ಚಿತ್ರದುರ್ಗದ ಸುಮಂಗಲಮ್ಮನವರಿಗೆ ಕೃಷಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ
ಚಿತ್ರದುರ್ಗ, ಅಕ್ಟೋಬರ್ 28: 2020ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಈ ಬಾರಿ 65 ಮಂದಿ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೃಷಿ ಕ್ಷೇತ್ರದಿಂದ ಚಿತ್ರದುರ್ಗದ ಎಸ್.ವಿ. ಸುಮಂಗಲಮ್ಮ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜಿ. ಕೆರೆ ಗ್ರಾಮದ 68 ವರ್ಷದ ಸುಮಂಗಲಮ್ಮ ಅವರ 40 ವರ್ಷದ ಕೃಷಿ ಕ್ಷೇತ್ರದ ಸಾಧನೆ ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇದೇ ನವೆಂಬರ್ 7ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ
ಬಳ್ಳಾರಿಯಿಂದ ಬೆಂಗಳೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಸಮೀಪ ಈ ಬರಪೀಡಿತ ಪ್ರದೇಶವಾದ ಬಿಜಿ ಕೆರೆ ಗ್ರಾಮವಿದೆ. ಇಲ್ಲೇ ಸುಮಂಗಲಮ್ಮ ಅವರ "ವಸುಂಧರ ಕೃಷಿ ಕ್ಷೇತ್ರವು" ತೆರೆದುಕೊಂಡಿದೆ. ಸುಮಾರು 80 ಎಕರೆ ಕೃಷಿ ಪ್ರದೇಶದಲ್ಲಿ 20 ರೀತಿಯ ವಿವಿಧ ಸಸ್ಯ ವರ್ಗದ ತಳಿಗಳಿದ್ದು, ತೆಂಗು, ಹುಣಸೆ ಮರಗಳು, ರೇಷ್ಮೆ ಮತ್ತು ರೇಷ್ಮೆ ಹುಳುಗಳ ಸಾಕಾಣಿಕೆ ಹಾಗೂ ಕೃಷಿ ಅರಣ್ಯ ಬೆಳೆಗಳಾದ ಗ್ಲೈರಿಸಿಡಿಯಾ, ಸೂಬಾಬುಲ್, ಹೆಬ್ಬೆವು, ಶ್ರೀಗಂಧ, ಬಿದಿರು, ಮುಂತಾದ ಬೆಳೆಗಳನ್ನು ಸುಮಂಗಲಮ್ಮ ಅವರು ಬೆಳೆಸಿದ್ದಾರೆ.
ಅಷ್ಟೇ ಅಲ್ಲ, 60ಕ್ಕೂ ಹೆಚ್ಚು ಸ್ಥಳೀಯ ಕೃಷಿ ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ. ಕಳೆದ 40 ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು "ಕರ್ನಾಟಕ ರಾಜ್ಯದಲ್ಲಿ ಟ್ರ್ಯಾಕ್ಟರ್ ಚಾಲನೆಯಲ್ಲಿ ಪರವಾನಗಿ ಪಡೆದ ಪ್ರಥಮ ಮಹಿಳೆ" ಎಂಬ ಹೆಗ್ಗಳಿಕೆಯೂ ಇವರಿಗಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್. ಎಸ್. ಹೆಗಡೆ ಕುಂದರಗಿ ಪರಿಚಯ
ಎಲ್.ಎಮ್. ಪಟೇಲ್ ಸಂಸ್ಥೆಯಿಂದ 2010ನೇ ಸಾಲಿನ "ಅತ್ಯುತ್ತಮ ರೇಷ್ಮೆ ಬೆಳೆಗಾರ" ರಾಷ್ಟ್ರೀಯ ಪ್ರಶಸ್ತಿ, 1995-96ನೇ ಸಾಲಿನ ರೇಷ್ಮೆ ಬೆಳೆ ಅಭಿವೃದ್ಧಿಯಲ್ಲಿ ಉತ್ತಮ ಮಹಿಳಾ ಉದ್ಯಮಶೀಲತೆ ರಾಷ್ಟ್ರೀಯ ಪ್ರಶಸ್ತಿ, ಕೇಂದ್ರೀಯ ರೇಷ್ಮೆ ಮಂಡಳಿ ಪ್ರಶಸ್ತಿಯೂ ಲಭಿಸಿದೆ. 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಸಮುದಾಯಕ್ಕೆ ಉತ್ತಮ ಪ್ರೇರಕರಾಗಿ ಆಯ್ಕೆಯಾಗಿದ್ದರು. 2007-08 ನೇ ಸಾಲಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( ನಬಾರ್ಡ್) ಸಂಸ್ಥೆಯಿಂದ ರೈತರ ಒಕ್ಕೂಟದ ಅಭಿವೃದ್ಧಿಗೆ ಉತ್ತಮ ಸಾಧನೆ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಸುಮಂಗಲಮ್ಮ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.