ಅಡಿಕೆ ಹಳದಿ ರೋಗಕ್ಕೆ ಸಂಶೋಧನೆ; ಬಜೆಟ್ನಲ್ಲಿ 25 ಕೋಟಿ ರೂ. ಮೀಸಲಿಗೆ ಸಿಎಂ ಭರವಸೆ
ಮಂಗಳೂರು, ಮಾರ್ಚ್ 5: ಹಳದಿ ರೋಗದಿಂದ ಅಡಿಕೆ ತೋಟ ನಾಶ ಹೊಂದಿದವರಿಗೆ ಹಾಗೂ ಪರ್ಯಾಯ ಬೆಳೆ ಅಳವಡಿಸಿಕೊಳ್ಳದಿದ್ದವರಿಗೆ ಒಂದು ಬಾರಿ ಪರಿಹಾರವಾಗಿ ಬಜೆಟ್ನಲ್ಲಿ 25 ಕೋಟಿ ರೂ. ಪ್ಯಾಕೇಜ್ ಘೋಷಿಸಲು ಬಂದರು ಹಾಗೂ ಮೀನುಗಾರಿಕೆ ಸಚಿವ ಎಸ್.ಅಂಗಾರ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಡಿಕೆಯ ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶ ನೀಡುವಂತೆಯೂ ಸಚಿವ ಎಸ್.ಅಂಗಾರ ಮನವಿ ಮಾಡಿದರು.
ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಜೆಟ್ನಲ್ಲಿ ಪ್ಯಾಕೇಜ್ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ. ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶಿಸುವುದಾಗಿಯೂ ಭರವಸೆ ಕೊಟ್ಟಿದ್ದಾರೆ.
ತೋಟಗಾರಿಕೆ ಸಚಿವ ಆರ್.ಶಂಕರ್, ಕರಾವಳಿ ಭಾಗದ ಸಚಿವರಾದ ಎಸ್.ಅಂಗಾರ ಮತ್ತು ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶಾಸಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿತ್ತು.
ಅಡಿಕೆಗೆ ಪ್ರಸ್ತುತ ಉತ್ತಮ ಬೆಲೆ ಬಂದಿದೆ. ಆದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹಳದಿ ರೋಗದಿಂದ ಅಡಿಕೆ ತೋಟಗಳು ಸರ್ವ ನಾಶವಾಗಿವೆ. ಅಡಿಕೆ ಬೆಳೆಗಾರರನ್ನು ರಕ್ಷಣೆ ಮಾಡುವ ಅವಶ್ಯಕತೆ ಇದೆ. ಪರ್ಯಾಯ ಬೆಳೆ ಲಾಭದಾಯಕವಾಗಿಲ್ಲವಾದರೂ ಅದನ್ನು ಬೆಳೆಯುವುದು ಅನಿವಾರ್ಯ. ಪರ್ಯಾಯ ಬೆಳೆಯನ್ನು ಸರಕಾರ ಪ್ರೋತ್ಸಾಹಿಸಬೇಕು ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಅಡಿಕೆಗೆ ಹಳದಿ ರೋಗದಿಂದ ಬಾಧಿತರಾದ ರೈತರಿಗೆ ಸಾಲ ಮನ್ನಾ ಮಾಡಬೇಕು. ಪರ್ಯಾಯ ಕೃಷಿ ಮಾಡುವವರಿಗೆ ದೀರ್ಘಾವಧಿ ಸಾಲ ಮಂಜೂರು ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಕೆ.ಜಿ. ಬೋಪಯ್ಯ, ಆರಗ ಜ್ಞಾನೇಂದ್ರ ನಿಯೋಗದಲ್ಲಿದ್ದರು.