ರೈತರು ಇನ್ನೆಷ್ಟು ಪ್ರಾಣತ್ಯಾಗ ಮಾಡಬೇಕು? ರಾಹುಲ್ ಗಾಂಧಿ ಪ್ರಶ್ನೆ
ನವದೆಹಲಿ, ಡಿಸೆಂಬರ್ 12: ನೂತನ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕಳೆದ 17 ದಿನಗಳಲ್ಲಿ 11 ಮಂದಿ ರೈತರು ಜೀವಕಳೆದುಕೊಂಡಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದೆ. ಈ ವಿವಾದಾತ್ಮಕ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಇನ್ನೂ ಎಷ್ಟು ರೈತರು ಪ್ರಾಣತ್ಯಾಗ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರೈತರ ಪ್ರತಿನಿಧಿಗಳ ನಡುವೆ ಕಳೆದ ಕೆಲವು ವಾರಗಳಲ್ಲಿ ಕನಿಷ್ಠ ಐದು ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಯಾವ ಸಭೆಯಲ್ಲಿಯೂ ತಾರ್ಕಿಕ ಅಂತ್ಯ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೂರು ಕಾಯ್ದೆಗಳನ್ನು ರದ್ದುಗೊಳಿಸಲೇಬೇಕು ಎಂಬ ಬೇಡಿಕೆಗೆ ರೈತರು ಅಂಟಿಕೊಂಡಿದ್ದರೆ, ಕೇಂದ್ರ ಸರ್ಕಾರವು ಕಾಯ್ದೆಗಳನ್ನು ರದ್ದುಪಡಿಸುವ ಮಾತೇ ಇಲ್ಲ. ಬೇಕಿದ್ದರೆ ಕೆಲವು ತಿದ್ದುಪಡಿ ಮಾಡಲು ಸಿದ್ಧ ಎಂದು ಪಟ್ಟು ಹಿಡಿದಿದೆ.
"ಇಂದಿರಾ ಗಾಂಧಿ ಮಾಡಿದ ತಪ್ಪನ್ನೇ ಈಗ ಮೋದಿ ಮಾಡುತ್ತಿದ್ದಾರೆ"
'ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಮಾಡಲು ರೈತರು ಇನ್ನೂ ಎಷ್ಟು ತ್ಯಾಗಗಳನ್ನು ಮಾಡಬೇಕು?' ಎಂದು ರಾಹುಲ್ ಗಾಂಧಿ ಟ್ವೀಟ್ನಲ್ಲಿ ಕೇಳಿದ್ದಾರೆ. ಕಳೆದ 17 ದಿನಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ 11 ರೈತರು ಸಂಘರ್ಷ ಮತ್ತು ಅನಾರೋಗ್ಯಗಳಿಂದ ಮೃತಪಟ್ಟಿದ್ದಾರೆ ಎಂಬ ವರದಿಯನ್ನು ಅವರು ಹಂಚಿಕೊಂಡಿದ್ದಾರೆ.
'ಕಳೆದ 17 ದಿನಗಳಲ್ಲಿ 11 ರೈತ ಸಹೋದರರು ಹುತಾತ್ಮರಾಗಿದ್ದರೂ ಮೋದಿ ಸರ್ಕಾರಕ್ಕೆ ಮರುಕ ಬರುತ್ತಿಲ್ಲ. ಅವರು ಈಗಲೂ ತಮ್ಮ 'ಹಣದಾತರ' ಜತೆಗೆ ನಿಂತಿದ್ದಾರೆಯೇ ವಿನಾ, 'ಅನ್ನದಾತರ' ಜತೆಗೆ ಅಲ್ಲ' ಎಂದು ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಆರೋಪಿಸಿದ್ದಾರೆ.
ಮತ್ತಷ್ಟು ಟ್ರೆಂಡ್ ಆಗುತ್ತಿದೆ ಜಿಯೋ ಸಿಮ್ ಬಹಿಷ್ಕಾರ ಅಭಿಯಾನ
'ರಾಜಧರ್ಮವು ದೊಡ್ಡದೋ, ಮೊಂಡು ಹಠವು ದೊಡ್ಡದೋ? ಎಂಬುದನ್ನು ತಿಳಿದುಕೊಳ್ಳಲು ದೇಶ ಬಯಸಿದೆ' ಎಂದು ಸುರ್ಜೇವಾಲ ಕೇಳಿದ್ದಾರೆ.
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್