ಪ್ರತಿಭಟನಾನಿರತ ರೈತರನ್ನು ರಕ್ಷಿಸಿದ ಯುವಕನ ಮೇಲೆ ಕೊಲೆ ಪ್ರಯತ್ನ ಪ್ರಕರಣ
ನವದೆಹಲಿ, ನವೆಂಬರ್ 28: ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ವೇಳೆ 'ಹೀರೋ' ಆಗಿ ಕಾಣಿಸಿಕೊಂಡಿದ್ದ ಹರಿಯಾಣದ ಅಂಬಾಲದ ಯುವಕನ ಮೇಲೆ ಪೊಲೀಸರು ಕೊಲೆ ಪ್ರಯತ್ನ ಪ್ರಕರಣ ದಾಖಲಿಸಿದ್ದಾರೆ.
ರೈತರನ್ನು ದೆಹಲಿ ಪ್ರವೇಶಿಸದಂತೆ ಹಿಮ್ಮೆಟ್ಟಿಸಲು ಜಲಫಿರಂಗಿ ಪ್ರಯೋಗ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸ್ ವಾಹನದ ಮೇಲೆ ಹತ್ತಿ ಜಲಫಿರಂಗಿ ಕೊಳವೆಯನ್ನು ಬಂದ್ ಮಾಡಿದ್ದು, ಪ್ರತಿಭಟನೆಯ ಮಹತ್ವದ ಘಟನೆಯೆಂದು ಪರಿಗಣಿಸಲಾಗಿತ್ತು. ಆದರೆ ರೈತರನ್ನು ರಕ್ಷಿಸುವ ಮೂಲಕ ಪೊಲೀಸರಿಗೆ ಸೆಡ್ಡು ಹೊಡೆದ ಕಾರಣಕ್ಕಾಗಿ ಆತನ ವಿರುದ್ಧ ಕೊಲೆ ಪ್ರಯತ್ನ ಪ್ರಕರಣ ದಾಖಲಿಸಲಾಗಿದೆ.
ಬುಧವಾರ ಕೊರೆಯುವ ಚಳಿಯ ನಡುವೆ ಮತ್ತಷ್ಟು ತಣ್ಣನೆಯ ನೀರನ್ನು ರೈತರ ಮೇಲೆ ಸಿಡಿಸುವ ಮೂಲಕ ಪ್ರತಿಭಟನಾಕಾರರನ್ನು ಕ್ರೌರ್ಯದಿಂದ ಬೆದರಿಸಲು ಪೊಲೀಸರು ಪ್ರಯತ್ನಿಸಿದ್ದರು. ಆಗ 26 ವರ್ಷದ ನವದೀಪ್ ಸಿಂಗ್ ನೀಲಿ ಬಣ್ಣದ ಜಲಫಿರಂಗಿ ವಾಹನದ ಮೇಲೆ ಹತ್ತಿ, ರೈತರ ಮೇಲೆ ಸಿಡಿಯುತ್ತಿದ್ದ ನೀರನ್ನು ಸ್ಥಗಿತಗೊಳಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ರೈತ ಸಂಘಟನೆಯೊಂದರ ಮುಖಂಡರ ಮಗನಾದ ನವದೀಪ್ ವಿರುದ್ಧ ಧಂಗೆ, ಕೋವಿಡ್ ನಿಯಮಗಳ ಉಲ್ಲಂಘನೆಯ ಜತೆಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಕೊಲೆ ಪ್ರಯತ್ನ ಪ್ರಕರಣಗಳನ್ನು ದಾಖಲಿಸಲಾಗಿದೆ.
How a young farmer from Ambala Navdeep Singh braved police lathis to climb and turn off the water cannon tap and jump back on to a tractor trolley #farmersprotest pic.twitter.com/Kzr1WJggQI
— Ranjan Mistry (@mistryofficial) November 27, 2020
'ನನ್ನ ಶಿಕ್ಷಣದ ಬಳಿಕ ರೈತ ಮುಖಂಡರಾಗಿರುವ ನನ್ನ ತಂದೆಯಂತೆಯೇ ಕೃಷಿ ಆರಂಭಿಸಿದ್ದೆ. ಇದುವರೆಗೂ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಪ್ರತಿಭಟನಾ ನಿರತ ರೈತರ ಬದ್ಧತೆಯಿಂದ ಉತ್ತೇಜನಗೊಂಡು, ಅವರಿಗೆ ಗಾಸಿಯುಂಟುಮಾಡುತ್ತಿದ್ದ ಜಲಫಿರಂಗಿಯನ್ನು ಬಂದ್ ಮಾಡಿದ್ದೆಯಷ್ಟೇ' ಎಂದು ನವದೀಪ್ ತಿಳಿಸಿದ್ದಾರೆ.