ರೈತರಿಂದ ರೈತರಿಗಾಗಿ ರೈತರಿಗೋಸ್ಕರ 'ರಾ ಗ್ರಾನ್ಯುಲ್ಸ್'
ಶಿವಮೊಗ್ಗ, ಜೂನ್ 17: ರೈತರಿಗೆ ಮಾರುಕಟ್ಟೆ ಬೆಲೆ ಸಿಗುವುದಿಲ್ಲ ಎಂಬ ಅಳಲು. ಗ್ರಾಹಕರಿಗೆ ದರ ಏರಿಕೆಯ ಚಿಂತೆ, ವ್ಯಾಪಾರಿಗಳಿಗೆ ಲಾಭದ ಆಸೆ ಇವೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದು ಸರ್ಕಾರಕ್ಕೆ ದೊಡ್ಡ ಸವಾಲು.
ರೈತರಿಗೆ ಮಾರುಕಟ್ಟೆಯ ಬೆಲೆಯನ್ನು ನೀಡಿ ಗ್ರಾಹಕರಿಗೆ ತುಂಬಾ ಹೊರೆಯಾಗದಂತೆ ಕೃಷಿ ಉತ್ಪನ್ನಗಳನ್ನು ಒದಗಿಸುವ ಹೊಸದೊಂದು ಸಾಹಸಕ್ಕೆ 'ರಾ ಗ್ರಾನ್ಯುಲ್ಸ್' ಕೈ ಹಾಕಿದೆ.
ರಾಸಾಯನಿಕಗಳನ್ನು ಬಳಸದೆ ಸಹಜ ಪದ್ಧತಿ ಅನುಸರಿಸಿ ನೈಸರ್ಗಿಕವಾಗಿ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಬಹಳಷ್ಟು ಉತ್ಪನ್ನಗಳನ್ನು ರೈತರಿಂದ ಖರೀದಿಸಲಾಗುತ್ತದೆ. ಇದರ ಜತೆಗೆ ಸೋಪು, ಮಕ್ಕಳಿಗೆ ಬಳಸುವ ಎಣ್ಣೆಯಂತಹ ಉತ್ಪನ್ನಗಳು ಕೂಡ ದೊರೆಯಲಿವೆ.
ಕೊರೊನಾ ಹಾವಳಿ ಶುರುವಾದ ಬಳಿಕ ಜನರು ತಮಗೆ ಗೊತ್ತಿಲ್ಲದಂತೆಯೇ ಸಾವಯವ ಕೃಷಿ ಉತ್ಪನ್ನಗಳತ್ತ ಮುಖ ಮಾಡಿದ್ದಾರೆ. ಬೇಕರಿ ತಿಂಡಿತಿನಿಸುಗಳನ್ನು ಮರೆತೇಬಿಟ್ಟಿದ್ದಾರೆ ಎಂದೇ ಹೇಳಬಹುದು. ನಾಲಿಗೆಗೆ ರುಚಿ ಹೇಗಾದರೂ ಇರಲಿ ಆರೋಗ್ಯ ಚೆನ್ನಾಗಿದ್ದರೆ ಸಾಕಪ್ಪಾ ಎಂದುಕೊಳ್ಳುವ ಹೊತ್ತಿಗೆ ಈ 'ರಾ ಗ್ರಾನ್ಯುಲ್ಸ್' ಶುರು ಮಾಡಿದ್ದಾರೆ.
ಸಾಗರ ತಾಲೂಕಿನ ತಲವಾಟ ಮೂಲದ ಪ್ರಶಾಂತ್ ಕೆ.ಜಿ ಹಾಗೂ ಅದೇ ತಾಲೂಕಿನ ಹಂಸಗಾರು ಮೂಲದ ಕಾರ್ತಿಕ್ ಎಂಬುವವರು 'ರಾ ಗ್ರಾನ್ಯುಲ್ಸ್' ಸಂಸ್ಥೆ ಆರಂಭಿಸಿ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿದ್ದಾರೆ.
ಕೃಷಿ ಕುಟುಂಬದಿಂದ ಬಂದವರೇ ಆಗಿರುವ ಈ ಇಬ್ಬರು ರೈತರೇ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿ ಪಡೆದುಕೊಳ್ಳುವ ದರಕ್ಕಿಂತ ಹೆಚ್ಚಿಗೆ ದರಕ್ಕೆ ರೈತರಿಂದಲೇ ನೇರವಾಗಿ ಖರೀದಿ ಮಾಡುತ್ತಿದ್ದಾರೆ.
Recommended Video
ರಾ ಗ್ರಾನ್ಯುಲ್ಸ್ನಲ್ಲಿ ಏನೇನು ಲಭ್ಯ: ಬೆಲ್ಲ, ಶುದ್ಧ ಕೊಬ್ಬರಿ ಎಣ್ಣೆ, ಉಪ್ಪಿನ ಕಾಯಿ, ಸಾಬೂನು, ಕೆಂಪು ಅಕ್ಕಿ, ಜೇನು ತುಪ್ಪ ಸೇರಿದಂತೆ ಹಲವು ಉತ್ಪನ್ನಗಳು ಲಭ್ಯವಿದೆ. ಮಾಹಿತಿಗಾಗಿ https://rawgranules.in ಸಂಪರ್ಕಿಸಿ.