3 ಗುಂಟೆಯಲ್ಲಿ 400ಕ್ಕೂ ಹೆಚ್ಚು ಗಿಡ-ಮರ ಬೆಳೆದ ನಿವೃತ್ತ ಅರಣ್ಯಾಧಿಕಾರಿ
ಕಾರವಾರ, ಜೂ. 17: ಮಾನವನ ದುರಾಸೆಯಿಂದಾಗಿ ಪರಿಸರ ಕಣ್ಮರೆಯಾಗುತ್ತಿದೆ. ಅದರಲ್ಲಿಯೂ ಊರುಗಳು ಅಭಿವೃದ್ಧಿ ಹೊಂದುತ್ತಿದ್ದಂತೆ ಕಾಂಕ್ರೀಟ್ ಕಟ್ಟಡಗಳ ನಡುವೆ ಗಿಡ ಮರಗಳನ್ನು ಬೆಳೆಸುವುದಕ್ಕೆ ಜಾಗವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಬೋನ್ಸಾಯ್ ಪದ್ಧತಿಯಿಂದಾಗಿ ಇಲ್ಲೋರ್ವ ನಿವೃತ್ತ ಅರಣ್ಯಾಧಿಕಾರಿ ಅತಿ ಕಡಿಮೆ ಜಾಗ, ನೀರು ಬಳಸಿ ಮನೆಯಂಗಳದಲ್ಲಿಯೇ ನೂರಾರು ಬಗೆಯ ಗಿಡಮರಗಳನ್ನು ಬೆಳೆದು ಮಾದರಿಯಾಗಿದ್ದಾರೆ.
ಕುಮಟಾ ತಾಲ್ಲೂಕಿನ ಮೂರೂರು ಕಲ್ಲಬ್ಬೆ ಗ್ರಾಮದ ನಿವೃತ್ತ ಅರಣ್ಯಾಧಿಕಾರಿ ಎಲ್.ಆರ್.ಹೆಗಡೆ ಈ ಬೋನ್ಸಾಯ್ ಪದ್ಧತಿಯ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ. ಮಾತ್ರವಲ್ಲದೆ ಕೇವಲ ಮೂರು ಗುಂಟೆ ಜಾಗದಲ್ಲಿಯೇ ನೂರಾರು ವರ್ಷ ಬಾಳುವ 400ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡ ಮರಗಳನ್ನು ಬೆಳೆಸುವ ಮೂಲಕ ಮನೆಯ ಅಂಗಳದಲ್ಲಿಯೇ ಅರಣ್ಯ ಸೃಷ್ಟಿ ಮಾಡಿದ್ದಾರೆ.
ಕುಮಟಾ; ಬಾಂಬ್ ಮಾದರಿ ವಸ್ತು ಪತ್ತೆ, ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿ
400ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳು
ಪ್ರಸ್ತುತ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಪರಿಸರವನ್ನು ಉಳಿಸಿ ಬೆಳೆಸುವ ಜತೆಗೆ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ, ಮನೆಯ ಅಂದ ಹೆಚ್ಚಿಸಲು, ಪರಿಸರ ತಂಪಾಗಿಡಲು ಬಗೆ ಬಗೆಯ ಸಸಿ ಬೆಳೆಸುವುದು ಸಾಮಾನ್ಯ, ತಾರಸಿ ಮೇಲೆ ಪುಟ್ಟ ಕುಂಡದಲ್ಲಿ ಬೆಳೆಯುವ ಬೋನ್ಸಾಯ್ ಪದ್ಧತಿಯ ತೋಟವೊಂದು ಗಮನಸೆಳೆಯುತ್ತದೆ.
ಬೋನ್ಸಾಯ್ ಪದ್ಧತಿ ಎಂದರೆ ಆನೆಯನ್ನು ಕನ್ನಡಿಯಲ್ಲಿ ನೋಡಿದಂತೆ. ಮರವು ತನ್ನ ಮೂಲ ಗುಣದಲ್ಲಿಯೇ ಬೆಳೆಯುತ್ತದೆ. ಆದರೆ ಕುಬ್ಜವಾಗಿರುತ್ತದೆ. ಇದೊಂದು ಜಪಾನ್ ದೇಶದ ಆರ್ಟ್ ಆಗಿದೆ. ಈ ಪದ್ಧತಿಯಲ್ಲಿ ಮರದ ಜಾತಿಯ ಎಲ್ಲ ಸಸ್ಯಗಳನ್ನೂ ಬೆಳೆಸಬಹುದಾಗಿದೆ. ಆದರೆ ಎತ್ತರಕ್ಕೆ ಬೆಳೆಯಲು ಬಿಡದೆ ಆಗಾಗ ಕತ್ತರಿಸುತ್ತಿರಬೇಕಾಗುತ್ತದೆ. ಈ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡಿದರೇ ಅತಿ ಕಡಿಮೆ ಜಾಗದಲ್ಲಿಯೂ ನೂರಾರು ಮರಗಳನ್ನು ಬೆಳೆಯಲು ಸಾಧ್ಯವಿದೆ.
ಅರಣ್ಯ ಇಲಾಖೆಯಲ್ಲಿ 37 ವರ್ಷಗಳ ಕಾಲ ಸೇವೆ
ಇನ್ನು ಅರಣ್ಯ ಇಲಾಖೆಯಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಎಲ್.ಆರ್.ಹೆಗಡೆ ನಿವೃತ್ತಿ ಬಳಿಕ ಈ ಪದ್ಧತಿ ಮೂಲಕ ಜನಸಾಮಾನ್ಯರಿಗೆ ಪರಿಸರದ ಅರಿವು ಮೂಡಿಸುತ್ತಿದ್ದಾರೆ. ತಾವು ನಿವೃತ್ತಿಯಾಗಿದ್ದರೂ ಪ್ರಕೃತಿ ಮೇಲಿನ ತಮ್ಮ ಪ್ರೀತಿ ನಿವೃತ್ತಿಯಾಗದಂತೆ ಇಳಿವಯಸ್ಸಿನಲ್ಲೂ ಕಾಡು ಸಂರಕ್ಷಣೆ ಮಾಡುವ, ಮರ ಬೆಳೆಸುವ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಕಳೆದ 7 ವರ್ಷದಿಂದ ಬೋನ್ಸಾಯ್ ಪದ್ಧತಿಯಲ್ಲಿ ಕೃಷಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಅವರು, ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು, ವರಹಾಮಿಹೀರ ಹಾಗೂ ಇತರ ಋಷಿಮುನಿಗಳು ಬರೆದಂತ ಗ್ರಂಥದ ಅನುಗುಣವಾಗಿ ವನ ನಿರ್ಮಾಣ ಮಾಡಿದ್ದಾರೆ. ಸಪ್ತರ್ಷಿವನ, ರಾಶಿವನ, ಪಂಚಫಲವನ, ನಕ್ಷತ್ರವನ, ನವಗ್ರಹವನ ಸೇರಿದಂತೆ ಸುಮಾರು 175ಕ್ಕೂ ಅಧಿಕ ಜಾತಿಯ ಔಷಧಿ ಗುಣವುಳ್ಳ ಹಾಗೂ ಬಹುವರ್ಷ ಬಾಳುವ ಮರಗಳನ್ನು, ಗಿಡಗಳನ್ನು ಬೆಳೆಸಿದ್ದಾರೆ.
ನೂರಾರು ವರ್ಷಗಳ ಕಾಲ ಬದುಕುವ ಮರ
ಇನ್ನು ಬೋನ್ಸಾಯ್ ಕೃಷಿ ಪದ್ಧತಿಯಲ್ಲಿ ಮರವು ತನ್ನ ಮೂಲ ಗುಣದಲ್ಲಿಯೇ ಬೆಳೆಯುತ್ತಾದರೂ, ಕುಬ್ಜವಾಗಿರುತ್ತೆ. ಈ ಕಾರಣದಿಂದ ಇವುಗಳನ್ನು ಕುಂಡದಲ್ಲಿ ಬೆಳೆಸಲಾಗುತ್ತದೆ. ಈ ಮಾದರಿಯಲ್ಲಿಯೇ ತಮ್ಮ ಮನೆ ಆವರಣದಲ್ಲೇ ಕಲಾನಿಕೇತನ ಕುಬ್ಜವನ ಎಂಬ ಅರಣ್ಯ ನಿರ್ಮಾಣ ಮಾಡಿದ್ದು, ನೂರಾರು ವರ್ಷಗಳ ಕಾಲ ಬದುಕುವ ಮರಗಳನ್ನು ಬೆಳೆಸಲಾಗುತ್ತಿದೆ. ಪ್ರಮುಖವಾಗಿ ಆಲ, ಅರಳಿ, ಅಶ್ವತ, ಬೀಟೆ, ರಕ್ತ ಚಂದನ, ರುದ್ರಾಕ್ಷಿ, ನೆಲ್ಲಿ, ಅಶ್ವಿನಿ, ದೇವವೃಕ್ಷ ಸೇರಿದಂತೆ ವಿವಿಧ ಜಾತಿಯ 400 ಗಿಡಗಳನ್ನು ಬೆಳೆಸಲಾಗಿದೆ. ಅತೀ ಕಡಿಮೆ ನೀರು ಹಾಗೂ ಕಡಿಮೆ ಜಾಗದಲ್ಲಿ ಈ ಸಣ್ಣ ಕಾಡು ನಿರ್ಮಾಣ ಮಾಡಲಾಗಿದೆ. ಮಾನವನ ದುರಾಸೆಯಿಂದಾಗಿ ಬಹತ್ ಅರಣ್ಯ ಪ್ರದೇಶಗಳು ಕೈಗಾರಿಕಾ ಕಟ್ಟಡಗಳು, ಮನೆ, ರೆಸಾರ್ಟ್ಗಳೂ ಸೇರಿದಂತೆ ವಿವಿಧ ಬಗೆಯ ಉದ್ಯಮ ಕೇಂದ್ರಗಳಾಗಿ ಮಾರ್ಪಾಡಾಗುತ್ತಿರುವ ದಿನಗಳಲ್ಲಿ ಪ್ರತಿಯೊಬ್ಬರು ಎಚ್ಚೆತ್ತು ಕೊಂಡು ಪರಿಸರ ಉಳಿವಿಗೆ ಮುಂದಾಗುವ ಮೂಲಕ ಪ್ರಾಕತಿಕ ಸಂಪತ್ತನ್ನು ಉಳಿಸಲು ಪಣತೊಡಬೇಕು ಎನ್ನುತ್ತಾರೆ ಹೆಗಡೆಯವರು.
ಬೋನ್ಸಾಯ್ ಮನೆಯಂಗಳದಲ್ಲಿಯೂ ಬೆಳೆಯಲು ಸಾಧ್ಯ
ಇನ್ನು ಪದ್ಧತಿ ಮೂಲಕ ಬೆಳೆದದ್ದನ್ನು ಇತರರಿಗೂ ತಿಳಿಸಿ ಪದ್ಧತಿ ಮೂಲಕ ಅರಣ್ಯ ಬೆಳೆಸುವಂತೆ ಎಲ್ ಆರ್ ಹೆಗಡೆ ಪ್ರೋತ್ಸಾಹಿಸುತ್ತಿದ್ದಾರೆ. ಈ ಅಪರೂಪದ ಪದ್ದತಿ ಮೂಲಕ ಬೆಳೆದ ವನ ಹಾಗೂ ಗಿಡ ಮರಗಳ ಬೆಳೆಸುವ ಮಾಹಿತಿಗಾಗಿ ಉತ್ಸುಕತೆಯಿಂದ ಬರುವವರಿಗೆ ಸದಾ ಕಾಲವೂ ಮಾಹಿತಿ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದ ಇವರ ಈ ಪರಿಸರ ಕಾಳಜಿಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಪರಿಸರದಿಂದ ನಾವು ಸಾಕಷ್ಟು ಪಡೆದಿದ್ದೇವೆ. ಆದರೆ ಹೀಗೆ ಪಡೆದ ಬಹುತೇಕ ಜನರಿಗೆ ಪರಿಸರದ ಬಗ್ಗೆ ಅರಿವಿಲ್ಲ. ಅರಿವಿದ್ದವರಿಗೂ ಜಾಗ ನೀರಿನ ಸಮಸ್ಯೆಯಿಂದ ಗಿಡ ಮರಗಳನ್ನು ಬೆಲಕೆಯುತ್ತಿಲ್ಲ. ಆದರೆ ಈ ಬೋನ್ಸಾಯ್ ಪದ್ಧತಿ ಮೂಲಕ ಗಿಡ ಮರಗಳ ಕೃಷಿ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ. ಕಟ್ಟಡ, ಮನೆಯಂಗಳದಲ್ಲಿಯೂ ಇದನ್ನು ಬೆಳೆಯಲು ಸಾಧ್ಯವಿದೆ ಎನ್ನುತ್ತಾರೆ ನಿವೃತ್ತ ಅರಣ್ಯಾಧಿಕಾರಿ ಎನ್.ಆರ್.ಹೆಗಡೆ.
(ಒನ್ಇಂಡಿಯಾ ಸುದ್ದಿ)