ಈಗಲಾದರೂ ಕೃಷಿ ವಿರೋಧಿ ಕಾಯ್ದೆ ವಾಪಸ್ ತೆಗೆದುಕೊಳ್ಳಿ: ರಾಹುಲ್ ಗಾಂಧಿ ಆಗ್ರಹ
ನವದೆಹಲಿ, ಜನವರಿ 26: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಗಣರಾಜ್ಯೋತ್ಸವ ದಿನದಂದು ಆಯೋಜಿಸಿದ್ದ ಟ್ರ್ಯಾಕ್ಟರ್ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದೆ. ಘಟನೆಯಲ್ಲಿ ಟ್ರ್ಯಾಕ್ಟರ್ ಮಗುಚಿಬಿದ್ದು ಒಬ್ಬ ರೈತ ಮೃತಪಟ್ಟಿದ್ದಾನೆ. ಕಲ್ಲುತೂರಾಟ, ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗದಂತಹ ಘಟನೆಗಳು ನಡೆದಿದ್ದು, ಅನೇಕ ಪೊಲೀಸರಿಗೆ ಗಾಯಗಳಾಗಿವೆ. ವಾಹನಗಳು ಜಖಂಗೊಂಡಿವೆ. ಈ ಹಿಂಸಾಚಾರದ ಘಟನೆಯನ್ನು ಮುಂದಿಟ್ಟುಕೊಂಡು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
'ದೇಶದ ಒಳಿತಿಗಾಗಿ ಕೃಷಿ ವಿರೋಧಿ ಕಾನೂನನ್ನು ಹಿಂದಕ್ಕೆ ತೆಗೆದುಕೊಳ್ಳಿ. ಹಿಂಸಾಚಾರವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಯಾರಿಗಾದರೂ ನೋವಾದರೆ ನಮ್ಮ ದೇಶಕ್ಕೆ ಹಾನಿಯಾಗುತ್ತದೆ' ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಪೊಲೀಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಪ್ರಯತ್ನ
ಕೆಂಪುಕೋಟೆಯಲ್ಲಿ ಪ್ರತಿಭಟನಾಕಾರರು ತಮ್ಮ ಬಾವುಟ ಹಾರಿಸಿದ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, 'ಅತಿ ದುರದೃಷ್ಟಕರ. ನಾನು ಆರಂಭದಿಂದಲೂ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದೆ. ಆದರೆ ಕಾನೂನು ಉಲ್ಲಂಘನೆಯನ್ನು ನಾನು ಕ್ಷಮಿಸುವುದಿಲ್ಲ. ಅದರಲ್ಲಿಯೂ ಗಣರಾಜ್ಯೋತ್ಸವ ದಿನದಂದು ಪವಿತ್ರ ತ್ರಿವರ್ಣ ಧ್ವಜ ಮಾತ್ರ ಕೆಂಪು ಕೋಟೆಯ ಮೇಲೆ ಹಾರಾಡಬೇಕು' ಎಂದು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
Most unfortunate. I have supported the farmers’ protests from the start but I cannot condone lawlessness. And on #RepublicDay no flag but the sacred tiranga should fly aloft the Red Fort. https://t.co/C7CjrVeDw7
— Shashi Tharoor (@ShashiTharoor) January 26, 2021
ಪ್ರತಿಭಟನೆ ವೇಳೆ ಹಿಂಸಾಚಾರ ನಡೆಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ರೈತರ ಪರ-ವಿರೋಧದ ಚರ್ಚೆ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದೆ. ಇದು ಖಲಿಸ್ತಾನಿಗಳ ಕೃತ್ಯ. ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿರುವುದಕ್ಕೆ ಈ ಘಟನೆ ಸಾಕ್ಷಿ. ಅವರು ತಮ್ಮ ಧ್ವಜವನ್ನು ಕೆಂಪುಕೋಟೆಯಲ್ಲಿ ಹಾರಿಸಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ.
ಅಲ್ಲಿ ಹಾರಿಸಿರುವುದು ಸಿಖ್ಖರ ಧಾರ್ಮಿಕ ಬಾವುಟವನ್ನು. ಅಲ್ಲದೆ ಕೆಂಪೊಕೋಟೆಯ ನಿಗದಿತ ಜಾಗದಲ್ಲಿ ತ್ರಿವರ್ಣ ಧ್ವಜ ಎತ್ತರದಲ್ಲಿ ಹಾರಾಡುತ್ತಿದೆ. ಈ ಬಾವುಟ ಹಾರಿಸುವುದರಿಂದ ದೇಶದ ಸಾರ್ವಭೌಮತೆಗೆ ಯಾವುದೇ ರೀತಿ ಧಕ್ಕೆಯಾಗಿಲ್ಲ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.