ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು
ಕಳೆದ ವರ್ಷ ರಾಜ್ಯದ ಜನತೆ ಕೋವಿಡ್ ಸಂಕಷ್ಟದಲ್ಲಿರುವಾಗ, ವಿಧಾನಸಭೆ ಹಾಗೂ ವಿಧಾನ ಪರಿಷತ್ತುಗಳಲ್ಲಿ ನಿಯಮಾವಳಿಯಂತೆ ವಿಶೇಷ ಚರ್ಚೆಗೆ ಒಳಪಡಿಸದೇ ಕರ್ನಾಟಕ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಅಂಗೀಕರಿಸಿದೆ.
"ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020" ಕೃಷಿ ಭೂಮಿಯು ಐತಿಹಾಸಿಕವಾಗಿ ರೈತರ ವಶದಲ್ಲಿದ್ದು, ಉದ್ಯೋಗದ ಭದ್ರತೆಯನ್ನೊದಗಿಸುತ್ತಿದೆ. ಕೃಷಿ ಭೂ ಹಿಡುವಳಿಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ, ಕೃಷಿಕರಲ್ಲದ ಶ್ರೀಮಂತರ ಕೈಗೆ ವರ್ಗಾಯಿಸುವ ಹುನ್ನಾರವಿದು. ಇದು ಉಪ ಕಸುಬುಗಳನ್ನು ಕಿತ್ತುಕೊಳ್ಳಲಿದೆ, ಗ್ರಾಮೀಣ ಜನತೆಯನ್ನು ತೀವ್ರ ಬಾಧೆಗೀಡು ಮಾಡಿ, ಅವರ ಹಸಿವಿನ ಸಾವುಗಳನ್ನು ಮತ್ತು ಆತ್ಮಹತ್ಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಿದೆ.
ಅದೇ ರೀತಿ, "ಎಪಿಎಂಸಿ ತಿದ್ದುಪಡಿ ಕಾಯ್ದೆ-2020" ಕೃಷಿ ಉತ್ಪನ್ನಗಳ ಬೆಲೆಗಳನ್ನು ಏರಿಳಿತ ಮಾಡಿ ರೈತರನ್ನು ಲೂಟಿ ಮಾಡುವ ದೊಡ್ಡ ವರ್ತಕರು ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ನೆರವಾಗಲಿದೆ. ಇದು ಕೆಲವೇ ವರ್ಷಗಳಲ್ಲಿ ರೈತರನ್ನು ಮತ್ತು ಕೃಷಿ ಆಧರಿಸಿದ ಎಲ್ಲ ಗ್ರಾಮೀಣ ಜನತೆಯ ಬದುಕನ್ನು ಕಿತ್ತುಕೊಳ್ಳಲಿದೆ. ರಾಜ್ಯದ ಸಾರ್ವಜನಿಕ ಒಡೆತನದ ನೂರಾರು ಎಪಿಎಂಸಿಗಳ ಹಲವು ಸಾವಿರ ಕೋಟಿ ಮೊತ್ತದ ಬೆಲೆಬಾಳುವ ಆಸ್ತಿಗಳನ್ನು ಕೊಳ್ಳೆ ಹೊಡೆಯಲು ನೆರವಾಗಲಿದೆ.
"ಜಾನುವಾರು ಹತ್ಯೆ ನಿಷೇದ ತಿದ್ದುಪಡಿ ಕಾಯ್ದೆ-2020" ಸಾರ್ವಜನಿಕ ರಂಗದ ಹೈನು ಉದ್ಯಮವಾದ ಕರ್ನಾಟಕ ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ನಾಶ ಮಾಡಿ, ಕಾರ್ಪೋರೇಟ್ ಲೂಟಿಗೆ ನೆರವಾಗಲಿದೆ. ದಲಿತರು, ಅಲ್ಪಸಂಖ್ಯಾತರು ಮತ್ತಿತರರ ಆಹಾರದ ಹಕ್ಕನ್ನು ಕಸಿದುಕೊಂಡು ಈ ಬಡವರಿಗೆ ಪೌಷ್ಟಿಕ ಆಹಾರ ದೊರೆಯದಂತೆ ಆಕ್ರಮಣ ಮಾಡಲಿದೆ.
ರಾಜ್ಯದ ಜನತೆ ಕೋವಿಡ್ ಸಂಕಷ್ಟದ ನಡುವೆಯು, ಈ ಕುರಿತಂತೆ ವ್ಯಾಪಕವಾದ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರೂ ತಮ್ಮ ಸರಕಾರ ಕಣ್ಣಿದ್ದು ಕುರುಡನಂತೆ ಮತ್ತು ಕಿವಿಯಿದ್ದು ಕಿವುಡನಂತೆ ಲೂಟಿಕೋರ ಜಾಣತನವನ್ನು ಮರೆಯುತ್ತಿರುವುದು ಸರಕಾರದ ಘನತೆಯನ್ನು ಕುಗ್ಗಿಸಿದೆ.
ಈ ಕಾಯ್ದೆಗಳು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಕಲ್ಯಾಣ ರಾಜ್ಯ, ದೇಶದ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ಹಾಗೂ ಸಾರ್ವಭೌಮತೆ ಮತ್ತು ಒಕ್ಕೂಟವಾದಿ ಸ್ವರೂಪದ ಮೇಲೆ ತೀವ್ರ ದಾಳಿ ನಡೆಸಲಿವೆ. ಇವು ಭಾರತದ ಸಂವಿಧಾನದ ವಿರೋಧಿ ನಡೆಗಳಾಗಿವೆ.
ಆದ್ದರಿಂದ, ಈ ಕೂಡಲೇ ರಾಜ್ಯ ಸರಕಾರ ಈ ವಿಧಾನಸಭಾ ಅಧಿವೇಶನದಲ್ಲಿಯೇ ಈ ಎಲ್ಲ ಸಂವಿಧಾನ ಹಾಗೂ ಜನ ವಿರೋಧಿಯಾದ ಕಾಯ್ದೆಗಳನ್ನು ವಾಪಸು ಪಡೆಯಲು ಮತ್ತು ಈ ಕೂಡಲೇ ಅವುಗಳ ಜಾರಿಯನ್ನು ತಡೆಯಲು ಒತ್ತಾಯಿಸಿ ಕಮ್ಯೂನಿಸ್ಟ್ ಪಕ್ಷದ ಹಲವು ಸಂಘಟನೆಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.