ಮರದಿಂದ ಉದುರಿ ಬಿದ್ದ ಮಾವೇ ಬಂಡವಾಳ; ಕೋಲಾರದಲ್ಲಿ ಹೀಗೊಂದು ಪುಟ್ಟ ಉದ್ಯಮ
ಕೋಲಾರ, ಜೂನ್ 15: ಈ ಬಾರಿಯೂ ಕೋಲಾರ ಜಿಲ್ಲೆಯಾದ್ಯಂತ ಮಳೆ ಹಾಗೂ ಗಾಳಿಯಿಂದಾಗಿ ಮಾವಿನ ಕಾಯಿಗಳಿಗೆ ಸಾಕಷ್ಟು ಹಾನಿಯಾಗಿದೆ. ಬಂದಿರುವ ಫಸಲಲ್ಲಿ ಬಹುತೇಕ ಮಾವಿನ ಕಾಯಿಗಳು ಗಾಯವಾಗಿ ಬಿದ್ದಿವೆ. ಮಾರುಕಟ್ಟೆಗೆ ಬರುವ ಮಾವಿನ ಕಾಯಿಯನ್ನು ಇತ್ತ ರಫ್ತು ಮಾಡಲೂ ಆಗದೇ, ಉಳಿಸಿಕೊಂಡು ಹಣ್ಣು ಮಾಡಲಾಗದೇ ಅವುಗಳನ್ನು ಬೀದಿಗೆ ಬಿಸಾಡುವ ಪರಿಸ್ಥಿತಿಯೇ ಹೆಚ್ಚು.
ಆದರೆ ಮಾರುಕಟ್ಟೆ ಆಸುಪಾಸಿನಲ್ಲಿರುವ ಗುಡಿಸಲು ವಾಸಿಗಳಿಗೆ ಇಂತಹ ಮಾವುಗಳೇ ವರದಾನವಾಗಿದೆ. ಬಿರುಗಾಳಿ, ಮಳೆಗೆ ಉದುರಿ ಬೀಳುವ ರಾಶಿ ರಾಶಿ ಮಾವಿನ ಕಾಯಿಯನ್ನೇ ಬಂಡವಾಳ ಮಾಡಿಕೊಳ್ಳುವ ಇವರು, ಈ ಮಾವಿನ ಕಾಯಿಯಿಂದ ಹಲವು ಉತ್ಪನ್ನಗಳನ್ನು ತಯಾರಿಸಿ ಲಾಭ ಮಾಡಿಕೊಳ್ಳುತ್ತಾರೆ. ಅವುಗಳಿಂದ ಒಂದಷ್ಟು ದಿನ ಬದುಕಿನ ದಾರಿ ಕಂಡುಕೊಳ್ಳುತ್ತಾರೆ. ಅದು ಹೇಗೆ ಎಂದು ಇಲ್ಲಿ ನೋಡಿ...
ಶ್ರೀನಿವಾಸಪುರದಲ್ಲಿ ಹೀಗೊಂದು ಪುಟ್ಟ ಉದ್ಯಮ
ಕೋಲಾರದ ಮಾವಿನ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರದಲ್ಲಿ ಮಾವಿನ ಸೀಸನ್ ಆರಂಭಗೊಳ್ಳುತ್ತಿದ್ದಂತೆ ಹೀಗೊಂದು ಸಣ್ಣ ಉದ್ಯಮವೂ ಸದ್ದಿಲ್ಲದೇ ನಡೆಯುತ್ತದೆ. ಬಿರುಗಾಳಿ, ಮಳೆಗೆ ಉದುರಿ ಬಿದ್ದಿರುವ ರಾಶಿ ರಾಶಿ ಮಾವಿನ ಕಾಯಿಗಳನ್ನು ಆರಿಸಿ ತಂದು ಕತ್ತರಿಸಿ ಒಣಗಿಸಿ ಅವುಗಳಿಂದ ರುಚಿಕರ ಉತ್ಪನ್ನಗಳನ್ನು ತಯಾರಿಸುವ ಕೆಲಸ ಮಾಡುತ್ತವೆ ಕೆಲವು ಕುಟುಂಬಗಳು.
ಮಾವು ಪ್ರಿಯರೇ ಹುಷಾರ್: ಮಾರುಕಟ್ಟೆಗೆ ಬರುತ್ತಿವೆ ಕೃತಕ ಹಣ್ಣುಗಳು
ವ್ಯರ್ಥವಾಗುವ ಟನ್ ಗಟ್ಟಲೆ ಮಾವಿನಿಂದ ರುಚಿಕರ ಪದಾರ್ಥ ತಯಾರು
ಇವರೇನು ಮಾವು ಬೆಳೆಯುವ ರೈತರಲ್ಲ. ಇವರದೇನು ಮಾವಿನ ಉತ್ಪನ್ನ ತಯಾರಿಸುವ ಕಾರ್ಖಾನೆಯೂ ಇಲ್ಲ. ಆದರೆ ಒಂದು ರೂಪಾಯಿ ಬಂಡವಾಳವೂ ಇಲ್ಲದೇ ಕಸದಿಂದ ರಸ ತೆಗೆಯಬಲ್ಲ ಬುದ್ಧಿವಂತರು ಇವರು. ಮಾವಿನ ಸೀಸನ್ ಆರಂಭವಾಗುತ್ತಿದ್ದಂತೆ ಇವರಿಗೆ ಇದೇ ಉತ್ತಮ ಆದಾಯದ ಮೂಲವೂ ಆಗುತ್ತದೆ.
ಮೇ, ಜೂನ್, ಜುಲೈ ತಿಂಗಳಲ್ಲಿ ಎಲ್ಲೆಡೆ ಮಾವು ತುಂಬಿ ತುಳುಕುತ್ತಿರುತ್ತದೆ. ಆಗ ಮಳೆ ಗಾಳಿಗೆ ಟನ್ ಗಟ್ಟಲೆ ಮಾವಿನ ಕಾಯಿಗಳು ಉದುರಿ ಹೋಗಿರುತ್ತವೆ. ಅಷ್ಟೇ ಅಲ್ಲ, ಮಾರುಕಟ್ಟೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಸಣ್ಣಪುಟ್ಟ ತೊಂದರೆಯಾಗಿರುವ ಮಾವಿನಕಾಯಿಗಳನ್ನು ಮಾರಾಟ ಮಾಡುವುದಿಲ್ಲ. ಅಂತಹ ಕಾಯಿಗಳನ್ನು ಆರಿಸಿಕೊಂಡು ಬಂದು ಶ್ರೀನಿವಾಸಪುರದ ಕೆಲವು ಬಡಾವಣೆ ನಿವಾಸಿಗಳು ಅದರಿಂದ ಮಾವಿನ ಉಪ್ಪಿನ ಕಾಯಿ ಹಾಗೂ ಆಮ್ ಚೂರ್ ನಂತಹ ಬಾಯಲ್ಲಿ ನೀರೂರಿಸುವ ಉತ್ಪನ್ನಗಳನ್ನ ತಯಾರಿಸುತ್ತಾರೆ.
ನಗರಗಳಲ್ಲಿ ಒಳ್ಳೆ ಬೆಲೆಗೆ ಮಾರಾಟ
ಬೆಂಗಳೂರು ಸೇರಿದಂತೆ ಇತರೆಡೆಗಳಲ್ಲಿ ಇದನ್ನು ಒಳ್ಳೆಯ ಬೆಲೆಗೆ ವರ್ಷಪೂರ್ತಿ ಮಾರಾಟ ಮಾಡುತ್ತಾರೆ. ಹೀಗೆ ಶೂನ್ಯ ಬಂಡವಾಳದಲ್ಲಿ ಒಳ್ಳೆಯ ಲಾಭ ಮಾಡುವ ಗೃಹ ಉದ್ಯಮವಾಗಿ ರೂಪಿಸಿಕೊಂಡಿದ್ದಾರೆ. ಮಾವಿನ ಮಾರುಕಟ್ಟೆಯಲ್ಲಿ ಮಾವು ಬೆಳೆದ ರೈತನಿಗೆ ನಷ್ಟವಾಗಬಹುದು. ಆದರೆ ಇವರಿಗೆ ಮಾತ್ರ ನಷ್ಟವಾಗುವುದಿಲ್ಲ. ಈ ಬಾರಿಯೂ ಜಿಲ್ಲೆಯಾದ್ಯಂತ ಮಳೆ ಹಾಗೂ ಗಾಳಿಗೆ ಮಾವಿನ ಕಾಯಿಗಳಿಗೆ ಸಾಕಷ್ಟು ಹಾನಿಯಾಗಿದ್ದು, ಬಂದಿರುವ ಫಸಲಲ್ಲಿ ಬಹುತೇಕ ಮಾವಿನ ಕಾಯಿಗೆ ಗಾಯವಾಗಿತ್ತು. ಅಂತಹ ಮಾವಿನಿಂದ ಇದೀಗ ಉತ್ಪನ್ನಗಳನ್ನು ತಯಾರಿಸುವಲ್ಲಿ ಜನ ನಿರತರಾಗಿದ್ದಾರೆ
ನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತ
ಬಂಡವಾಳವಿಲ್ಲದೇ ಲಾಭ ಪಡೆಯುವ ಹಾದಿ
ಬೆಲೆ ಸಿಗದೆ ಇರುವ ಮಾವನ್ನು ತಂದು, ಮನೆಯ ಮಂದಿಯೆಲ್ಲ ಸೇರಿ ಕತ್ತರಿಸುತ್ತಾರೆ. ಮನೆಯ ಮುಂದೆ ಬಿಸಿಲಲ್ಲಿ ಒಣಗಿಸುತ್ತಾರೆ. ನಂತರ ಉಪ್ಪು, ಖಾರ ಬೆರಸಿ ಆಮ್ ಚೂರ್ ಮಾಡುತ್ತಾರೆ. ಮಾವಿನ ಉತ್ಪನ್ನಗಳನ್ನು ತಯಾರು ಮಾಡಿ ಮಾರಾಟ ಮಾಡಿದರೆ ಇದರಿಂದ ಕೆ.ಜಿ.ಗೆ 25 ರಿಂದ 30 ರೂಪಾಯಿ ಮಾರಾಟವಾಗುತ್ತದೆ. ಬಂಡವಾಳವೇ ಇಲ್ಲದೆ ಸ್ವಲ್ಪ ಶ್ರಮ ಹಾಕಿ ಒಳ್ಳೆಯ ಲಾಭ ಪಡೆಯುವುದಕ್ಕೆ ಇವರು ಉದಾಹರಣೆಯಾಗಿದ್ದಾರೆ.