ರೈತರಿಂದ ಕುಂಬಳಕಾಯಿ ಖರೀದಿ ಮಾಡಿ, ಬಡವರಿಗೆ ನೀಡಿದ ಶಿಕ್ಷಕ
ಮಂಡ್ಯ, ಏಪ್ರಿಲ್ 15: ಲಾಕ್ಡೌನ್ ಘೋಷಣೆ ಆಗಿರುವುದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಅನೇಕ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಆಗದೆ, ತಾವು ಬೆಳೆದ ಬೆಳೆಯನ್ನು ತಾವೇ ನಾಶ ಮಾಡಿದ ಘಟನೆಯೂ ನಡೆದಿದೆ.
ಈ ರೀತಿಯ ಪರಿಸ್ಥಿತಿ ನಡುವೆ ಶಿಕ್ಷಕರೊಬ್ಬರು ರೈತರು ಬೆಳೆದ ಕುಂಬಳಕಾಯಿಯನ್ನು ಕೊಂಡುಕೊಂಡಿದ್ದಾರೆ. ಒಂದು ಲೋಡ್ ಕುಂಬಳಕಾಯಿವನ್ನು ತಮ್ಮ ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಬೆಳೆಯನ್ನು ಮಾರಾಟ ಮಾಡಲು ಪರದಡುತ್ತಿದ್ದ ರೈತರಿಗೆ ನೆರವಾಗಿದ್ದಾರೆ.
ಲಾಕ್ಡೌನ್ 2: ಯಾವ ಯಾವ ಚಟುವಟಿಕೆಗಳಿಗೆ ಅವಕಾಶ ಇದೆ?
ಈ ಶಿಕ್ಷಕರ ಹೆಸರು ಎಸ್ ರಂಗಸ್ವಾಮಿ. ಕೆ ಆರ್ ಪೇಟೆಯವರು. ಇವರು ಚಿಕ್ಕೊನಳ್ಳಿ ಗ್ರಾಮದ ರೈತರಿಂದ ಕುಂಬಳಕಾಯಿಯನ್ನು ಕೊಂಡುಕೊಂಡಿದ್ದಾರೆ. ಆದರೆ, ಇಷ್ಟೊಂದು ಪ್ರಮಾಣದ ಕುಂಬಳಕಾಯಿ ಇಟ್ಟುಕೊಂಡು ಏನು ಮಾಡುತ್ತಾರೆ ಎನ್ನುವ ಕುತೂಹಲ ಮೂಡಬಹುದು.
ಬರೀ ರೈತರಿಗೆ ಮಾತ್ರವಲ್ಲದೆ, ರಂಗಸ್ವಾಮಿ ಬಡವರಿಗೆ ನೆರವಾಗಿದ್ದಾರೆ. ರೈತರಿಂದ ಪಡೆದ ಕುಂಬಳಕಾಯಿಗಳನ್ನು ಪೌರ ಕಾರ್ಮಿಕರಿಗೆ ಹಾಗೂ ಕೆ ಆರ್ ಪೇಟೆ ಸ್ಲಂ ನಲ್ಲಿ ಇರುವ ಬಡ ಜನರಿಗೆ ವಿತರಣೆ ಮಾಡಿದ್ದಾರೆ.
ಸರ್ಕಾರಿ ಶಾಲೆಯ ಶಿಕ್ಷಕ ರಂಗಸ್ವಾಮಿಯವರ ಔದಾರ್ಯಕ್ಕೆ ಶರಣು. https://t.co/9x0FYGPFYn
— S.Suresh Kumar, Minister - Govt of Karnataka (@nimmasuresh) April 13, 2020
ಶಿಕ್ಷಕ ರಂಗಸ್ವಾಮಿ ಅವರ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಶ್ವಿನಿ ಎಂ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ರಂಗಸ್ವಾಮಿ ಅವರನ್ನು ಟ್ವಿಟ್ಟರ್ ಖಾತೆಯಲ್ಲಿ ಬೇಷ್ ಎಂದಿದ್ದಾರೆ.