Breaking: ಮತ್ತೆ ಬೀದಿಗಿಳಿದ ಉತ್ತರ ಪ್ರದೇಶ, ಪಂಜಾಬ್ ರೈತರು
ಲಕ್ನೋ, ಆಗಸ್ಟ್ 18: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರಕಾರದ ವಿರುದ್ಧ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ರೈತರು ಪ್ರತಿಭಟನೆ ನಡೆಸಲಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ "ನ್ಯಾಯ ಕೋರಿ" ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಈ 72 ಗಂಟೆಗಳ ಪ್ರತಿಭಟನೆಯಲ್ಲಿ ಪಂಜಾಬ್ನ ಸುಮಾರು 10,000 ರೈತರು ಭಾಗವಹಿಸಲಿದ್ದಾರೆ.
ಪಂಜಾಬ್ನ 10,000 ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಭಾರತಿ ಕಿಸಾನ್ ಯೂನಿಯನ್ (ದೋಬಾ) ಅಧ್ಯಕ್ಷ ಮಂಜಿತ್ ಸಿಂಗ್ ರೈ ಹೇಳಿದ್ದಾರೆ. "ಕೆಲವರು ರೈಲಿನಲ್ಲಿ ಮತ್ತು ಕೆಲವರು ಸ್ವಂತ ವಾಹನಗಳಲ್ಲಿ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದಾರೆ" ಎಂದು ಮಂಜಿತ್ ಸಿಂಗ್ ರೈ ಹೇಳಿದರು.
ಸಾವಿರಾರು ಪಂಜಾಬ್ ರೈತರು ಬುಧವಾರ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ತೆರಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರನ್ನು ಹತ್ಯೆಗೈದ ಪ್ರಕರಣದಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು, ಅಜಯ್ ಮಿಶ್ರಾರನ್ನು ವಜಾಗೊಳಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಈ ವರ್ಷದ ಜುಲೈ ವೇಳೆಗೆ, ಅಲಹಾಬಾದ್ ಹೈಕೋರ್ಟ್ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಿಸಿತು. ರೈತರ ಮೇಲೆ ಹರಿಸಿದ ಕಾರಿನಲ್ಲಿ ಆಶಿಶ್ ಮಿಶ್ರಾ ಕುಳಿತಿದ್ದರು ಎಂದು ಆರೋಪಿಸಲಾಗಿದೆ.
ಜೊತೆಗೆ ಕೇಂದ್ರ ಸರಕಾರ ರದ್ದು ಮಾಡಿದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ಪ್ರತಿಭಟನೆ ನಡೆಸಿದ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದು ಪ್ರತಿಭಟನಾನಿರತ ರೈತರ ಇತರ ಬೇಡಿಕೆಗಳಾಗಿವೆ.
ಹೆಚ್ಚುವರಿಯಾಗಿ, ಅದೇ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರವನ್ನು ನೀಡಬೇಕು ಮತ್ತು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ.
ಈ ಮೂರು ದಿನಗಳ ಪ್ರತಿಭಟನೆಯಲ್ಲಿ ಹಿರಿಯ ರೈತ ಮುಖಂಡರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್ ಮತ್ತು ಜೋಗಿಂದರ್ ಸಿಂಗ್ ಉಗ್ರನ್ ಕೂಡ ಭಾಗವಹಿಸಲಿದ್ದಾರೆ.