತಾಲ್ಲೂಕ/ಜಿಲ್ಲಾ ಕೇಂದ್ರಗಳಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ರಸ್ತೆ ತಡೆ ಚಳುವಳಿಯನ್ನು ಸಂಘಟಿಸಲು "ಸಂಯುಕ್ತ ಹೋರಾಟ-ಕರ್ನಾಟಕ" ನಿರ್ಧರಿಸಿದೆ.
ರೈತನ ವಿನೂತನ "ಗೋಟ್ ಬ್ಯಾಂಕ್"; ಒಂದು ಮೇಕೆ ಸಾಲ ತಗೊಳ್ಳಿ, 4 ಮರಿ ವಾಪಸ್ ಮಾಡಿ...
ಈ ರೈತ ಪರ ಹೋರಾಟದಲ್ಲಿ ರಾಜ್ಯದ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರು ಹಾಗು ಎಲ್ಲಾ ದೇಶ ಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಮಿತಿ ಸಂಯೋಜಕರಾದ ಬಡಗಲಪುರ ನಾಗೇಂದ್ರ ಕೋರಿದ್ದಾರೆ.
ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡಲಿ
ದೇಶದ ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ ಹಾಗು ವಿದ್ಯುತ್ ಕ್ಷೇತ್ರವನ್ನು ಜಗತ್ತಿನ ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯಲು ಹೊರಟಿರುವ ಕೇಂದ್ರ ಸರ್ಕಾರದ ಕಾನೂನುಗಳನ್ನು ಕೈ ಬಿಡಬೇಕು ಹಾಗು ಎಲ್ಲಾ ಕೃಷಿ ಉತ್ಪನ್ನಗಳಿಗೆ ಡಾ|| ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾನೂನನ್ನು ರೂಪಿಸಬೇಕೆಂಬ ಅತ್ಯಂತ ನ್ಯಾಯಯುತ ಬೇಡಿಕೆಗಳನ್ನು ಆಗ್ರಹಿಸಿ ಲಕ್ಷಾಂತರ ರೈತರು ಅತ್ಯಂತ ಶಾಂತಿಯುತ ಹೋರಾಟವನ್ನು ಆರಂಭ ಮಾಡಿ ಎರಡು ತಿಂಗಳು ಆಗಿದೆ.
ಈ ಚಾರಿತ್ರಿಕ ರೈತ ಹೋರಾಟದ ಬೇಡಿಕೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸಬೇಕಾದ ಕೇಂದ್ರ ಸರ್ಕಾರ, ಆರಂಭದಿಂದಲೂ ಹೋರಾಟ ನಡೆಸುತ್ತಿರುವವರು ರೈತರೇ ಅಲ್ಲ, ರೈತರು ಜೊತೆಗೆ ಭಯೋತ್ಪಾದಕರು ಸೇರಿಕೊಂಡಿದ್ದಾರೆ. ಇವರು ಚೀನಾ, ಪಾಕಿಸ್ತಾನಿ ಏಜೆಂಟರು. ಇತ್ಯಾದಿ ಇತ್ಯಾದಿ ಅಪಪ್ರಚಾರಗಳನ್ನು ಹರಿಯಬಿಟ್ಟಿತು. ಕಾರ್ಪೊರೇಟ್ ಕಂಪನಿಗಳ ನಿಯಂತ್ರಣದ ಬಹುತೇಕ ಮಾಧ್ಯಮಗಳು ಈ ಕೆಲಸದಲ್ಲಿ ತೊಡಗಿಕೊಂಡವು.
ಸಾಲದಂತೆ ಪೊಲೀಸ್ ಲಾಠಿ ಚಾರ್ಜ್, ಜಲ ಪಿರಂಗಿಗಳ ಪ್ರಯೋಗವೂ ನಡೆಯಿತು. ಇದ್ಯಾವುದಕ್ಕೂ ರೈತರು ಬಗ್ಗಲ್ಲಿಲ ಮಾತ್ರವಲ್ಲ ತಮ್ಮ ಹೋರಾಟವನ್ನು ಮತ್ತಷ್ಟು ವ್ಯಾಪಕಗೊಳಿಸಿದರು.
ರೈತರ ಜೊತೆಗಿನ ಮಾತುಕತೆಯ ನಾಟಕ ಬಿಡಿ
ನಮ್ಮ ರಾಜ್ಯದಿಂದಲೂ ನೂರಾರು ರೈತರು ಹೋರಾಟದಲ್ಲಿ ಭಾಗವಹಿಸಿದರು. 8-10 ಸುತ್ತಿನ ರೈತರ ಜೊತೆಗಿನ ಮಾತುಕತೆಯ ನಾಟಕ, ಸುಪ್ರೀಂ ಕೋರ್ಟ್ನ ತೀರ್ಪುನ ಬಳಕೆಗೆ ಪ್ರಯತ್ನ, ಇತ್ಯಾದಿ ಪ್ರಯತ್ನಗಳಿಂದ ರೈತ ಚಳುವಳಿಯನ್ನು ದುರ್ಬಲಗೊಳಿಸಲು ಸಾಧ್ಯವಾಗದೇ ಹತಾಶೆಯಿಂದ ಕೇಂದ್ರ ಸರ್ಕಾರ ಈಗ ಕಳೆದ ಒಂದು ವಾರದಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ಲಕ್ಷಾಂತರ ರೈತರು ಉಳಿದಿರುವ ಕಡೆ ಜಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ, ಕುಡಿಯುವ ನೀರಿನ ಕಡಿತ, ಇಂಟರ್ನೆಟ್ ಸೇವೆ ಸ್ಥಗಿತ, ಕೊನೆಗೆ ರೈತರ ಸುತ್ತಲೂ ಮುಳ್ಳು ತಂತಿಗಳು, ಸಿಮೆಂಟ್ ತಡೆಗೋಡೆಗಳನ್ನು ಕಟ್ಟಿ ರೈತ ಹೋರಾಟದ ಕೇಂದ್ರಗಳನ್ನು ಬಯಲು ಬಂದಿಖಾನೆಗಳಾಗಿ ಪರಿವರ್ತಿಸುತ್ತಿದ್ದಾರೆ.
ಕೇಂದ್ರದ ಎದೆಯಲ್ಲಿ ಭಯ: ರೈತರ ಬೆದರಿಸಲು ಶೌಚಾಲಯ, ನೀರು, ವಿದ್ಯುತ್ ವ್ಯತ್ಯಯ!?
ಪ್ರಜಾಪ್ರಭುತ್ವ ವಿರೋಧಿ ಕ್ರಮ ಅನುಸರಿಸಿರುವ ಕೇಂದ್ರ
ಈ ಎಲ್ಲಾ ಕ್ರಮಗಳು ಅತ್ಯಂತ ಪ್ರಜಾಪ್ರಭುತ್ವ ವಿರೋಧಿ. ಫ್ಯಾಸಿಷ್ಟ್ ಕ್ರಮಗಳಾಗಿವೆ. ಕೇಂದ್ರ ಸರ್ಕಾರದ ಈ ಕ್ರಮಗಳನ್ನು ಸಂಯುಕ್ತ ಹೋರಾಟ-ಕರ್ನಾಟಕ ಉಗ್ರವಾಗಿ ಖಂಡಿಸುತ್ತದೆ ಮತ್ತು ಕೂಡಲೇ ಈ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಕೈ ಬಿಟ್ಟ, ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತೇವೆ.
ರೈತ ವಿರೋಧಿ-ಕಾರ್ಪೊರೇಟ್ ಕಂಪನಿಗಳ ಪರವಾದ ಕೇಂದ್ರದ ಬಜೆಟ್ - ಸಂಯುಕ್ತ ಹೋರಾಟ-ಕರ್ನಾಟಕ ಖಂಡನೆ: ಕೃಷಿ ಬಿಕ್ಕಟ್ಟು, ಕೊರೋನಾ ರೋಗ, ಲಾಕ್ಡೌನ್ ಇತ್ಯಾದಿ ಕಾರಣಗಳಿಂದ ದೇಶದ ರೈತರು, ಗ್ರಾಮೀಣಾ ಜನತೆ ತೀರ ಗಂಭೀರವಾದ ಪರಿಸ್ಥಿತಿಯಲ್ಲಿ ಜೀವನ ನಡೆಯುತ್ತಿದ್ದಾರೆ. ರೈತಾಪಿ ಕೃಷಿಯನ್ನು ಬಲಪಡಿಸುವುದಕ್ಕೆ ಬಜೆಟ್ನಲ್ಲಿ ಹೆಚ್ಚು ಒತ್ತು ಸಿಗಬೇಕಿರುವುದು ಸಹಜ.
ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳುಗಳಿಮದ ದಿಲ್ಲಿ ಗಡಿಗಳಲ್ಲಿ, ದೇಶವ್ಯಾಪಿ ಅನೇಕ ರೈತ ಹೋರಾಟಗಳು ನಡೆದಿವೆ. ಮುಖ್ಯವಾಗಿ ಡಾ|| ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆ ಖಾತರಿ ಮಾಡುವ ಕಾನೂನನ್ನು ಜಾರಿ ಮಾಡಬೇಕೆಂದು ಹೋರಾಟಗಳು ನಡೆಯುತ್ತಿವೆ.
ಕಾರ್ಪೊರೇಟ್ ಕಂಪನಿಗಳ ಪರವಾದ ಬಜೆಟ್
ಆದರೆ ಕೇಂದ್ರ ಸರ್ಕಾರ ಈ ಯಾವ ಅಂಶಗಳಿಗೂ ಕಿವಿಗೊಡದೆ ಮತ್ತೆ ಅದೇ ಕಾರ್ಪೊರೇಟ್ ಕಂಪನಿಗಳ ಪರವಾದ ಬಜೆಟ್ನ್ನು ಫೆಬ್ರವರಿ 1, 2021 ಕ್ಕೆ ಮಂಡಿಸಿದೆ. 2022 ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುವ ಸಂದರ್ಭಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನರೇಂದ್ರ ಮೋದಿಯವರ ಘೋಷಣೆ ಘೋಷಣೆಯಾಗಿಯೇ ಉಳಿದಿದೆ.
ಇದಕ್ಕೆ ವಿರುದ್ಧವಾಗಿ ಬೆರಳೆಣಿಕೆಯಷ್ಟು ಅಂಬಾನಿ, ಅದಾನಿಯಂತಹ ಶ್ರೀಮಂತರ ಆಸ್ತಿಗಳನ್ನು 300-400 ಪಟ್ಟು ಹೆಚ್ಚಳ ಮಾಡಿಕೊಡುವ ನೀತಿಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಯುತ ಬೇಡಿಕೆಗಳಿಗಾಗಿ ಶಾಂತಿಯುತ ಹೋರಾಟ ನಡೆಸುತ್ತಿರುವ ರೈತರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು. ರೈತರ ಬೇಡಿಕೆಗಳನ್ನು ಈಡೇರಿಸಬೇಕು ಹಾಗು ರೈತ ವಿರೋಧಿ, ಕಾರ್ಪೊರೇಟ್ ಪರ ಬಜೆಟನ್ನು ವಿರೋದಿಸಿ ಫೆಬ್ರವರಿ 6, 2021 ರಂದು ದೇಶದ್ಯಂತ ನಡೆಯುತ್ತಿರುವ "ರಸ್ತೆ ತಡೆ ಚಳುವಳಿ" ಯನ್ನು ರಾಜ್ಯದಲ್ಲಿ ಯಶಸ್ವಿ ಮಾಡಬೇಕೆಂದು ರಾಜ್ಯದ ರೈತರು, ಜನತೆಯಲ್ಲಿ "ಸಂಯುಕ್ತ ಹೋರಾಟ-ಕರ್ನಾಟಕ" ಮತ್ತೊಮ್ಮೆ ವಿನಂತಿಸುತ್ತದೆ.