ಮೈಸೂರಿನಲ್ಲಿ ಕಾಡಂಚಿನ ರೈತರಿಗೆ ನವಿಲು ಕಾಟ
ಮೈಸೂರು, ಜೂನ್ 18: ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಸಂಕಷ್ಟ ಅನುಭವಿಸಿದ್ದ ರೈತರು ಇದೀಗ ನವಿಲುಗಳ ಹಾವಳಿಯಿಂದ ಬೆಳೆಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಹೀಗಾಗಿ ನವಿಲುಗಳನ್ನು ಕೂಡಲೇ ಕಾಡಿಗೆ ಅಟ್ಟಿ ಬೆಳೆಗಳನ್ನು ರಕ್ಷಿಸಿ ಎಂದು ರೈತರು ಅರಣ್ಯ ಇಲಾಖೆಗೆ ದುಂಬಾಲು ಬಿದ್ದಿದ್ದಾರೆ.
ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿ, ಮರೂರು, ಮಂಚಬಾಯನಹಳ್ಳಿ, ಜಾಬಗೆರೆ, ಶಿರೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಕೃಷಿಯೇ ಜೀವನಾಧಾರ. ಕಾಲಕ್ಕೆ ತಕ್ಕಂತೆ ತಮ್ಮ ಅನುಕೂಲ ನೋಡಿಕೊಂಡು ಸಾಲ ಮಾಡಿ ಕೆಲವರು ಬೆಳೆ ಬೆಳೆಯುತ್ತಿದ್ದು, ಕೊರೊನಾ ಲಾಕ್ ಡೌನ್ನಿಂದ ರೈತನಿಗೆ ನಷ್ಟವಾಗಿದೆ. ಆದರೂ ಎದೆಗುಂದದೆ ಬೇರೆ ಬೇರೆ ಬೆಳೆಯನ್ನು ಬೆಳೆದಿದ್ದಾರೆ. ಈಗ ಅವುಗಳು ಕೊಯ್ಲಿಗೆ ಬರುತ್ತಿದ್ದಂತೆಯೇ ನವಿಲುಗಳು ಜಮೀನಿಗೆ ನುಗ್ಗಿ ತಿಂದು ಹಾಕಲು ಆರಂಭಿಸಿವೆ.
ಜಮೀನಿಗೆ ನವಿಲುಗಳ ಲಗ್ಗೆ
ಗ್ರಾಮಗಳ ಕೆಲವು ರೈತರು ಸೌತೆಕಾಯಿ, ಸಿಹಿಕುಂಬಳ, ಅವರೆ, ಹೂಕೋಸು ಬೆಳೆದಿದ್ದಾರೆ. ಅದರಲ್ಲೂ ಸಿಹಿ ಕುಂಬಳ ಬೆಳೆ ಕಾಯಿ ಬಿಟ್ಟು ಕೊಯ್ಲಿಗೆ ಬಂದಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ನೋಡಿಕೊಂಡು ಕೊಯ್ಲು ಮಾಡಲು ಕಾಯುತ್ತಿದ್ದಾರೆ. ಆದರೆ ನವಿಲುಗಳು ಜಮೀನಿಗೆ ನುಗ್ಗಿ ಈ ಕಾಯಿಗಳನ್ನು ತಿಂದು ಹಾಕುತ್ತಿವೆ.
ಬೆಳೆದ ಸೀಬೆಯನ್ನೆಲ್ಲಾ ಮಂಗ, ನವಿಲುಗಳಿಗೆ ಕೊಟ್ಟುಬಿಟ್ಟ ಕೋಲಾರ ರೈತ
ಬೆಳೆಯನ್ನು ಕಾಯುವುದೇ ಸವಾಲು
ಇನ್ನು ರೈತರು ಅವರೆ, ರಾಗಿ, ಸೌತೆಕಾಯಿ, ಮುಸುಕಿನ ಜೋಳ ಬೆಳೆಯಲು ಬಿತ್ತನೆ ಮಾಡುತ್ತಿದ್ದು, ಬಿತ್ತನೆ ಮಾಡಿದ ಕಾಳನ್ನೇ ಕೆದಕಿ ನವಿಲುಗಳು ತಿನ್ನುತ್ತಿವೆ. ಇವುಗಳನ್ನು ಓಡಿಸಿ ಬೆಳೆಗಳನ್ನು ರಕ್ಷಿಸುವುದು ರೈತರಿಗೆ ಸವಾಲ್ ಆಗಿ ಪರಿಣಮಿಸಿದೆ. ಈ ಹಿಂದೆ ಇಲ್ಲಿ ಚಿರತೆಗಳು ಆಗಾಗ್ಗೆ ದಾಳಿ ಮಾಡಿ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಕಾಡಾನೆಗಳು ಜಮೀನಿಗೆ ನುಗ್ಗಿ ಫಸಲಿಗೆ ಬಂದ ಬೆಳೆಗಳನ್ನು ತಿಂದು, ತುಳಿದು ನಾಶಗೊಳಿಸುತ್ತಿವೆ. ಇವುಗಳ ಉಪಟಳದಿಂದ ಬೇಸತ್ತಿದ್ದ ರೈತರಿಗೆ ಈಗ ನವಿಲುಗಳ ಕಾಟ ಶುರುವಾಗಿದೆ. ಅವುಗಳಿಂದ ಬೆಳೆಯನ್ನು ರಕ್ಷಿಸುವುದು ಸವಾಲಾಗಿ ಪರಿಣಮಿಸಿದೆ.
ಮುಂಜಾನೆ- ಸಂಜೆ ನವಿಲು ಕಾಟ
ಇದಕ್ಕೆ ಕಾರಣವೂ ಇದೆ. ಈ ನವಿಲುಗಳು ಹಿಂಡು ಹಿಂಡಾಗಿ ಬರುತ್ತಿವೆ. ಒಮ್ಮೆಗೆ ಕನಿಷ್ಠ ಐದರಿಂದ ಹತ್ತು ನವಿಲುಗಳು ಲಗ್ಗೆಯಿಡುತ್ತವೆ. ಅಷ್ಟೇ ಅಲ್ಲ ಹೀಗೆ ಬರುವ ನವಿಲುಗಳು ಎಲ್ಲ ಸಮಯದಲ್ಲಿ ಜಮೀನಿಗೆ ನಗ್ಗುವುದಿಲ್ಲ. ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಜಮೀನಿನ ಪಕ್ಕದಲ್ಲಿರುವ ಕುರುಚಲು ಕಾಡಿನಲ್ಲಿ ಕಾಲ ಕಳೆಯುವ ಅವು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಜಮೀನಿಗೆ ನುಗ್ಗಿ ಬೆಳೆಗಳನ್ನು ತಿಂದು ಹಾಕುತ್ತವೆ.
ಕೊಡಗಿನ ಕರಿಮೆಣಸು ಬೆಳೆಗಾರರನ್ನು ಕಂಗೆಡಿಸಿದ ಮುಳ್ಳುಹಂದಿಗಳು
ಕಾಡಿಗೆ ಅಟ್ಟಿ ಬೆಳೆ ರಕ್ಷಿಸಿ
ಇದೀಗ ಇಲ್ಲಿನ ರೈತರಿಗೆ ನವಿಲುಗಳನ್ನು ಜಮೀನಿನಿಂದ ಓಡಿಸಿ ಬೆಳೆಗಳನ್ನು ರಕ್ಷಿಸುವುದೇ ಸವಾಲಾಗಿ ಪರಿಣಮಿಸಿದೆ. ಮುಂಜಾನೆ ಮತ್ತು ಸಂಜೆ ಜಮೀನಿನಲ್ಲಿ ಕಾದು ಕುಳಿತರೂ ರೈತರು ಮನೆಗೆ ಹೋಗುತ್ತಿದ್ದಂತೆಯೇ ಇತ್ತ ಮತ್ತೆ ಜಮೀನಿಗೆ ನುಗ್ಗಿ ಫಸಲನ್ನೆಲ್ಲ ತಿಂದು ಹಾಕಿ ನಷ್ಟವನ್ನುಂಟು ಮಾಡುತ್ತಿವೆ.
ಈ ಕುರಿತಂತೆ ಮಾತನಾಡಿರುವ ರೈತರು ಪ್ರತಿ ವರ್ಷವೂ ಇದೇ ಸಮಯದಲ್ಲಿ ಹೆಚ್ಚಾಗಿ ನವಿಲುಗಳು ಬರುತ್ತಿದ್ದು, ಬೆಳೆಗಳನ್ನೆಲ್ಲ ತಿಂದು ಹಾಳು ಮಾಡುತ್ತಿವೆ. ಇವುಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಂಡು ನವಿಲುಗಳನ್ನು ಕಾಡಿಗೆ ಅಟ್ಟುವಂತೆ ಆಗ್ರಹಿಸಿದ್ದಾರೆ.