ಹಸಿರು ಶಾಲಿನ ಹರಿಕಾರ ಪ್ರೊ. ನಂಜುಂಡಸ್ವಾಮಿ ಜನ್ಮದಿನ; ದಿಗ್ಗಜರ ಮಾತುಗಳು...
ರೈತ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಎರಡು ದಶಕಕ್ಕೂ ಹೆಚ್ಚು ಕಾಲ ಈ ನಾಡಿನ ರೈತ ಸಮುದಾಯದ ದನಿಯಾಗಿದ್ದವರು. ಹಸಿರು ಶಾಲಿನ ಹರಿಕಾರ ಎಂದೇ ಖ್ಯಾತರಾಗಿದ್ದ ಅವರು ರೈತ ಹೋರಾಟಕ್ಕೆ ಹೊಸ ಭಾಷ್ಯ ಬರೆದವರು. ನಂಜುಂಡಸ್ವಾಮಿ ಅವರ ಜನ್ಮದಿನದ ಸ್ಮರಣಾರ್ಥ ದಿಗ್ಗಜರ ಒಡನಾಟದ ಮೆಲುಕು ಇಲ್ಲಿದೆ...
ಎಂಡಿಎನ್ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಚಳವಳಿ ಪ್ರವಾಸದಲ್ಲಿದ್ದರು. ಅದೇ ಸಂದರ್ಭ ನೀನಾಸಂ ತಿರುಗಾಟ ತಂಡ ಮಧುಗಿರಿಯಲ್ಲಿದೆ. ತಂಡದೊಂದಿಗಿದ್ದ ನಾಟಕ ನಿರ್ದೇಶಕ ನಟರಾಜ್ ಹೊನ್ನವಳ್ಳಿಗೆ ಪ್ರೊ. ಮಧುಗಿರಿಯಲ್ಲಿರುವ ಸುದ್ದಿ ತಿಳಿದು ಅವರನ್ನು ಭೇಟಿ ಮಾಡಲು ಐಬಿಗೆ ಹೋದರು. (ಹೊನ್ನವಳ್ಳಿ ರೈತ ಚಳವಳಿಯಲ್ಲಿದ್ದವರು-ಈಗ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ).
ಪ್ರೊ ಕಂಡವರು where abouts ವಿಚಾರಿಸುತ್ತಾರೆ. ಹೊನ್ನವಳ್ಳಿ ತಾನು ನಾಟಕ ಮಾಡಿಸುತ್ತಿರುವುದಾಗಿಯೂ ನೀನಾಸಂ ತಿರುಗಾಟ ತಂಡವನ್ನು ಅಲ್ಲಿಗೆ ಕರೆತಂದಿರುವುದಾಗಿಯೂ ತಿಳಿಸುತ್ತಾರೆ. ಕೂಡಲೇ ಪ್ರೊ "ಸುಬ್ಬಣ್ಣ ಏನ್ ಇನ್ನೂ ನಾಟಕ ಮಾಡಿಸ್ತಾನೇ ಇದಾನೋ" ಎನ್ನುತ್ತಾರೆ. ಹೌದೆಂದ ಹೊನ್ನವಳ್ಳಿ ಕುಶಲೋಪರಿ ಮಾತು ಮುಗಿಸಿ ಹೊರಡುತ್ತಾರೆ.
ಪ್ರೊ. ಎಂಡಿಎನ್ ಚಳವಳಿ ಮಾರ್ಗದ ಕುತೂಹಲಕಾರಿ ಘಟನೆಗಳು
ತಿರುಗಾಟ ಮುಗಿಸಿ ವಾಪಸ್ ನೀನಾಸಂಗೆ ಹೋದಾಗ ಅಡಕೆ ಎಲೆ ಜಗಿಯುತ್ತಾ ಕುಳಿತಿದ್ದ ಸುಬ್ಬಣ್ಣ ಅವರನ್ನು ಕಂಡು ಪ್ರೊ ಎಂಡಿಎನ್ ಸಿಕ್ಕಿದ್ದ ವಿಷಯ ಪ್ರಸ್ತಾಪ ಮಾಡಿದ ಕೂಡಲೇ "ಅವನೇನ್ ಇನ್ನೂ ಚಳವಳಿ ಮಾಡ್ತಿದ್ದಾನಾ" ಅಂದರಂತೆ. ಹೊನ್ನವಳ್ಳಿಗೆ ಇಬ್ಬರ ಮಾತೂ ಡಿಕ್ಕಿ ಹೊಡೆದಂತಾಗಿ ಹೊಟ್ಟೆ ತುಂಬಾ ನಕ್ಕು ಸುಮ್ಮನಾಗಿದ್ದಾರೆ.
ಗಾಂಧಿ ಕುಟುಂಬದ ಮಂಚದಲ್ಲಿ ಅಂತಿಮ ಯಾತ್ರೆ
ಮಹಾತ್ಮ ಗಾಂಧಿ ಮೊಮ್ಮಗ ರಾಮಚಂದ್ರ ಗಾಂಧಿ ಬೆಂಗಳೂರು ವಿವಿಯಲ್ಲಿ ಕೆಲಕಾಲ ವಿಶೇಷ ಉಪನ್ಯಾಸ ನೀಡಲು ಬಂದಿದ್ದರು. ಬಂದಂದು ಅವರನ್ನು ವಿವಿ ಅತಿಥಿ ಗೃಹಕ್ಕೆ ಬಿಟ್ಟು ಬರಬೇಕಾಗಿಯೂ, ಅವರಿಗೇನು ಬೇಕು ಒದಗಿಸಿ ಬರವಂತೆಯೂ ಸೂಚಿಸಿ ಕಳುಹಿಸಿದ್ದರು. ನಾವು ಅಂತೆಯೇ ಮಾಡಿದೆವು. ಅವರಿಗೆ ಗೆಸ್ಟ್ ಹೌಸ್ ನಲ್ಲಿ ಇರುವುದು ಇಷ್ಟವಾಗಲಿಲ್ಲ. ರಾಜರಾಜೇಶ್ವರಿ ನಗರದಲ್ಲೊಂದು ಮನೆ ಮಾಡಿಕೊಂಡಿದ್ದರು.
ಚುಕ್ಕಿ ನಂಜುಂಡಸ್ವಾಮಿ ಆಗಾಗ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸುತ್ತಿದ್ದದ್ದು ಮತ್ತು ಅವರ ಉಪನ್ಯಾಸಗಳಿಗೆ ಹೋಗುತ್ತಿದ್ದದ್ದು ಸಾಮಾನ್ಯವಾಗಿತ್ತು. ಪ್ರೊ. ಎಂಡಿಎನ್ ಅವರ ಮನೆಯ ಬಳಿ ಬರುತ್ತಿದ್ದ ರೈತ ಸತ್ಯಾಗ್ರಹಿಗಳನ್ನು ಗಮನಿಸುತ್ತಿದ್ದ ಮತ್ತು ರೈತ ಸಂಘದ ಬಗ್ಗೆ ಹೆಚ್ಚು ತಿಳಿದು ಸಂತಸ ವ್ಯಕ್ತಪಡಿಸಿದ್ದ ರಾಮಚಂದ್ರ ಗಾಂಧಿ ತಮ್ಮ ಉಪನ್ಯಾಸ ಮಾಲಿಕೆ ಮುಗಿದ ಮೇಲೆ ಬೇರೆಲ್ಲೋ ಹೊರಡುವುದಿತ್ತು (ಪ್ರಾಯಶಃ ಗೋವಾ ಇರಬೇಕು). ಆಗ ಅವರು ಬಳಸುತ್ತಿದ್ದ ಬೆತ್ತದ ಮಂಚವೊಂದನ್ನು ಪ್ರೊ ಮನೆಯ ಅಂಗಳದಲ್ಲಿರಿಸಿ ಹೋದರು.
ಅಧ್ಯಾಯ 2- ಪ್ರೊ ತೀರಿಹೋದಂದು ಲಾರಿಯಲ್ಲಿ ವೇದಿಕೆ ಕಟ್ಟಲು ನಾನು ಶೈಲು ಮಾಮ (ಪ್ರೊ ಮಡದಿ ಪ್ರತಿಮಾ ಅವರ ತಮ್ಮ) ಬೇಕಾದ ಸಾಮಗ್ರಿಗಳನ್ನು ಹೊಂದಿಸುತ್ತಿದ್ದೆವು. ಆಗ ನಮಗೇ ಅರಿವಿಲ್ಲದೆ ರಾಮಚಂದ್ರ ಗಾಂಧಿ ಅಲ್ಲಿ ಬಿಟ್ಟು ಹೋಗಿದ್ದ ಬೆತ್ತದ ಮಂಚವನ್ನು ಲಾರಿಯಲ್ಲಿ ವೇದಿಕೆ ಕಟ್ಟಲು ಕಳುಹಿಸಿದ್ದೆವು.
ಹೋರಾಟಗಾರನಿಲ್ಲದ ರೈತಸಂಘ : ಪ್ರೊ. ಎಂಡಿಎನ್ ನೆನಪು
ತುಸು ಕಾಲದ ನಂತರ ಅದನ್ನು ನೆನೆದಾಗ ಅಹಿಂಸೆ ಸತ್ಯ ಎಂದು ಹೋರಾಟ ಮಾಡುತ್ತಿದ್ದ ಪ್ರೊ. ಅವರ ಅಂತಿಮ ಯಾತ್ರೆ ಗಾಂಧಿ ಕುಟುಂಬಕ್ಕೆ ಸೇರಿದ ಮಂಚದಲ್ಲಿಯೇ ನಡೆಯಿತಲ್ಲಾ ಅಂದುಕೊಂಡು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು.