ಉತ್ತರ ಪ್ರದೇಶದಲ್ಲಿ ಯೋಗಿ ಪಕ್ಷದ 'ಯೋಗ'ವನ್ನೇ ಬದಲಿಸುತ್ತಾರಾ ರೈತರು!?
ನವದೆಹಲಿ, ಜುಲೈ 12: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರಣಕಹಳೆ ಊದಲು ಸಜ್ಜಾಗಿವೆ. ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ವಿರುದ್ಧ ಆಂದೋಲನ ನಡೆಸಲು ಮುಂದಾಗಿವೆ.
ಬೆಳೆಗಳ ಮಾರಾಟಕ್ಕೆ ಕಡಿವಾಣ ಹಾಕುವ ಕೃಷಿ ಕಾಯ್ದೆಗಳ ವಿರುದ್ಧ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಸೆಪ್ಟೆಂಬರ್ 5ರಂದು ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ಹಲವು ರೈತ ಸಂಘಟನೆಗಳು ಆಂದೋಲನ ನಡೆಸುವ ಎಚ್ಚರಿಕೆ ನೀಡಿವೆ.
ಸಿಂಘು ಗಡಿ ಸಂಚಾರ ಮುಕ್ತಗೊಳಿಸಲು 20 ಗ್ರಾಮಸ್ಥರ ಮಹಾಪಂಚಾಯತ್
ನವದೆಹಲಿಯ ಮೂರು ಗಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಜೊತೆ ಗುರುತಿಸಿಕೊಂಡಿರುವ ಬಹುತೇಕ ರೈತ ಸಂಘಟನೆಗಳು ಈ ಆಂದೋಲನದ ಭಾಗವಾಗಲಿದೆ. ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಬಿಜೆಪಿಗೆ ಪಾಠ ಕಲಿಸಲು ನಡೆಸುತ್ತಿರುವ ಆಂದೋಲನದಲ್ಲಿ ಬಹುಪಾಲು ರೈತ ಸಂಘಟನೆ ಮುಖಂಡರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಸರ್ಕಾರ ಹಾಗೂ ವಿವಾದಿತ ಕೃಷಿ ಕಾಯ್ದೆಗಳ ಕುರಿತು ಜನಜಾಗೃತಿ ಮೂಡಿಸಲಿದ್ದಾರೆ. ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ರೈತರು ಊದಿರುವ ಬಂಡಾಯದ ಕಹಳೆ ಹೇಗಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವಿಗೆ ಬುದ್ಧಿ ಕಲಿಸಲು ರೈತ ಸಂಘಟನೆಗಳು ಹೆಣೆದಿರುವ ರಣತಂತ್ರಗಳೇನು ಎಂಬುದರ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.
ರೈತರ ಆಂದೋಲನದ ಬಗ್ಗೆ ರಾಕೇಶ್ ಟಿಕಾಯತ್ ಮಾತು
"ಸರ್ಕಾರವು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ. ಚುನಾವಣೆಗಳು ಇನ್ನೂ ಮುಂದೆ ಇರುವಾಗಲೇ ನಾವು ನಮ್ಮ ಆಂದೋಲಯವನ್ನು ಆರಂಭಿಸುತ್ತಿದ್ದೇವೆ. ಯಾರಿಗೆ ಮತ ನೀಡಬೇಕು ಅಥವಾ ಬೇಡ ಎಂಬುದರ ಕುರಿತು ಚರ್ಚೆ ನಂತರದಲ್ಲಿ ಇರಲಿ. ಈಗ ನಮ್ಮ ಲಕ್ಷ್ಯ ಕೇವಲ ಸಪ್ಟೆಂಬರ್ 5ರಂದು ನಡೆಯಲಿರುವ ಆಂದೋಲನದ ಮೇಲಿದೆ," ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಎಕನಾಮಿಕ್ಸ್ ಟೈಮ್ಸ್ ಗೆ ತಿಳಿಸಿದ್ದಾರೆ.
ಬಂಗಾಳದಲ್ಲಿ ಬಿಜೆಪಿಗೆ ಪಾಠ ಕಲಿಸಿದ ರೈತರ ಪ್ರತಿಭಟನೆ
ಪಶ್ಚಿಮ ಬಂಗಾಳದಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ರೈತ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ವಿವಾದಿತ ಕಾಯ್ದೆಗಳ ಮೂಲಕ ತೋರುತ್ತಿರುವ ರೈತ ವಿರೋಧಿ ನಿಲುವಿಗೆ ಪಾಠ ಕಲಿಸಬೇಕಿದೆ. ರಾಜ್ಯದಲ್ಲಿ ಬಿಜೆಪಿಗೆ ಮತ ನೀಡದೇ ಸೋಲಿಸುವಂತೆ ರೈತರು ಅಭಿಯಾನ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಹಿನ್ನಡೆಗೆ ರೈತರು ನಡೆಸಿದ ಈ ಪ್ರತಿಭಟನೆಗಳೂ ಕೂಡ ಪ್ರಮುಖ ಕಾರಣವಾಗಿದ್ದವು ಎಂದು ರೈತ ಸಂಘಟನೆಗಳು ನಂಬುತ್ತವೆ.
ಕರಾಳ ದಿನ: ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 6 ತಿಂಗಳು
ಹರಿಯಾಣ ಮತ್ತು ಪಂಜಾಬ್ ಮಾದರಿಯ ಹೋರಾಟ
"ಪಂಜಾಬ್ ಮತ್ತು ಹರಿಯಾಣದಲ್ಲಿ ಈ ಹಿಂದೆ ಬಿಜೆಪಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದೆವು. ಗ್ರಾಮೀಣ ಪ್ರದೇಶಗಳಿಗೆ ಬಿಜೆಪಿ ನಾಯಕರು ತೆರಳಿ ಪ್ರಚಾರ ಮಾಡುವುದಕ್ಕೆ ಹಾಗೂ ಪ್ರಚಾರ ಸಭೆಗಳನ್ನು ಆಯೋಜಿಸುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಕೂಡ ಅದೇ ಹರಿಯಾಣ ಮತ್ತು ಪಂಜಾಬ್ ಮಾದರಿಯಲ್ಲಿ ಹೋರಾಟ ಮುಂದುವರಿಸಲಾಗುವುದು," ಎಂದು ಕ್ರಾಂತಿಕಾರಿ ಕಿಸಾನ್ ಒಕ್ಕೂಟದ ಅಧ್ಯಕ್ಷ ದರ್ಶನ್ ಪಾಲ್ ಹೇಳಿದ್ದಾರೆ.
"ಬಿಜೆಪಿ ಗೆಲುವಿನ ಹಿಂದೆ ಒತ್ತಡ, ಬೆದರಿಕೆ ಹಾಗೂ ಮೋಸ"
ಉತ್ತರ ಪ್ರದೇಶದಲ್ಲಿ ಇತ್ತೀಚಿನ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷವು ಅತಿಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ರೈತರ ಪ್ರತಿಭಟನೆ ನಡೆಯುತ್ತಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲೂ ಬಿಜೆಪಿ ಗೆಲುವಿಗೆ ಸಂಯುಕ್ತ ಕಿಸಾನ್ ಮೋರ್ಚಾ ಬೇರೆ ವ್ಯಾಖ್ಯಾನವನ್ನು ನೀಡಿದೆ. 'ರಾಜ್ಯದ 3050 ಸ್ಥಾನಗಳಲ್ಲಿ ಬಿಜೆಪಿ ಅತಿಹೆಚ್ಚು ಎಂದರೆ 765 ಪಂಚಾಯತ್ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳು ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಾಗಿ ಗೆಲುವು ಸಾಧಿಸಿದ್ದಾರೆ,' ಎಂದು ಎಸ್ ಕೆಎಂ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಕೇಂದ್ರಕ್ಕೆ ಎಚ್ಚರಿಕೆ: ಕಾಮಣ್ಣನ ಮೂರ್ತಿ ಜೊತೆ ಕೃಷಿ ಕಾಯ್ದೆಗೂ ಬೆಂಕಿ!
"ಇದು ನೇರ ಚುನಾವಣೆಯಾಗಿದ್ದು, ರೈತರು ಬಿಜೆಪಿ ವಿರುದ್ಧ ತಮ್ಮ ಆದೇಶವನ್ನು ಸ್ಪಷ್ಟವಾಗಿ ನೀಡಿದ್ದಾರೆ. ಆದರೆ ಪಂಚಾಯತ್ ಅಧ್ಯಕ್ಷರ ಚುನಾವಣೆಯು ಬೆದರಿಕೆ, ಒತ್ತಡ ಹಾಗೂ ಮೋಸದಿಂದಲೇ ನಡೆಯುತ್ತದೆ," ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಸಂಸತ್ ಎದುರು ರೈತ ಸಂಘಟನೆಯ ಮುಖಂಡರ ಹೋರಾಟ
ನವದೆಹಲಿಯ ಕೇಂದ್ರ ಸಂಸತ್ ಎದುರಿಗೆ ಜುಲೈ 22ರಿಂದ ಪ್ರತಿಭಟನೆ ನಡೆಸುವುದಕ್ಕೆ ರೈತ ಸಂಘಟನೆಗಳು ಯೋಜನೆ ರೂಪಿಸಿವೆ. ಜುಲೈ 19ರಿಂದ ಸಂಸತ್ ಕಲಾಪ ಆರಂಭವಾಗಲಿದ್ದು, ಅದಾಗಿ ಮೂರು ದಿನಗಳ ನಂತರದಿಂದ ಪ್ರತಿನಿತ್ಯ ಒಂದು ರೈತ ಸಂಘಟನೆಯ ಐವರು ಮುಖಂಡರು ಸಂಸತ್ ಎದುರಿಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ.
ದೆಹಲಿಯಲ್ಲಿ ರೈತರ ಸಂಕಷ್ಟಗಳ ಬಗ್ಗೆ ಜನಜಾಗೃತಿ
"ನಾವು ನೇರವಾಗಿ ಹೋಗಿ ಬಿಜೆಪಿ ಮನ ನೀಡಬೇಡಿ ಎಂದು ಎಲ್ಲಿಯೂ ಹೇಳುವುದಿಲ್ಲ. ದೇಶದ ರೈತರು ನವೆದೆಹಲಿಯ ಮೂರು ಗಡಿ ಪ್ರದೇಶಗಳಲ್ಲಿ ಬಿಸಿಲು, ಗಾಳಿ, ಮಳೆ ಹಾಗೂ ಚಳಿ ಎನ್ನದೇ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸುಮಾರು ಎಂಟು ತಿಂಗಳು ಕಳೆದರೂ ರೈತರ ಕಡೆಗೆ ತಿರುಗಿ ನೋಡದ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದಷ್ಟೇ ನಮ್ಮ ಉದ್ದೇಶವಾಗಿದೆ," ಎಂದು ಭಾರತೀಯ ಕಿಸಾನ್ ಒಕ್ಕೂಟದ ಉಗ್ರಾಣದ ಅಧ್ಯಕ್ಷ ಜೋಗಿಂದರ್ ಸಿಂಗ್ ಹೇಳಿದ್ದಾರೆ.
ಕೇಂದ್ರ ಸಚಿವರು ನಡೆಸಿದ 11 ಸುತ್ತಿನ ಚರ್ಚೆ ವಿಫಲ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಆಹಾರ ಸಚಿವ ಪಿಯೂಶ್ ಗೋಯೆಲ್ ಸೇರಿದಂತೆ ಮೂವರು ಕೇಂದ್ರ ಸಚಿವರು ಪ್ರತಿಭಟನಾನಿರತ ಸಂಘಟನೆಗಳ ಜೊತೆಗೆ ಸಂಧಾನ ಸಭೆ ನಡೆಸಿದ್ದರು. ಈವರೆಗೂ ನಡೆಸಿದ 11 ಸುತ್ತಿನ ಸಂಧಾನ ಮಾತುಕತೆ ವಿಫಲಗೊಂಡಿತ್ತು. ಕಳೆದ ಜನವರಿ 22ರಂದು ಕೊನೆಯದಾಗಿ 41 ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ನಡುವಿನ ಸಂಧಾನ ಮಾತುಕತೆ ಮುರಿದು ಬಿದ್ದಿತ್ತು. ಇದಾಗಿ ನಾಲ್ಕು ದಿನಗಳಲ್ಲೇ ನಡೆದ ಜನವರಿ 26ರ ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗಿದ್ದು, ಅಂದು ನವದೆಹಲಿಯಲ್ಲಿ ರೈತರು ನಡೆಸಿದ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ನಿರಂತರ ಪ್ರತಿಭಟನೆ
ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮೈಕೊರೆಯುವ ಚಳಿ, ಕೊರೊನಾವೈರಸ್ ಭೀತಿಯ ನಡುವೆಯೂ ಜಗ್ಗದೇ ಕುಗ್ಗದೇ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಮುಂದುವರಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳು ಯಾವುವು?
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.