ಟೆಂಟ್ಗಳು ಖಾಲಿ ಖಾಲಿ... ಘಾಜಿಪುರದಲ್ಲಿ ತಗ್ಗುತ್ತಿದೆಯಾ ಪ್ರತಿಭಟನಾಕಾರರ ಸಂಖ್ಯೆ?
ನವದೆಹಲಿ, ಫೆಬ್ರವರಿ 27: ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಕೈಗೊಂಡು ಮೂರು ತಿಂಗಳುಗಳು ಕಳೆಯುತ್ತಿವೆ. ಈವರೆಗೆ ಸರ್ಕಾರ-ರೈತರ ನಡುವೆ ಹಲವು ಮಾತುಕತೆಗಳು ನಡೆದಿದ್ದರೂ ಈ ಬಿಕ್ಕಟ್ಟು ಕೊನೆಗೊಳಿಸಲು ಸಾಧ್ಯವಾಗಿಲ್ಲ.
ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭ ನಡೆದ ಗಲಭೆ ಈ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ. ಜೊತೆಗೆ ಘಾಜಿಪುರ ಗಡಿಯಲ್ಲಿ ಪ್ರತಿಭಟನಾಕಾರರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಕಳೆದ ಒಂದು ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಿರುವ ರೈತರ ಸಂಖ್ಯೆ ಕಡಿಮೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಪ್ರತಿಭಟನೆ ಸ್ಥಳದಲ್ಲಿ ಖಾಲಿ ಟೆಂಟ್ಗಳು ಗೋಚರಿಸುತ್ತಿವೆ.
ಕರ್ನಾಟಕದಲ್ಲಿ ಸತತ ಮೂರು ದಿನ ರಾಕೇಶ್ ಟಿಕಾಯತ್ ಭಾಷಣ
ಆದರೆ ಈ ವಾದವನ್ನು ರೈತರು ತಳ್ಳಿಹಾಕಿದ್ದಾರೆ. ಪ್ರತಿಭಟನೆಗೆ ಮತ್ತಷ್ಟು ರೈತರು ಸೇರುತ್ತಿದ್ದಾರೆ, ಕೆಲವರು ಮರಳಿ ಹೋಗುತ್ತಿದ್ದಾರೆ. ಇದು ಕೊಯ್ಲಿನ ಸಮಯವಾದ್ದರಿಂದ ಒಂದಷ್ಟು ಬದಲಾವಣೆಗಳಾಗಿವೆ ಎಂದು ತಿಳಿಸಿದ್ದಾರೆ.
ರೈತ ನಾಯಕ ರಾಕೇಶ್ ಟಿಕಾಯತ್ ಭಾನುವಾರ ಸಹರನ್ಪುರದಲ್ಲಿ ಮೆರವಣಿಗೆ ನಡೆಸುತ್ತಿದ್ದಾರೆ. ಹೀಗಾಗಿ ಬಹುಪಾಲು ರೈತರು ಅಲ್ಲಿಗೆ ತೆರಳಿದ್ದಾರೆ. ಎರಡು ಪಂಚಾಯತ್ ಗಳ ನಂತರ ಘಾಜಿಪುರ ಗಡಿಯಲ್ಲಿ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರಲಿದ್ದಾರೆ. ಸದ್ಯಕ್ಕೆ 20-25 ಟ್ರ್ಯಾಕ್ಟರ್ಗಳು ಪ್ರತಿಭಟನಾ ಸ್ಥಳದಲ್ಲಿ ನಿಂತಿವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮಾಧ್ಯಮ ಮುಖ್ಯಸ್ಥ ಧರ್ಮೇಂದ್ರ ಮಲಿಕ್ ಸಮರ್ಥಿಸಿಕೊಂಡಿದ್ದಾರೆ.
"ಪ್ರತಿಭಟನಾಕಾರರು ಕಡಿಮೆಯಾಗಿದ್ದಾರೆ ಎಂದು ಹೇಳಿದವರಾರು? ಎರಡು ದಿನಗಳ ನಂತರ ರುದ್ರಾಪುರದಲ್ಲಿ ಮಹಾಪಂಚಾಯತ್ನಲ್ಲಿ ಎಲ್ಲಾ ರೈತರೂ ಅಧಿಕ ಮಟ್ಟದಲ್ಲಿ ಭಾಗವಹಿಸಲಿದ್ದಾರೆ" ಎಂದು ಘಾಜಿಪುರ ಕಿಸಾನ್ ಆಂದೋಲನ ಸಮಿತಿ ಮುಖಂಡ ಜಗತಾರ್ ಸಿಂಗ್ ಹೇಳಿದ್ದಾರೆ.
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್ 26 ರಿಂದ ದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ.