ಕಬ್ಬಿಗೆ ನ್ಯಾಯಯುತ ಬೆಲೆಗೆ ಒತ್ತಾಯಿಸಿ ಮೈಸೂರಿನಲ್ಲಿ ನ.2ಕ್ಕೆ ಧರಣಿ
ಮೈಸೂರು, ಅಕ್ಟೋಬರ್ 30: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಲು ಒತ್ತಾಯಿಸಿ ನವೆಂಬರ್ 2ರಂದು ರಾಜ್ಯಾದ್ಯಂತ ಜಿಲ್ಲಾ ಆಡಳಿತ ಮತ್ತು ತಾಲೂಕು ಕಚೇರಿ ಮುಂದೆ ಕಬ್ಬು ಬೆಳೆಗಾರರು ಧರಣಿ ನಡೆಸಲಿರುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸುತ್ತಿರುವ ಕಾರಣ ಕಬ್ಬಿನ ಎಫ್ ಪಿಆರ್ ದರ ನಿಗದಿ ಕಳೆದ ವರ್ಷಕ್ಕಿಂತ 2020-21ನೇ ಸಾಲಿಗೆ ಕಡಿಮೆ ಆಗಿದೆ. ರಾಜ್ಯದಲ್ಲಿ ಎಸ್ ಎ ಪಿ ಕಾಯ್ದೆ ಜಾರಿ ಬಂದ ಮೇಲೆ ಕಳೆದ 3 ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಇಳುವರಿ ಕಡಿಮೆ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದರು.
ವಿಡಿಯೋ: ಕಬ್ಬಿನ ಬಾಕಿ ಬಿಲ್ ಪಾವತಿಸದ ಕಾರ್ಖಾನೆ ವಿರುದ್ಧ ರೈತನ ಆಕ್ರೋಶ
ಇದೇ ತಿಂಗಳ 15ರಂದು ನಡೆದ ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದಂತೆ, ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ 10 ದಿನದ ಒಳಗೆ ರಾಜ್ಯದಲ್ಲಿ ಎಸ್ ಎ ಪಿ ಬೆಲೆ ನಿಗದಿ ಮಾಡುವುದಾಗಿ ತಿಳಿಸಿದ್ದರು. ಆದರೆ 15 ದಿನಗಳಾದರೂ ಯಾವುದೇ ತೀರ್ಮಾನ ಪ್ರಕಟಿಸದೆ ನಿರ್ಲಕ್ಷಿಸಿದ್ದಾರೆ. ಒಪ್ಪಂದ ಮಾಡಿಕೊಂಡ ರೈತರ ಕಬ್ಬಿನ ಕಟಾವು 16-17 ತಿಂಗಳಾಗುತ್ತಿದೆ. ಜಿಲ್ಲಾಡಳಿತದ ಅನುಮತಿ ಇಲ್ಲದೆ ಹೊರ ಜಿಲ್ಲೆಯಿಂದ ಕಬ್ಬು ತರುತ್ತಿರುವ ಕಾರಣ ಕಾರ್ಖಾನೆ ವ್ಯಾಪ್ತಿಯ ರೈತರಿಗೆ ಕಬ್ಬು ಕಟಾವು ವಿಳಂಬವಾಗುತ್ತಿದೆ. ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ನಡುವೆ ಕಾನೂನುಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ರಾಜ್ಯ ಸರ್ಕಾರವೇ ಸೂಚಿಸಿದರೂ ಜಾರಿ ಮಾಡಿಲ್ಲ. ಇದರಿಂದ ಕಬ್ಬಿನ ದರ ನಿಗದಿಯಲ್ಲಿಯೂ ಅನ್ಯಾಯವಾಗುತ್ತಿದೆ. ಈಗ ನಿಗದಿ ಮಾಡಿರುವ ಕಬ್ಬಿನ ಎಫ್ ಆರ್ ಪಿ ದರ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭಿಸಲು ತೀರ್ಮಾನಿಸಿದೆ. ಆದರೆ ಖರೀದಿ ಮಾನದಂಡವನ್ನು ಬದಲಾಯಿಸಬೇಕು. ಪ್ರತಿ ರೈತನಿಂದ ಕನಿಷ್ಠ 100 ಕ್ವಿಂಟಾಲ್ ಭತ್ತ ಖರೀದಿ ಮಾಡುವಂತಾಗಬೇಕು. ಕನಿಷ್ಠ ಬೆಂಬಲ ಬೆಲೆಗೆ ಪ್ರೋತ್ಸಾಹಧನ 200 ಹೆಚ್ಚುವರಿ ನೀಡುವ ಯೋಜನೆ ಜಾರಿಯಾಗಬೇಕು ಎಂದು ಆಗ್ರಹಿಸಿದರು.