ಹಾಸನ; ಮಳೆಗೆ ನೆಲಕಚ್ಚಿದ ಬೆಳೆ, ಚಿಂತಾಕ್ರಾಂತರಾದ ರೈತರು
ಹಾಸನ, ನವೆಂಬರ್ 21; ಹಾಸನದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ರೈತರ ಬದುಕಿನೊಂದಿಗೆ ಚೆಲ್ಲಾಟವಾಡಿದ್ದು, ಇದೀಗ ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರನ್ನು ಚಿಂತೆಗೆ ದೂಡಿದೆ.
ಈಗಾಗಲೇ ಮಳೆಯಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ವಾಣಿಜ್ಯ ಬೆಳೆಗಳು ಮತ್ತು ತರಕಾರಿಗಳು ನೆಲಕಚ್ಚಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದು ಅದು ಕಟಾವಿಗೆ ಬರುತ್ತಿದ್ದಂತೆಯೇ ಎಡೆ ಬಿಡದೆ ಸುರಿದ ಮಳೆ ಫಸಲನ್ನು ನಾಶ ಮಾಡಿದೆ.
ಹಾಸನ; ಮಳೆಗೆ ಕಾಫಿ ಬೆಳಗೆ ಹಾನಿ, ಸಮೀಕ್ಷೆಗೆ ಸೂಚನೆ
ಇದರಿಂದ ಮುಂದೇನು ಗತಿ? ಎಂದು ರೈತರು ಆಕಾಶ ನೋಡುವಂತಾಗಿದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿದಿತ್ತು. ಹೀಗಾಗಿ ಎಂದಿನಂತೆ ಕಾಲಕ್ಕನುಗುಣಾಗಿ ತಮ್ಮ ಜಮೀನಿನಲ್ಲಿ ಏನು ಬೆಳೆ ಬೆಳೆಯ ಬಹುದೋ ಅದೆಲ್ಲವನ್ನು ರೈತರು ಬೆಳೆದಿದ್ದರು. ಕೊರೊನಾ ಮಹಾಮಾರಿಯ ಸಂಕಷ್ಟದ ನಡುವೆಯೂ ಬ್ಯಾಂಕ್ ಇನ್ನಿತರ ಮೂಲಗಳಿಂದ ಸಾಲ ತಂದು ರಾಗಿ, ಮೆಕ್ಕೆಜೋಳ ಇನ್ನು ಕೆಲವರು ಭತ್ತ ಬೆಳೆದಿದ್ದರು. ಆಗಾಗ್ಗೆ ಮಳೆ ಸುರಿಯುತ್ತಿದ್ದರಿಂದ ಬೆಳೆ ಹುಲುಸಾಗಿ ಬಂದಿತ್ತು.
ಹಾಸನ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ; ತತ್ತರಿಸಿದ ಕಾಫಿ ಬೆಳೆಗಾರರು
ಉತ್ತಮ ಫಸಲು ಸಿಕ್ಕಿ ಈ ಬಾರಿಯಾದರೂ ನಮ್ಮ ಸಂಕಷ್ಟ ನೀಗುತ್ತದೆ. ಒಂದಷ್ಟು ಹಣ ಬರಬಹುದೆಂದು ಬೆಳೆಗಾರರು ನಂಬಿದ್ದರು. ಆದರೆ ಮಳೆಗಾಲ ಮುಗಿದರೂ ಮಳೆ ಬಿಡದೆ ಸುರಿಯುವುದನ್ನು ಕಂಡ ರೈತರು ಬೆಚ್ಚಿ ಬಿದ್ದಿದ್ದರು. ಒಂದೆಡೆ ರಾಗಿ ಮತ್ತು ಜೋಳ ಕಟಾವಿಗೆ ಬರಲಾರಂಭಿಸಿತ್ತು. ಎಲ್ಲವೂ ಚೆನ್ನಾಗಿದ್ದರೆ ಇಷ್ಟರಲ್ಲಿಯೇ ಕಟಾವು ಕಾರ್ಯ ನಡೆಯಬೇಕಿತ್ತು. ಆದರೆ ಇದ್ದಕ್ಕಿಂತೆ ಸುರಿದ ಅಕಾಲಿಕ ಮಳೆ ರೈತರ ಕನಸನ್ನು ಭಗ್ನ ಮಾಡಿದೆ.
ಕರ್ನಾಟಕ; ನವೆಂಬರ್ 23ರ ಬಳಿಕ ತಗ್ಗಲಿದೆ ಮಳೆ ಆರ್ಭಟ
ರೈತರ ಮನೆಗಳಲ್ಲಿ ಸೂತಕ ವಾತಾವರಣ
ಈಗ ಹಾಸನ ಜಿಲ್ಲೆಯಾದ್ಯಂತ ಮಳೆಗೆ ತುತ್ತಾದ ಬೆಳೆ ನೆಲಕಚ್ಚಿದೆ. ಕಟಾವಿಗೆ ಬಂದಿದ್ದ ಬೆಳೆಗಳು ನೆಲಕ್ಕೆ ಬಿದ್ದು ರಾಗಿ, ಜೋಳಗಳು ಮೊಳಕೆ ಬರುತ್ತಿವೆ. ಮಳೆ ಮುಂದುವರೆದರೆ ಭತ್ತದ ಕೊಯ್ಲು ಮಾಡುವುದು ಕಷ್ಟವಾಗಲಿದೆ. ಮಳೆಯಿಂದಾಗಿ ನಾಶವಾಗುತ್ತಿರುವ ಫಸಲನ್ನು ನೋಡುತ್ತಿರುವ ರೈತ ಕಣ್ಣೀರಿಡುತ್ತಿದ್ದಾನೆ. ರೈತರ ಮನೆಗಳನ್ನು ಸೂತಕ ಆವರಿಸಿದೆ.
ಮಳೆಯಿಂದಾಗಿ ಬೆಳೆಗಳಿಗೆ ಹಾನಿ
ಹಾಸನ ಜಿಲ್ಲೆಯು ಅರೆಮಲೆನಾಡು ಆದ ಕಾರಣ ಹವಾಗುಣಕ್ಕೆ ಹೊಂದಿಕೊಂಡು ಬೆಳೆಯುವ ಹಲವು ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಆದರೂ ಈ ಸಮಯದಲ್ಲಿ ಜೋಳ, ರಾಗಿ ಮತ್ತು ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರೈತರ ಬದುಕು ಹಸನಾಗುತ್ತಿತ್ತು. ಆದರೆ ಅಕಾಲಿಕ ಮಳೆ ಮಾತ್ರ ಅವರ ಕನಸುಗಳಿಗೆ ಎಳ್ಳುನೀರು ಬಿಟ್ಟಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಸರ್ಕಾರ ರೈತರ ನೆರವಿಗೆ ಧಾವಿಸಬೇಕು
ಈ ಕುರಿತಂತೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ವೀಕ್ಷಿಸಿರುವ ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಹೆಚ್.ಯೋಗರಮೇಶ್, "ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಫಸಲಿಗೆ ಬಂದಿದ್ದ ವಿವಿಧ ಬೆಳೆಗಳು ನಾಶವಾಗಿದ್ದು, ಬೆಳೆ ನಷ್ಟವನ್ನು ರೈತರು ಅನುಭವಿಸುತ್ತಿರುವುದರಿಂದ ಸರ್ಕಾರ ರೈತರ ನೆರವಿಗೆ ಧಾವಿಸಬೇಕಾಗಿದೆ" ಎಂದು ಮನವಿ ಮಾಡಿದ್ದಾರೆ.
ಚಿಂತೆಯಲ್ಲಿ ಕಾಲ ಕಳೆಯುತ್ತಿರುವ ರೈತರು
ಒಂದು ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯಲು ಕನಿಷ್ಟ 25ಸಾವಿರ ವೆಚ್ಚವಾಗುತ್ತದೆ. ಅದೇ ರೀತಿ ರಾಗಿ ಬೆಳೆಯಲು 10 ಸಾವಿರ ರೂ ವೆಚ್ಚ ತಗಲುತ್ತದೆ. ಇನ್ನು ಭತ್ತ ಕೃಷಿಗೆ ಕನಿಷ್ಟ 30 ಸಾವಿರ ಬೇಕಾಗುತ್ತದೆ. ಹೀಗಿರುವಾಗ ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ನಾಶವಾದರೆ ರೈತರು ಜೀವನ ಮಾಡುವುದಾದರೂ ಹೇಗೆಂಬ ಚಿಂತೆ ಕಾಡಲಾರಂಭಿಸಿದೆ.
ಇನ್ನು ಜಿಲ್ಲೆಯ ಸಕಲೇಶಪುರ, ಬೇಲೂರು ಮೊದಲಾದ ಕಡೆಗಳಲ್ಲಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಈಗಾಗಲೇ ಅರೇಬಿಕಾ ಕಾಫಿ ಫಸಲಿಗೆ ಬಂದಿದ್ದು ಅದನ್ನು ಕೊಯ್ಲು ಮಾಡಿ ಬಿಸಿಲಿನಲ್ಲಿ ಒಣಗಿಸಬೇಕಾಗಿತ್ತು. ಆದರೆ ಮಳೆಯಿಂದಾಗಿ ಕೊಯ್ಲು ಮಾಡಲಾಗುತ್ತಿಲ್ಲ. ಹೀಗಾಗಿ ಅದು ನೆಲಕ್ಕುರುಳುತ್ತಿದೆ. ಪ್ರಾಣಿ ಪಕ್ಷಿಗಳು ತಿಂದು ಹಾಳು ಮಾಡುತ್ತಿವೆ. ಕಾಫಿ ಕೊಯ್ಲು ಮಾಡಿದರೂ ಮಳೆಗೆ ಒಣಗಿಸುವುದು ಕಷ್ಟವಾಗುತ್ತಿದೆ. ಒಟ್ಟಾರೆ ಎಲ್ಲರಿಗೂ ಅಕಾಲಿಕ ಮಳೆ ಸಂಕಷ್ಟ ತಂದಿದ್ದಂತು ನಿಜ.
ಸರ್ಕಾರಕ್ಕೆ ವರದಿ ನೀಡಬೇಕಿದೆ
"ಕಳೆದ ಒಂದೂವರೆ ತಿಂಗಳಿನಿಂದಲೂ ಹಿಂಗಾರು ಮಳೆಯ ಅಬ್ಬರ ಜೋರಾಗಿದೆ. ಇದರ ಪರಿಣಾಮ ಒಂದು ತಿಂಗಳ ಹಿಂದೆಯೇ ಕಟಾವಿಗೆ ಬಂದಿರುವ ಮೆಕ್ಕೆಜೋಳ, ರಾಗಿ ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಸಾವಿರಾರು ಹೆಕ್ಟೇರ್ ನಲ್ಲಿ ಬೆಳೆದಿದ್ದ ಭತ್ತ ಹಾಗೂ ಇತರೆ ಬೆಳೆಗಳು ನೆಲಕ್ಕೆ ಬಿದ್ದು ಅಪಾರ ಹಾನಿಯಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ನಿಖರ ಮಾಹಿತಿಯನ್ನು ಪಡೆದು ಸರಕಾರಕ್ಕೆ ವರದಿಯನ್ನು ನೀಡಬೇಕಾಗಿದೆ" ಎಂದು ಹೆಚ್.ಯೋಗರಮೇಶ್ ಹೇಳಿದ್ದಾರೆ.
Recommended Video