"ದೇಶದ ಎಲ್ಲಾ ರೈತರಿಗೂ ಮೋದಿ ಕ್ಷಮೆ ಕೇಳಬೇಕು"
ನವದೆಹಲಿ, ಜನವರಿ 12: ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬಳಿ ಕ್ಷಮೆ ಕೇಳಬೇಕು, ಅಷ್ಟೇ ಅಲ್ಲ, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆಗ್ರಹಿಸಿದ್ದಾರೆ.
ರೈತರೆಡೆಗಿನ ಕೇಂದ್ರದ ಈ ನಡೆಗೆ ಸುಪ್ರೀಂ ಕೋರ್ಟ್ ಕೂಡ ಆಕ್ರೋಶಗೊಂಡಿದ್ದು, ಇಷ್ಟು ದಿನವಾದರೂ ಸಮಸ್ಯೆ ಬಗೆಹರಿಸದ ಕುರಿತು ಬೇಸರ ವ್ಯಕ್ತಪಡಿಸಿದೆ. ಇಷ್ಟು ಮಾತುಕತೆಗಳು ನಡೆದಿದ್ದರೂ ಯಾವುದೇ ಪರಿಹಾರ ಕಂಡುಕೊಳ್ಳದ ಕುರಿತು ಆಕ್ರೋಶ ವ್ಯಕ್ತಪಡಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬಳಿ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ. ಮುಂದೆ ಓದಿ...
"ರೈತರೇ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು"
ಕಮ್ಯುನಿಸ್ಟ್ ಪಕ್ಷದ ನಾಯಕರಾದ ಸೀತಾರಾಂ ಯಚೂರಿ ಹಾಗೂ ಡಿ ರಾಜಾ ಅವರು ಶರದ್ ಪವಾರ್ ಅವರನ್ನು ಭೇಟಿಯಾಗಿ ಸೋಮವಾರ ರೈತರ ಕುರಿತು ಸುಪ್ರೀಂ ಕೋರ್ಟ್ ನೀಡಿದ ಆದೇಶಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. "ಸುಪ್ರೀಂ ಕೋರ್ಟ್ ಆದೇಶದ ಕುರಿತು ನಾವೆಲ್ಲಾ ಚರ್ಚೆ ಮಾಡಿದೆವು. ಆದರೆ ಏನು ಮಾಡಬೇಕು ಎಂಬ ಕುರಿತು ರೈತರೇ ನಿರ್ಧಾರ ತೆಗೆದುಕೊಳ್ಳಬೇಕು. ಅವರೇ ಪ್ರತಿಕ್ರಿಯೆ ನೀಡಬೇಕು. ಅವರ ಬೇಡಿಕೆಯೊಂದಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ" ಎಂದು ತಿಳಿಸಿದರು.
ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ
ದೆಹಲಿಯಲ್ಲಿ ತಿಂಗಳಿನಿಂದಲೂ ರೈತರು ಹೋರಾಟ ಕೈಗೊಂಡಿದ್ದು, ಈ ಪರಿಸ್ಥಿತಿಯನ್ನು ಸಮರ್ಥವಾಗಿ ಕೇಂದ್ರ ನಿರ್ವಹಿಸಿಲ್ಲ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಕೇಂದ್ರದ ನಡೆಗೆ ಅಸಮಾಧಾನಗೊಂಡಿದ್ದ ಸುಪ್ರೀಂಕೋರ್ಟ್, ಕೃಷಿ ಕಾಯ್ದೆಗಳ ಜಾರಿಯನ್ನು ನೀವೇ ತಡೆಯುತ್ತೀರೋ, ನಾವು ತಡೆ ನೀಡಬೇಕೋ ಎಂದು ಪ್ರಶ್ನಿಸಿತ್ತು.
"ಇವರೆಲ್ಲರ ಮೇಲೂ ಪ್ರಕರಣ ದಾಖಲಿಸಬೇಕು"
ಸುಪ್ರೀಂ ಕೋರ್ಟ್ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟಾರ್ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದರು. ಪ್ರಧಾನಿ ಮೋದಿಯವರು ಹೋರಾಟನಿರತ ರೈತರು ಹಾಗೂ ಅವರ ಕುಟುಂಬದವರಿಗೆ ಕ್ಷಮೆ ಕೇಳುವುದು ಮಾತ್ರವಲ್ಲ, ದೇಶದ 62 ಕೋಟಿ ರೈತರಿಗೂ ಕ್ಷಮೆ ಕೇಳಬೇಕು. ಅವರು ಹೋರಾಟದಲ್ಲಿ ತೊಡಗಿಕೊಂಡಿರುವ ರೈತರೊಂದಿಗೆ ಮಾತನಾಡಬೇಕು ಎಂದು ಆಗ್ರಹಿಸಿದರು.
48 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ
ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ 48ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟನಿರತ ರೈತರು, ಕೇಂದ್ರದ ನಡುವೆ ಎಂಟನೇ ಮಾತುಕತೆಯೂ ವಿಫಲವಾಗಿದ್ದು, ಜನವರಿ 15ರಂದು ಮುಂದಿನ ಸುತ್ತಿನ ಮಾತುಕತೆ ನಡೆಯಲಿದೆ.