20 ಸಾವಿರದಿಂದ 18 ಕೋಟಿ ರೂ.ವರೆಗೆ ವಹಿವಾಟು: ಜೇನುಕೃಷಿಯಲ್ಲಿ ಮೋದಿ ಗಮನ ಸೆಳೆದ ಕೃಷಿಕ
ಶಿರಸಿ, ಆಗಸ್ಟ್ 5: ದೈನಂದಿನ ಕೆಲಸದ ನಡುವೆ 20 ಸಾವಿರ ರೂ ಸಾಲ ಮಾಡಿ ಆರಂಭಿಸಿದ ಜೇನು ಕೃಷಿಯೊಂದು ಇದೀಗ ಕೃಷಿಕರೊಬ್ಬರಿಗೆ 18 ಕೋಟಿ ಆದಾಯ ಸಂಪಾದಿಸುವಂತೆ ಮಾಡಿದೆ. ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಕೂಡ ಇವರ ಜೇನು ಕೃಷಿಯನ್ನು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೊಂಡಾಡಿದ್ದು, ಇದೀಗ ಇವರ ಮಾದರಿ ಜೇನುಕೃಷಿ ಎಲ್ಲರ ಗಮನ ಸೆಳೆಯುತ್ತಿದೆ.
ಶಿರಸಿ ತಾಲ್ಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಜೇನು ಕೃಷಿ ಇದೀಗ ದೇಶಕ್ಕೆ ಪರಿಚಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ತಮ್ಮ 91 ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೆಗಡೆ ಅವರನ್ನು ಶ್ಲಾಘಿಸಿದ್ದಾರೆ. ದೇಶದ ವಿವಿಧೆಡೆಯ ಜೇನು ಕೃಷಿಕರು, ಆಯುರ್ವೇದಿಕ್ ಗಿಡಮೂಲಿಕೆ ಬೆಳೆಗಾರರನ್ನು ಶ್ಲಾಘಿಸಿದ ಪ್ರಧಾನಿ, ಮಧುಕೇಶ್ವರರ ಸಾಧನೆಯನ್ನು ಪ್ರಶಂಸೆ ಮಾಡಿದ್ದರು.
ರೈತರು ದಿಲ್ ಖುಷ್; ಜನರೂ ಫುಲ್ ಖುಷ್: ಕಣ್ಣೀರು ಹಾಕ್ಸಲ್ಲ ಕಣ್ರಿ ಈರುಳ್ಳಿ!?
ಮಧುಕೇಶ್ವರ ಅವರು ಜೇನು ಸಾಕಣೆಗಾಗಿ ಸರಕಾರದ ಸಹಾಯಧನ ಪಡೆದು 50 ಜೇನು ಕಾಲೋನಿಗಳನ್ನು ಖರೀದಿಸಿದ್ದರು. ನಿರಂತರ ಜೇನು ಕೃಷಿಯಲ್ಲಿ ತೊಡಗಿಕೊಂಡ ಕಾರಣ ಅವರು ಇದೀಗ 800 ಕ್ಕೂ ಹೆಚ್ಚು ಜೇನು ಕಾಲೋನಿಗಳನ್ನು ಪೋಷಿಸುತ್ತಿದ್ದಾರೆ. ಇದರಿಂದ ಟನ್ಗಟ್ಟಲೇ ಜೇನು ತುಪ್ಪ ಉತ್ಪಾದಿಸುತ್ತಿರುವ ಅವರು ಉತ್ತಮ ಆದಾಯ ಕೂಡ ಗಳಿಸುತ್ತಿದ್ದಾರೆ. ವಿಶೇಷವಾಗಿ ನೇರಳೆ ಜೇನುತುಪ್ಪ, ತುಳಸಿ ಜೇನುತುಪ್ಪ, ಆಮ್ಲ ಜೇನುತುಪ್ಪ ಸೇರಿದಂತೆ ವನಸ್ಪತಿ ಜೇನು ತುಪ್ಪಗಳನ್ನೂ ಉತ್ಪಾದಿಸುತ್ತಿದ್ದಾರೆ. h
ಜೇನು ಕೃಷಿಗೆ ಹುರುಪು
ಚಿಕ್ಕ ಹಳ್ಳಿಯಲ್ಲಿ ತನ್ನ ದೈನಂದಿನ ಕೆಲಸದ ಜೊತೆಗೆ ಆರಂಭಿಸಿದ ಜೇನು ಕೃಷಿ ಬಗ್ಗೆ ಇದೀಗ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯ ತಿಳಿದು ಶ್ಲಾಘಿಸಿದ್ದು ಜೀವನದಲ್ಲಿ ಮರಿಯಲಾಗದ ಕ್ಷಣ. ಪ್ರಧಾನಿ ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ಕನಸಿನಲ್ಲಿಯೂ ಆಲೋಚಿಸಿರಲಿಲ್ಲ. ಇದೀಗ ಅವರಿಂದ ಬಂದಿರುವ ಮೆಚ್ಚುಗೆ ಇನ್ನಷ್ಟು ಜೇನು ಕೃಷಿಗೆ ಹುರುಪು ತುಂಬಿದೆ ಎಂದು ಮಧುಕೇಶ್ವರ ಹೆಗಡೆ ತಿಳಿಸಿದ್ದಾರೆ.
4.5 ಟನ್ ಜೇನುತುಪ್ಪ ಉತ್ಪಾದನೆ
ಕಳೆದ ಸುಮಾರು 35 ವರ್ಷದಿಂದ ಜೇನು ಕೃಷಿ ಮಾಡುತ್ತಿದ್ದೇನೆ. ಆರಂಭದಲ್ಲಿ 20 ಸಾವಿರ ಸಾಲ ತೆಗೆದು ಆರಂಭಿಸಿದ ಜೇನು ಕೃಷಿ ಇದೀಗ ಸಾಕಷ್ಟು ಆದಾಯ ಗಳಿಸುವಂತೆ ಮಾಡಿದೆ. ಜೇನು ತುಪ್ಪ ತೆಗೆಯುವುದರ ಜೊತೆಗೆ ಜೇನು ಪರಾಗಸ್ಪರ್ಶ, ಜೇನಿನ ವಿವಿಧ ಉತ್ಪನ್ನಗಳ ತಯಾರಿಸಿ ಮಾರಾಟ ಮಾಡುತ್ತೇನೆ. ಜೊತೆಗೆ ಜೇನು ಹುಳುಗಳ ಮೂಲಕ ಥೆರಫಿ ಚಿಕಿತ್ಸೆ ಕೂಡ ನೀಡುತ್ತಿದ್ದೇನೆ. ಮಳೆಗಾಲದ ವೇಳೆ 800 ಹಾಗೂ ಬೇಸಿಗೆ ವೇಳೆಗೆ 1500-2000 ಜೇನು ಕಾಲೋನಿಗಳ ಮೂಲಕ ಜೇನುತುಪ್ಪ ತೆಗೆಯಲಾಗುತ್ತಿದೆ. ವಾರ್ಷಿಕ ಸರಾಸರಿ 4.5 ಟನ್ ಜೇನುತುಪ್ಪ ಉತ್ಪಾದಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
20 ಸಾವಿರದಿಂದ 18 ಕೋಟಿ ಆಸ್ತಿ
20 ಸಾವಿರದಲ್ಲಿ ಜೇನು ಕೃಷಿ ಆರಂಭಿಸಿದ್ದೆ, ಇದೀಗ 18 ಕೋಟಿಗಳವರೆಗೆ ಸಂಪಾದಿಸಿದ್ದೇನೆ. ವಾರ್ಷಿಕವಾಗಿ ಜೇನು ಕುಟುಂಬ, ಜೇನು ಪೆಟ್ಟಿಗೆ ಹಾಗೂ ಜೇನು ತುಪ್ಪ ಸೇರಿ ವಾರ್ಷಿಕವಾಗಿ 2 ಕೋಟಿವರೆಗೆ ವಹಿವಾಟು ನಡೆಸಿದ್ದೇನೆ. ಎಂದು ತಮ್ಮ ಸಾಧನೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.
ರಾಷ್ಟ್ರೀಯ ತೋಟಗಾರಿಕಾ ಮಿಷನ್ನಲ್ಲಿ 3 ಲಕ್ಷ ಸಹಾಯಧನ
2009-10 ರಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ 3 ಲಕ್ಷ ಸಹಾಯಧನ ನೀಡಿ 50 ಜೇನು ಪೆಟ್ಟಿಗೆ ನೀಡಲಾಗಿತ್ತು. ನಂತರ ಅದನ್ನು ಅಭಿವೃದ್ಧಿ ಮಾಡಿ ಇಂದು ಉತ್ತಮ ಜೇನು ಕೃಷಿ ಮಾಡುತ್ತಿದ್ದಾರೆ. ಅಲ್ಲದೆ ಅಳಿವಿನಂಚಿನಲ್ಲಿರುವ ವನಸ್ಪತಿ ಗಿಡಗಳನ್ನೂ ಮನೆ ಸುತ್ತಮುತ್ತ ಬೆಳೆಸುತ್ತಿರುವುದು ವಿಶೇಷವಾಗಿದೆ. ಅವರ ಜೇನು ಕೃಷಿಗೆ ಇಲಾಖೆ ಕೂಡ ಸಹಕಾರ ನೀಡಲಿದ್ದು ಪ್ರತಿ ವರ್ಷ ಇಲಾಖೆ ನಡೆಸುವ ಪ್ರಗತಿ ಪರ ಜೇನು ಕೃಷಿ ಪಟ್ಟಿಯಲ್ಲಿ ಅವರ ಹೆಸರು ಖಾಯಂ ಇರುವಂತಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಸತೀಶ್ ಹೆಗಡೆ ತಿಳಿಸಿದ್ದಾರೆ.
ಒಟ್ಟಾರೆ ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಕನ್ನಡದ ಬಾಳೆಕಾಯಿ ಪ್ರೊಡಕ್ಟ್ ಬಗ್ಗೆ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದರು. ಇದೀಗ ಜೇನುಕೃಷಿಕರ ಯಶೋಗಾಥೆಯ ಬಗ್ಗೆ ಹೇಳಿದ್ದು, ಇದು ಉತ್ತರ ಕನ್ನಡ ಜಿಲ್ಲೆ ದೇಶ ಮಟ್ಟದಲ್ಲಿ ಪ್ರಸಿದ್ಧಿಯಾಗುವಂತೆ ಮಾಡಿದೆ.