ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ಕೊನೆಗೂ ರೈಲು ಸಂಚಾರಕ್ಕೆ ಅವಕಾಶ ನೀಡಿದ ರೈತರು
ಚಂಡೀಗಡ, ನವೆಂಬರ್ 21: ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಲವು ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ನ ರೈತರು ಕೊನೆಗೂ ರೈಲು ಸಂಚಾರಕ್ಕೆ ಅವಕಾಶ ನೀಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ರೈಲು ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸುತ್ತಿರುವ ರೈತರು ಸೋಮವಾರ ರಾತ್ರಿಯಿಂದ ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲು ಸಂಚಾರ ಪುನರಾರಂಭಕ್ಕೆ ಅವಕಾಶ ನೀಡಲು ಒಪ್ಪಿಕೊಂಡಿದ್ದಾರೆ. ರೈತ ಸಂಘಟನೆಗಳ ಒಕ್ಕೂಟ ಮತ್ತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಡುವಿನ ಸಭೆಯ ಬಳಿಕ ಅವರು ಈ ಒಪ್ಪಿಗೆ ನೀಡಿದ್ದಾರೆ.
15 ದಿನಗಳ ಅವಧಿಗೆ ರೈಲು ಹಳಿಗಳಿಗೆ ಒಡ್ಡಿರುವ ತಡೆಗಳನ್ನು ತೆರವುಗೊಳಿಸುತ್ತೇವೆ. ಆದರೆ ಈ ನಿಗದಿತ ಅವಧಿಯ ಒಳಗೆ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಪರಿಹರಿಸಲು ಯಾವುದೇ ಕ್ರಮ ತೆಗೆದುಕೊಳ್ಳದೆ ಹೋದರೆ ಅದನ್ನು ಮತ್ತೆ ಜಾರಿಗೊಳಿಸುತ್ತೇವೆ ಎಂದು ರೈತ ಒಕ್ಕೂಟ ಎಚ್ಚರಿಕೆ ನೀಡಿದೆ.
ಪಂಜಾಬ್ ನಲ್ಲಿ ತಾವೇ ಬೆಳೆದ ಬೆಳೆಗೆ ಬೆಂಕಿ ಹಚ್ಚಿದ ರೈತರು
ಈ ಪ್ರಕಟಣೆ ಮಾಡಿದ ಕೆಲವೇ ಸಮಯದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ರೈತರ ನಿರ್ಧಾರವನ್ನು ಶ್ಲಾಘಿಸಿದರು ಮತ್ತು ರಾಜ್ಯದಲ್ಲಿ ರೈಲು ಸಂಚಾರವನ್ನು ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
'ರೈತರ ಒಕ್ಕೂಟಗಳೊಂದಿಗೆ ಫಲಪ್ರದ ಸಭೆ ನಡೆಸಿದ್ದೇನೆ. ನವೆಂಬರ್ 23ರ ರಾತ್ರಿಯಿಂದ ರೈತ ಒಕ್ಕೂಟಗಳು 15 ದಿನಗಖವರೆಗೆ ರೈಲು ತಡೆಯನ್ನು ತೆರವುಗಳಿಸಲು ನಿರ್ಧರಿಸಿವೆ ಎಂದು ತಿಳಿಸಲು ಹರ್ಷವಾಗುತ್ತಿದೆ. ಈ ಹೆಜ್ಜೆಯನ್ನು ನಾನು ಸ್ವಾಗತಿಸುತ್ತೇನೆ, ಇದು ನಮ್ಮ ಆರ್ಥಿಕತೆಯನ್ನು ಸಹಜ ಸ್ಥಿತಿಗೆ ಮರಳಿಸಲಿದೆ' ಎಂದು ತಿಳಿಸಿದ್ದಾರೆ.
ಪಂಜಾಬ್ ನಲ್ಲಿ 15ನೇ ದಿನಕ್ಕೆ ಕಾಲಿಟ್ಟ "ರೈಲ್ ರೋಖೋ" ಚಳುವಳಿ
'ಪಂಜಾಬ್ನಲ್ಲಿ ಇದರೊಂದಿಗೆ ರೈಲು ಸೇವೆಗಳನ್ನು ಪುನರಾರಂಭಿಸುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡುತ್ತೇನೆ' ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಅಮರಿಂದರ್ ಅವರು ರಾಜ್ಯದಲ್ಲಿ ರೈಲು ಸೇವೆಗಳ ಸಂಚಾರವನ್ನು ಹಿಂದಿನಂತೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.