ರೈತರ ಮನವೊಲಿಸಲು ರಾಜನಾಥ್ ಸಿಂಗ್ ಮುಂದಾಳತ್ವ
ನವದೆಹಲಿ, ಡಿಸೆಂಬರ್ 1: ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ತೀವ್ರವಾಗುತ್ತಿದ್ದು, ಪೊಲೀಸರು ದೆಹಲಿ ಪ್ರವೇಶಿಸುವ ಸಿಂಘು ಮತ್ತು ಟಿಕ್ರಿ ಗಡಿಗಳನ್ನು ಮುಚ್ಚಿದ್ದಾರೆ. ವಾಹನ ಸವಾರರು ಬದಲಿ ಮಾರ್ಗಗಳಲ್ಲಿ ತೆರಳುವಂತೆ ದೆಹಲಿ ಪೊಲೀಸರು ಸೂಚನೆ ನೀಡಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರವು ರೈತರೊಂದಿಗೆ ಸಭೆ ನಡೆಸಿ ಅವರ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ರೈತ ಒಕ್ಕೂಟಗಳ ಮುಖಂಡರ ಜತೆಗೆ ಕೇಂದ್ರದ ವಿವಿಧ ಮುಖಂಡರು ಮಾತುಕತೆ ನಡೆಸುವ ಸಾಧ್ಯತೆ ಇದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಇತರೆ ಕೆಲವು ಸಚಿವರು ಹಾಗೂ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಕೂಡ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
"ಕೃಷಿ ಕಾಯ್ದೆ ರದ್ದುಗೊಳಿಸದಿದ್ದರೆ ಎನ್ ಡಿಎಗೆ ನೀಡಿದ ಬೆಂಬಲ ವಾಪಸ್"
ಇದಕ್ಕೂ ಮುನ್ನ 9 ಗಂಟೆ ಸುಮಾರಿಗೆ ಸಭೆ ಸೇರಿದ ವಿವಿಧ ರೈತ ಒಕ್ಕೂಟಗಳ ಮುಖಂಡರು, ಕೇಂದ್ರ ಸರ್ಕಾರದ ಮಾತುಕತೆ ಆಹ್ವಾನದಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎಂದು ಚರ್ಚಿಸಿದರು. ರೈತರ ಪ್ರತಿಭಟನೆಯಿಂದ ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುವ ಭೀತಿ ಇದೆ ಎಂದು ಕೇಂದ್ರ ಸರ್ಕಾರ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ್ದಕ್ಕೆ ಕಾರಣ ನೀಡಿತ್ತು. ನಮಗೆ ಸೋಂಕು ಹರಡುವುದರ ಅಪಾಯದ ಬಗ್ಗೆ ಅರಿವಿದೆ. ಆದರೆ ಕೇಂದ್ರದ ಹೊಸ ಕೃಷಿ ಕಾಯ್ದೆಗಳು ಕೊರೊನಾ ವೈರಸ್ ಸೋಂಕಿಗಿಂತಲೂ ಅತ್ಯಂತ ಅಪಾಯಕಾರಯಾಗಿವೆ ಎಂದು ರೈತರು ಹೇಳಿದ್ದಾರೆ.
'ಕೃಷಿ ಕಾಯ್ದೆಗಳನ್ನು ರೂಪಿಸಿದಾಗ ಅವು ರೈತರಲ್ಲಿ ಕೆಲವು ತಪ್ಪು ಕಲ್ಪನೆಗಳನ್ನು ಮೂಡಿಸಿದ್ದವು. ಅಕ್ಟೋಬರ್ 14 ಮತ್ತು ನವೆಂಬರ್ 13ರಂದು ನಾವು ಎರಡು ಬಾರಿ ರೈತ ಮುಖಂಡರ ಜತೆಗೆ ಮಾತುಕತೆ ನಡೆಸಿದ್ದೇವೆ. ಆ ಸಮಯಗಳಲ್ಲಿ ಕೂಡ ನಾವು ಪ್ರತಿಭಟನೆ ನಡೆಸದಂತೆ ಮತ್ತು ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದು ಮನವಿ ಮಾಡಿದ್ದೆವು. ಡಿಸೆಂಬರ್ 3ರಂದು ಮುಂದಿನ ಸುತ್ತಿನ ಮಾತುಕತೆ ನಡೆಸುವುದಾಗಿ ಕೂಡ ನಿರ್ಧರಿಸಲಾಗಿತ್ತು. ಆದರೂ ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಇದು ಚಳಿಗಾಲ, ಕೋವಿಡ್ ಭೀತಿ ಹೆಚ್ಚಿದೆ. ಹೀಗಾಗಿ ಸಭೆ ಮುಂಚೆಯೇ ನಡೆಯಬೇಕಿತ್ತು. ಮೊದಲ ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರನ್ನು ಡಿ. 1ರ ಮಧ್ಯಾಹ್ನ 3 ಗಂಟೆಗೆ ವಿಜ್ಞಾನ ಭವನಕ್ಕೆ ಸಭೆಗೆ ಆಹ್ವಾನಿಸಲಾಗಿದೆ' ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಭವಿಷ್ಯದಲ್ಲಿನ ತೆರಬೇಕಾದ ದಂಡದ ಬಗ್ಗೆ ರೈತರ ಎಚ್ಚರಿಕೆ
ಆದರೆ ಮಾತುಕತೆಗೆ 32 ಸಂಘಟನೆಗಳ ರೈತ ಮುಖಂಡರನ್ನು ಮಾತ್ರ ಆಹ್ವಾನಿಸಲಾಗಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಇರುವ ಎಲ್ಲ 500ಕ್ಕೂ ಹೆಚ್ಚಿನ ಸಂಘಟನೆಗಳನ್ನು ಮಾತುಕತೆಗೆ ಕರೆಯಬೇಕು ಎಂದು ಆಗ್ರಹಿಸಿದ್ದಾರೆ.