ನರೇಗಾ ಯೋಜನೆಯಡಿ ಪಪ್ಪಾಯ ಬೆಳೆದು ಲಾಭ ಪಡೆದ ರೈತ
ಕೊಪ್ಪಳ, ಆಗಸ್ಟ್ 25; ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ರೈತರಿಗೆ ವರದಾನವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಹಲವು ರೈತರು ಯೋಜನೆಯಡಿ ವಿವಿಧ ತೋಟಗಾರಿಕಾ ಬೆಳೆ ಬೆಳೆದು ಲಾಭಗಳಿಸಿದ್ದಾರೆ. ಪಪ್ಪಾಯ ಬೆಳೆದ ರೈತ ಮಾರ್ಕಂಡಯ್ಯ ಹಿರೇಮಠ ಇತರರಿಗೂ ಮಾದರಿಯಾಗಿದ್ದಾರೆ.
ಪ್ರಗತಿಪರ ಕೃಷಿಕರಾಗಿರುವ ಮಾರ್ಕಂಡಯ್ಯ ಹಿರೇಮಠ ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ 7 ಎಕರೆ ಜಮೀನು ಹೊಂದಿದ್ದಾರೆ. ಪ್ರತಿ ವರ್ಷ ಕಬ್ಬು, ಬಾಳೆ ಬೆಳೆಯುತ್ತಾರೆ. 2020-21ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಬಾಳೆ, ಪಪ್ಪಾಯ ಬೆಳೆದು ಉತ್ತಮ ಆದಾಯ ಪಡೆದಿದ್ದಾರೆ.
ಬಾಳೆ ಬೆಳೆದು ಲಾಭದತ್ತ ಸಾಗಿದ ಕೊಪ್ಪಳದ ಕೃಷಿಕ
ಬಾಳೆಯಲ್ಲಿ ಅಂತರ ಬೆಳೆಯಾಗಿ ವಿಶೇಷವಾಗಿ ಮೆಣಸಿನಕಾಯಿ ಬೆಳೆದು 1 ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸಿದ್ದಾರೆ. ಸದ್ಯ 7 ಎಕರೆ ಜಮೀನಿನಲ್ಲಿ ಪಪ್ಪಾಯ ರೆಡ್ ಲೇಡಿ (ಥೈವಾನ-786) ತಳಿ ಬೆಳೆದು, ಲಾಕ್ಡೌನ್ ಸಮಯದಲ್ಲಿ ಹಣ್ಣಿನ ಮಾರಾಟದಿಂದ 11 ಲಕ್ಷಕ್ಕೂ ಅಧಿಕ ಲಾಭಗಳಿಸಿದ್ದಾರೆ.
ಕಬ್ಬಿನ ನಾಡಲ್ಲಿ 110 ಟನ್ ಬಾಳೆ ಬೆಳೆದು ಲಾಭಗಳಿಸಿದ ರೈತ!
ಪ್ರಥಮ ಬಾರಿಗೆ ಪಪ್ಪಾಯ ಹಣ್ಣಿನಿಂದ ಪೆಪೆನ ಎನ್ನುವ ಲ್ಯಾಟಿಕ್ಸ್ (ಹಾಲು) ಕೊಯ್ಲು ಮಾಡಿ ಹೆಚ್ಚುವರಿ ಆದಾಯ ಪಡೆದಿರುವುದು ಮಾರ್ಕಂಡಯ್ಯ ಅವರ ವಿಶೇಷ ಸಾಧನೆಯಾಗಿದೆ. ಪಪ್ಪಾಯ ಎಲ್ಲ ಕಟಾವಾದ ನಂತರ ಕೊನೆಗೆ ಅಳಿದುಳಿದ ಹಣ್ಣುಗಳು ಮಾರಾಟವಾಗುವುದಿಲ್ಲ. ಹೀಗಾಗಿ ಅವುಗಳನ್ನು ಹಾಗೆಯೇ ಹೊಲದಲ್ಲಿ ಬಿಡುವುದರಿಂದ ನಷ್ಟದ ಜೊತೆಗೆ ಪರಿಸರವೂ ಹಾಳಾಗುತ್ತದೆ.
ನರೇಗಾ ನೆರವಿನಲ್ಲಿ ಗುಲಾಬಿ ಬೆಳೆದು ಲಾಭಗಳಿಸಿದ ರೈತ
ಇದನ್ನು ವಿಲೇವಾರಿ ಮಾಡುವುದು ದುಬಾರಿ ಸಂಗತಿ. ಇದನ್ನು ಅರಿತ ರೈತ ಮಾರ್ಕಂಡಯ್ಯ ಮಹಾರಾಷ್ಟ್ರದ ಪಪ್ಪಾಯ ಬೆಳೆಗಾರರನ್ನು ಸಂಪರ್ಕಿಸಿ ಏನಾದರೂ ಉಪಾಯ ಇದೆಯೇ? ಎಂದು ವಿಚಾರಿಸಿದ್ದಾರೆ. ಆಗ ಕೊನೆಯ ಹಂತದಲ್ಲಿ ಪಪ್ಪಾಯ ಹಣ್ಣುಗಳಿಂದ ಹಾಲು ಕೊಯ್ಲು ಮಾಡಿದಲ್ಲಿ ಹೆಚ್ಚುವರಿ ಲಾಭದೊಂದಿಗೆ ಪರಿಸರ ಸಂರಕ್ಷಣೆ ಆಗುವುದು ಎಂದು ತಿಳಿದುಕೊಂಡಿದ್ದಾರೆ.
ಮಹಾರಾಷ್ಟ್ರದ ಶ್ರೀಗಣೇಶ ಪಾಟೀಲ್ ಸಂಪರ್ಕಿಸಿ ರೂ. 28,000 ಗುತ್ತಿಗೆ ಆಧಾರದಲ್ಲಿ ಪೆಪನ್ ಕೊಯ್ಲು ಮಾಡುವುದರ ಮೂಲಕ ಪಪ್ಪಾಯ ಹೆಚ್ಚಿನ ಮೌಲ್ಯವರ್ಧನೆ ಕ್ರಮ ಕೈಗೊಂಡು, ಹೆಚ್ಚ್ಚುವರಿ ಲಾಭ ಪಡೆದು ಇತರರಿಗೂ ಮಾದರಿಯಾಗಿದ್ದಾರೆ.
ಪಪ್ಪಾಯ ಬೆಳೆಯಲು ಸಹಾಯಕ ತೋಟಗಾರಿಕೆ ಅಧಿಕಾರಿ ಕೃಷ್ಣಮೂರ್ತಿ ಮಾರ್ಗದರ್ಶನ ಮಾಡಿದ್ದಾರೆ. ನೀರು, ಪೋಷಕಾಂಶ ಮತ್ತು ಸಸ್ಯ ಸಂರಕ್ಷಣೆ ಬಗ್ಗೆ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರ ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ ಜಗನ್ನಾಥ ರೆಡ್ಡಿ ಮಾಹಿತಿಯನ್ನು ನೀಡಿದ್ದಾರೆ.
"ಕೊನೆಯ ಹಂತದ ಹಣ್ಣುಗಳನ್ನು ಪೋಲು ಮಾಡದೇ ಹಾಲು (ಲ್ಯಾಟೆಕ್ಸ್) ತೆಗೆದು ಹೆಚ್ಚುವರಿ ಆದಾಯವನ್ನು ಪಡೆದ ಮಾರ್ಕಂಡಯ್ಯ ಇತರ ರೈತರಿಗೆ ಮಾದರಿಯಾಗಿದ್ದಾರೆ" ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಮೇಶ ಹೇಳಿದ್ದಾರೆ.
ಆಸಕ್ತ ರೈತರು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮಲ್ಲಿಕಾರ್ಜುನ ಬಂಡಿ 9008995397, ವಿಷಯ ತಜ್ಞರಾದ ವಾಮನಮೂರ್ತಿ 9482672039 ಇವರನ್ನು ಸಂಪರ್ಕಿಸಬಹುದಾಗಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಿಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಕೊಪ್ಪಳ ಜಿಲ್ಲೆಯ ಅನೇಕ ಕೃಷಿಕರು ಆರ್ಥಿಕ ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ.
ಜಿಲ್ಲೆಯ ರೈತರು ಹಣ್ಣಿನ ಬೆಳೆಗಳಾದ ಮಾವು, ಪೇರಲ, ಬಾಳೆ ಅಲ್ಲದೆ ವಾಣಿಜ್ಯ ಬೆಳೆ, ತರಕಾರಿ ಹಾಗೂ ಪುಷ್ಪ ಕೃಷಿ ಮಾಡುತ್ತ ಲಾಭವನ್ನು ಪಡೆಯುತ್ತಿದ್ದಾರೆ. ನರೇಗಾ ಯೋಜನೆ ಜೊತೆಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಸಹ ಒಂದು ರೈತ ಪರ ಯೋಜನೆಯಾಗಿದೆ.
ತೋಟಗಾರಿಕೆ ಇಲಾಖೆ ಅಧಿಕಾರಿ ಜಗನ್ನಾಥ ರೆಡ್ಡಿ ಈ ಕುರಿತು ಮಾತನಾಡಿದ್ದು, "ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆಸಕ್ತಿ ಇದ್ದಲ್ಲಿ ಇಲಾಖೆಗೆ ಬಂದು ಭೇಟಿಯಾದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಮಾರುಕಟ್ಟೆಗೂ ಇಲಾಖೆಯಿಂದ ಅವಕಾಶ ಕಲ್ಪಿಸಲಾಗುವುದು" ಎಂದು ಹೇಳಿದ್ದಾರೆ.