ಶರದ್ ಪವಾರ್ ಗೆ ಒಂದೇ ಏಟಾ, ಇನ್ನೂ ಬಾರಿಸಬೇಕಿತ್ತು
ಈ ಮಧ್ಯೆ, ಪವಾರ್ ಮೇಲಿನ ದಾಳಿಗೆ ವಿವಿಧ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಆದರೆ 'ಅವರಿಗೆ ಹೊಡೆಯಲಾಯಿತೇ? ಆತ ಒಂದೇ ಒಂದು ಹೊಡೆತ ಹೊಡೆದನೇ?' (ಬಸ್ ಏಕ್ ಹೀ ತಪ್ಪಡ್ ಮಾರಾ!?) ಎಂದು ಪವಾರ್ ಮೇಲಿನ ದಾಳಿಗೆ ಪ್ರತಿಕ್ರಿಯಿಸುತ್ತಾ ಹಜಾರೆ ಪ್ರಶ್ನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನೊಂದೆಡೆ ತಾನು ದಾಳಿಯನ್ನು ಖಂಡಿಸುವುದಾಗಿಯೂ ಹೇಳುವ ಮೂಲಕ ಅವರು ಇಬ್ಬಂದಿತನ ತೋರಿದ್ದಾರೆ.
ನವದೆಹಲಿಯಲ್ಲಿ ಹರ್ವೀಂದರ್ ಸಿಂಗ್ ಎಂಬಾತ ಪವಾರ್ ಕೆನ್ನೆಗೆ ಬಾರಿಸಿದ ಘಟನೆ ಗುರುವಾರ ನಡೆದಿದೆ. ಭ್ರಷ್ಟಾಚಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಸಿಂಗ್, ಕೃಷಿ ಸಚಿವ ಪವಾರ್ ಮೇಲೆ ದಾಳಿ ನಡೆಸಿದುದಲ್ಲದೆ ಚೂರಿ ತೋರಿಸಿ ಸಚಿವರನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದನು.
'ಅಣ್ಣಾಜೀ ಲೋಕಪಾಲ್ಗೆ ಮನವಿ ಮಾಡಿದ್ದಾರೆ. ಆದರೆ ಅದು ಫಲಿಸಿಲ್ಲ. ನಾನು ಭಯೋತ್ಪಾದಕನಲ್ಲ, ಭಯೋತ್ಪಾದಕರು ಈ ರೀತಿ ನಡೆದುಕೊಳ್ಳುವುದಿಲ್ಲ. ವಿವಿಧ ಹಗರಣಗಳಲ್ಲಿ ಭಾಗಿಯಾಗಿರುವ ಭ್ರಷ್ಟ ಸಚಿವರ ಬಗ್ಗೆ ನಾನು ರೋಸಿ ಹೋಗಿದ್ದೇನೆ' ಎಂದು ದಾಳಿಕೋರ ಹರ್ವೀಂದರ್ ಸಿಂಗ್ ಹೇಳಿದ್ದಾನೆ.