ಪಿಎಂ ಕಿಸಾನ್ ಯೋಜನೆ: ಕೆವೈಸಿ ತುಂಬಲು ಕಾಲಾವಕಾಶ ವಿಸ್ತರಣೆ
ಲಕ್ಷಾಂತರ ರೈತರಿಗೆ ಉಪಯೋಗವಾಗುತ್ತಿರುವ ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಫಲಾನುಭವಿಗಳು ಕೆವೈಸಿ ತುಂಬುವುದನ್ನು ಕಡ್ಡಾಯ ಮಾಡಲಾಗಿದೆ. ಕಳೆದ ತಿಂಗಳೇ ಇದಕ್ಕೆ ಗಡುವು ನೀಡಲಾಗಿತ್ತು. ಆದರೆ, ಇನ್ನೂ ಬಹಳ ರೈತರು ಕೆವೈಸಿ ತುಂಬದ ಹಿನ್ನೆಲೆಯಲ್ಲಿ ಸರಕಾರ ಗಡುವಿನ ಅವಧಿಯನ್ನು ವಿಸ್ತರಿಸಿದೆ.
ಮೂರು ವರ್ಷಗಳ ಹಿಂದೆ ಆರಂಭಗೊಂಡ ಈ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರ ಪ್ರತೀ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ ಹಣವನ್ನು ರೈತರಿಗೆ ಒದಗಿಸುತ್ತದೆ. ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಈ ಯೋಜನೆ ಒದಗಿಸಲಾಗುತ್ತಿದೆ. ಕೇಂದ್ರ ಸರಕಾರ ವರ್ಷಕ್ಕೆ 6 ಸಾವಿರ ರೂ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುತ್ತದೆ. ಹಾಗೆಯೇ, ಕರ್ನಾಟಕ ಸರಕಾರ ಕೂಡ ಎರಡು ಕಂತುಗಳನ್ನು ನೀಡುತ್ತದೆ. ಕರ್ನಾಟಕದಲ್ಲಿ ಈ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ ಒಟ್ಟು 10 ಸಾವಿರ ರೂ ಸಿಗುತ್ತದೆ.
ಹೈನುಗಾರರ ಪ್ರೋತ್ಸಾಹಕ್ಕಾಗಿ ಕ್ಷೀರಶ್ರೀ ಪೋರ್ಟಲ್ ಜಾರಿ
ಕೇಂದ್ರ ಸರಕಾರ ಪಿಎಂ ಕಿಸಾನ್ ಯೋಜನೆ ಆರಂಭಿಸಿದ ಬಳಿಕ ಒಟ್ಟು 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಮುಂದಿನ ತಿಂಗಳು ಸೆಪ್ಟೆಂಬರ್ನಲ್ಲಿ 12ನೇ ಕಂತು ಬಿಡುಗಡೆ ಆಗುತ್ತದೆ. ಅಷ್ಟರೊಳಗೆ ಕೆವೈಸಿಯನ್ನು ತುಂಬಬೇಕು. ಇಲ್ಲದಿದ್ದರೆ ಹಣ ದೊರಕುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.
ಏನಿದು ಪಿಎಂ ಕಿಸಾನ್ ಯೋಜನೆ, ಕೆವೈಸಿ ಎಂದರೇನು?, ಕೆವೈಸಿ ಹೇಗೆ ತುಂಬಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಕೆವೈಸಿ ಭರ್ತಿಗೆ ಡೆಡ್ಲೈನ್ ವಿಸ್ತರಣೆ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಈ ಮುಂಚೆ ಜುಲೈ 31ರೊಳಗೆ ಕೆವೈಸಿ ಭರ್ತಿ ಮಾಡಬೇಕೆಂದು ಕೇಂದ್ರ ಸರಕಾರ ಅಪ್ಪಣೆ ಮಾಡಿತ್ತು. ಇದೀಗ ರೈತರಿಗೆ ಅನುಕೂಲ ಮಾಡಿಕೊಡಲು ಆ ಗಡುವನ್ನು ಆಗಸ್ಟ್ 31ಕ್ಕೆ ವಿಸ್ತರಿಸಿದೆ.
ಕೆವೈಸಿ ಎಂದರೆ ಇಂಗ್ಲೀಷ್ನಲ್ಲಿನ ನೋ ಯುವರ್ ಕಸ್ಟಮರ್ನ ಕಿರುರೂಪ. ಗ್ರಾಹಕರ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಪ್ರಕ್ರಿಯೆಯೇ ಕೆವೈಸಿ. ಬ್ಯಾಂಕ್ಗಳಿಂದ ಹಿಡಿದು ಮೊಬೈಲ್ ಸಿಮ್ ಸೇವೆ ಪಡೆಯುವವರೆಗೂ ಪ್ರತಿಯೊಂದು ಕಡೆಯೂ ಕೆವೈಸಿಯನ್ನು ಭರ್ತಿ ಮಾಡಲು ತಿಳಿಸಲಾಗುತ್ತದೆ.
ಧಾರವಾಡ: ಅನುಷ್ಠಾನಗೊಂಡ ರೈತಸ್ನೇಹಿ ಮಹತ್ವಾಕಾಂಕ್ಷಿ ಯೋಜನೆಗಳ ವಿವರ
ಕೆವೈಸಿ ಹೇಗೆ ತುಂಬುವುದು?
ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ಕೆವೈಸಿಯನ್ನು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ತುಂಬಲು ಅವಕಾಶ ಕೊಡಲಾಗಿದೆ. ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ ಅಲ್ಲಿ ನೀವು ಇ-ಕೆವೈಸಿ ಭರ್ತಿ ಮಾಡಬಹುದು. ಅಥವಾ ನೀವಿರುವ ಸ್ಥಳ ಸಮೀಪದ ಸಿಎಸ್ಸಿ ಕೇಂದ್ರಕ್ಕೆ ಹೋಗಿ ಕೆವೈಸಿ ತುಂಬಬಹುದು.
ಇಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯ. ಆನ್ಲೈನ್ ಆಗಲೀ ಆಫ್ಲೈನ್ ಆಗಲೀ ಆಧಾರ್ ಆಧಾರಿತವಾಗಿ ಕೆವೈಸಿ ಇರುತ್ತದೆ. ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿ ನಿರ್ಮೂಲನೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿರುವುದು ತಿಳಿದುಬಂದಿದೆ.
ಆನ್ಲೈನ್ನಲ್ಲಿ ಕೆವೈಸಿ ಹೇಗೆ?
ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋದರೆ ಅಲ್ಲಿ ಇಕೆವೈಸಿ ತುಂಬಲು ಅವಕಾಶ ಇದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಸರ್ಚ್ ಬಟನ್ ಒತ್ತಿರಿ. ಅಲ್ಲಿ ಪರದೆಯಲ್ಲಿ ನಿಮ್ಮ ಆಧಾರ್ ಮಾಹಿತಿ ಪ್ರತ್ಯಕ್ಷವಾಗುತ್ತದೆ. ನಂತರ ಒಟಿಪಿ ಕ್ಲಿಕ್ ಮಾಡಿ.
ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಸಬ್ಮಿಟ್ ಕ್ಲಿಕ್ ಮಾಡಿ. ಇಷ್ಟು ಸರಳವಾಗಿ ಕೆವೈಸಿ ಭರ್ತಿ ಪ್ರಕ್ರಿಯೆ ಮುಗಿದುಹೋಗುತ್ತದೆ.
ಇತರ ಮಾಹಿತಿ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಈಗ ಇ-ಕೆವೈಸಿ ಕಾರ್ಡ್ ಹೊಂದಿರುವುದು ಕಡ್ಡಾಯ. ಇದನ್ನು ನೀವು ಯೋಜನೆಯ ವೆಬ್ಸೈಟ್ ಮೂಲಕ ಪಡೆಯಬಹುದು. ಅಲ್ಲಿ ಇ-ಕೆವೈಸಿ ವಿಭಾಗಕ್ಕೆ ಹೋಗಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಸಬ್ಮಿಟ್ ಕ್ಲಿಕ್ ಮಾಡಿದರೆ ಇ-ಕೆವೈಸಿ ವಿವರ ಕಾಣಿಸುತ್ತದೆ. ಅದನ್ನು ನೀವು ಪ್ರಿಂಟ್ ಪಡೆದುಕೊಳ್ಳಬಹುದು.
ಇನ್ನು, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಆಗಾಗ್ಗೆ ಪರಿಷ್ಕರಿಸಲಾಗುತ್ತದೆ. ಬೇರೆ ಬೇರೆ ಕಾರಣಕ್ಕೆ ಕೆಲವರ ಹೆಸರು ಕೈಬಿಟ್ಟು ಹೋಗಬಹುದು. 2021ರ ಅಗಸ್ಟ್ ತಿಂಗಳಲ್ಲಿ ಒಟ್ಟು 11.18 ಕೋಟಿ ರೈತರು ಫಲಾನುಭವಿಗಳಿದ್ದರು. 2022 ಏಪ್ರಿಲ್ ತಿಂಗಳಲ್ಲಿ ಈ ಸಂಖ್ಯೆ 10.61 ಕೋಟಿಗೆ ಇಳಿದಿದೆ.
ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದೂ ಪರಿಶೀಲಿಸಬಹುದು. ಅದರ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ (https://pmkisan.gov.in/) ನೋಡಬಹುದು.
(ಒನ್ಇಂಡಿಯಾ ಸುದ್ದಿ)