ಚಳ್ಳಕೆರೆ ತಾಲ್ಲೂಕಿನಲ್ಲಿ ಖಾಸಗಿ ಟೊಮೆಟೊ ಮಾರುಕಟ್ಟೆ ಪ್ರಾರಂಭ
ಚಿತ್ರದುರ್ಗ, ಜುಲೈ 12: ಮಧ್ಯ ಕರ್ನಾಟಕದ ರೈತರಿಗೆ ಅನುಕೂಲವಾಗಲಿ ಎಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ವ್ಯಾಪ್ತಿಯ ಚಿಕ್ಕಮ್ಮನಹಳ್ಳಿ ಸಮೀಪ ಭಾನುವಾರದಂದು ಖಾಸಗಿ ಟೊಮೆಟೊ ಮಾರುಕಟ್ಟೆ ಪ್ರಾರಂಭ ಮಾಡಲಾಗಿದೆ.
ಅನಂತಪುರ ಗುರುಮೂರ್ತಿ ಹಾಗೂ ದೊಡ್ಡ ಉಳ್ಳಾರ್ತಿ ಗ್ರಾಮದ ವೆಂಕಟೇಶ್ ರೆಡ್ಡಿ ವರ್ತಕರು ಸೇರಿ ಬೃಹತ್ ಖಾಸಗಿ ಟೊಮೆಟೊ ಮಾರುಕಟ್ಟೆ ಕೇಂದ್ರವನ್ನು ಭಾನುವಾರದಿಂದ ಪ್ರಾರಂಭಿಸಿದ್ದು, ಇಬ್ಬರು ವರ್ತಕರು ಸೇರಿ ಟೊಮೆಟೊ ಬೆಳೆಗಾರರ ನೆರವಿಗೆ ಧಾವಿಸಿರುವುದು ವಿಶೇಷವಾಗಿದೆ.
ವಿಶೇಷ ಸುದ್ದಿ: ನೇರಳೆ ಬೆಳೆದು ನೆಮ್ಮದಿ ಜೀವನ ಕಂಡ ಚಿತ್ರದುರ್ಗದ ರೈತ ರವಿಶಂಕರ್
ಇಲ್ಲಿ ಬೆಳೆದ ಟೊಮೆಟೊವನ್ನು ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಕೊಂಡೊಯ್ದು, ಒಂದು ಬಾಕ್ಸ್ಗೆ 40- 50 ರೂ.ಗೆ ಮಾರಾಟ ಮಾಡಿ, ತನ್ನ ಕೈಯಿಂದಲೇ ಬಾಡಿಗೆಗೆ ಹಣ ಕೊಟ್ಟು ಕೈ ಸುಟ್ಟುಕೊಂಡು ಬಂದಿರುವ ಘಟನೆಗಳಿವೆ. ಅಲ್ಲಿಗೆ ಕೊಂಡೊಯ್ಯುವ ಬದಲು ಸ್ಥಳೀಯ ಖಾಸಗಿ ಮಾರುಕಟ್ಟೆಗೆ ಟೊಮೆಟೊ ಕೊಂಡೊಯ್ಯುಲು ರೈತರಿಗೆ ಸಹಕಾರಿಯಾಗುತ್ತದೆ.
ದುಬಾರಿ ಬಾಡಿಗೆ ನೀಡಿ ಕೋಲಾರಕ್ಕೆ ಟೊಮೆಟೊ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಬದಲಿಗೆ ಚಿತ್ರದುರ್ಗ ಅಥವಾ ಚಳ್ಳಕೆರೆ ಎಪಿಎಂಸಿ ಆವರಣದಲ್ಲಿ ಟೊಮೆಟೊ ಮಾರುಕಟ್ಟೆ ಕೇಂದ್ರ ಸ್ಥಾಪಿಸುವಂತೆ ಸರ್ಕಾರಕ್ಕೆ ಬಯಲು ಸೀಮೆಯ ರೈತರ ಒತ್ತಾಯವಾಗಿತ್ತು. ರೈತರ ಕೂಗು ಸರ್ಕಾರಕ್ಕೆ ಕೇಳಿಸಲಿಲ್ಲ, ಸರ್ಕಾರ ಟೊಮೆಟೊ ಕೇಂದ್ರ ಪ್ರಾರಂಭ ಮಾಡಲು ಆಸಕ್ತಿ ತೋರಿಸದ ಕಾರಣ ಖಾಸಗಿ ವರ್ತಕರು ಮುಂದೆ ಬಂದು ಮಾರುಕಟ್ಟೆ ಆರಂಭಿಸಿದ್ದಾರೆ.
ಇದರಿಂದ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಬಳ್ಳಾರಿಯ ಕೆಲವು ಹಳ್ಳಿಗಳು, ತುಮಕೂರಿನ ಶಿರಾ, ಚಿಕ್ಕನಾಯಕನಹಳ್ಳಿ, ದಾವಣಗೆರೆ ಜಿಲ್ಲೆಯ ರೈತರು ಸೇರಿದಂತೆ ನೆರೆಯ ಆಂಧ್ರಪ್ರದೇಶ ರೈತರಿಗೂ ಸಹಕಾರಿಯಾಗುತ್ತದೆ. ನೂತನವಾಗಿ ಪ್ರಾರಂಭಿಸಿರುವ ಮಾರುಕಟ್ಟೆಗೆ ರೈತರು ಟೊಮೆಟೊ ಕೊಂಡೊಯ್ಯುಲು ಮುಂದಾಗಿದ್ದಾರೆ.
"ಭಾನುವಾರ (ಜು.11) ಪ್ರಾರಂಭ ದಿನವೇ 5 ಸಾವಿರ ಟೊಮೆಟೊ ಕ್ರೆಟ್ಗಳು ಮಾರುಕಟ್ಟೆಗೆ ಬಂದಿದ್ದವು ಎನ್ನಲಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯ ದರಕ್ಕಿಂತ 10 ರೂಪಾಯಿ ಹೆಚ್ಚಿನ ದರ ನೀಡಿ ಹಣ್ಣು ಖರೀದಿಸಲಾಗುತ್ತದೆ. ವರ್ತಕರು ಖರೀದಿಸಿದ ಹಣ್ಣನ್ನು ತಮಿಳುನಾಡು, ಮಧ್ಯಪ್ರದೇಶ, ಗುಜರಾತ್, ಕೋಲ್ಕತಾ ಸೇರಿದಂತೆ ಮತ್ತಿತರರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತದೆ,'' ಎಂದು ಖಾಸಗಿ ಮಾರುಕಟ್ಟೆಯ ಮಾಲೀಕ ವೆಂಕಟೇಶ್ ರೆಡ್ಡಿ ತಿಳಿಸಿದರು.