ರೈತರ ಕೈಹಿಡಿಯುತ್ತಾ ಪಾಮ್ ರೋಜ್ ಸುಗಂಧ ದ್ರವ್ಯದ ಬೆಳೆ?
ಮೈಸೂರು, ಆಗಸ್ಟ್ 31: ತಂಬಾಕವನ್ನು ನಿಷೇಧಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಬೆಳೆಯುತ್ತಿದ್ದ ಬಹುತೇಕ ರೈತರು ನಿಧಾನವಾಗಿ ಪರ್ಯಾಯ ಬೆಳೆಯತ್ತ ಮುಖ ಮಾಡುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಇದೀಗ ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ತಂಬಾಕು ಬೆಳೆಗೆ ಪರ್ಯಾವಾಗಿ ಪಾಮ್ ರೋಜ್ ಎಂಬ ಸುಗಂಧ ದ್ರವ್ಯದ ಬೆಳೆಯನ್ನು ಬೆಳೆಯಲು ರೈತರು ಮನಸ್ಸು ಮಾಡಿರುವುದು ಹೊಸ ಬೆಳವಣಿಗೆಯಾಗಿದೆ.
Recommended Video
ಇದುವರೆಗೆ ತಂಬಾಕು ವಾಣಿಜ್ಯ ಬೆಳೆಯಾಗಿರುವ ಕಾರಣ ಒಂದಷ್ಟು ಹೆಚ್ಚಿನ ಲಾಭ ಪಡೆಯಬಹುದು ಎಂಬ ಉದ್ದೇಶದಿಂದ ರೈತರು ಲಕ್ಷಾಂತರ ರೂ. ಸಾಲ ಮಾಡಿ ತಂಬಾಕನ್ನು ಬೆಳೆಯುತ್ತಾ ಬಂದಿದ್ದರು. ಕೆಲವರು ಇದರಿಂದ ಲಾಭ ಪಡೆದಿದ್ದರು. ಆದ್ದರಿಂದ ಬಂಡವಾಳ ಹಾಕಿ ಬೆಳೆದರೆ ಆದಾಯ ಪಡೆಯಬಹುದು ಎಂಬ ಕಾರಣಕ್ಕೆ ರೈತರು ಬ್ಯಾಂಕ್ ಮತ್ತು ಕೈ ಸಾಲ ಪಡೆದು ತಂಬಾಕು ಬೆಳೆಯಲು ಆರಂಭಿಸಿದ್ದರು. ಆದರೆ ಬಹಳಷ್ಟು ರೈತರಿಗೆ ತಂಬಾಕು ಮರೀಚಿಕೆಯಾಗಿದೆ.
ಯೂರಿಯ ರಿಪ್ಯಾಕಿಂಗ್ ಮಾಡಿ ಅಧಿಕ ದರಕ್ಕೆ ಮಾರಾಟ: ಮೂವರ ಬಂಧನ
ರೈತರಿಗೆ ನಷ್ಟವನ್ನುಂಟು ಮಾಡಿದ ತಂಬಾಕು
ಈಗಾಗಲೇ ಸಾಲಮಾಡಿ ತಂಬಾಕು ಬೆಳೆದು ನಷ್ಟ ಮಾಡಿಕೊಂಡ ರೈತರು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ಬೇಕಾದಷ್ಟಿವೆ. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ತಂಬಾಕು ರೈತರ ಕೈಹಿಡಿಯುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಾರಣ ದರ ಕುಸಿತದಿಂದಾಗಿ ಮಾಡಿದ ಖರ್ಚು ರೈತರಿಗೆ ಬಾರದಂತಾಗಿದೆ. ಇದರಿಂದ ನಷ್ಟ ಮಾಡಿಕೊಂಡಿರುವ ರೈತರು ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ.
ಪರ್ಯಾಯ ಬೆಳೆಯತ್ತ ಚಿತ್ತ ಹರಿಸಿದ ರೈತ
ಸದ್ಯದ ಪರಿಸ್ಥಿತಿಯಲ್ಲಿ ತಂಬಾಕಿನ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದಿರುವ ಹೆಚ್ಚಿನ ರೈತರು ಪರ್ಯಾಯ ಬೆಳೆಯನ್ನು ಬೆಳೆಯುವತ್ತ ಚಿಂತನೆ ಮಾಡುತ್ತಿದ್ದಾರೆ. ಮೊದಲೆಲ್ಲ ತಂಬಾಕು ಬೆಳೆಗಾರರನ್ನು ಪ್ರೋತ್ಸಾಹಿಸುತ್ತಿದ್ದ ಐಟಿಸಿ ಸಂಸ್ಥೆ ಕೂಡ ಈಗ ತಂಬಾಕು ಬದಲಿಗೆ ಬೇರೆ ಬೆಳೆಯನ್ನು ಬೆಳೆಯುವಂತೆ ರೈತರಿಗೆ ಮಾರ್ಗದರ್ಶನ ನೀಡುತ್ತಿರುವುದು ಕಂಡು ಬಂದಿದೆ.
ರೈತರು ಕೂಡ ಶುಂಠಿ, ಮೆಕ್ಕೆಜೋಳ ಬೆಳೆಯತ್ತ ಮುಖ ಮಾಡಿದ್ದಾರೆ. ಆದರೆ ಐಟಿಸಿ ಸಂಸ್ಥೆ ತಂಬಾಕು ಬೆಳೆಗೆ ಪರ್ಯಾಯವಾಗಿ ಸುಗಂದ ದ್ರವ್ಯದ ಪಾಮ್ರೋಜ್ ಬೆಳೆ ಬೆಳೆಯುವಂತೆ ಪ್ರೋತ್ಸಾಹಿಸುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಈ ಬೆಳೆಯ ಬಗ್ಗೆ ಅರಿತ ರೈತರು ಇದೀಗ ಹುಣಸೂರು ಮತ್ತು ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಸುಮಾರು ಇಪ್ಪತ್ತು ಎಕರೆ ಪ್ರದೇಶದಲ್ಲಿ ಪಾಮ್ ರೋಜ್ ಬೆಳೆದಿದ್ದಾರೆ. ಒಂದು ವೇಳೆ ಇದು ರೈತರಿಗೆ ಲಾಭ ತಂದುಕೊಡುವಂತಾದರೆ ಮುಂದಿನ ವರ್ಷಗಳಲ್ಲಿ ಈ ಬೆಳೆ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಪಾಮ್ ರೋಜ್ ಬೆಳೆಯಲು ಪ್ರೋತ್ಸಾಹ
ಸಾಮಾನ್ಯವಾಗಿ ಯಾವುದೇ ಬೆಳೆಯನ್ನು ಬೆಳೆದರೂ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಮಾರುಕಟ್ಟೆ. ಹೀಗಾಗಿ ಐಟಿಸಿಯಿಂದಲೇ ಖರೀದಿ ಕೇಂದ್ರ ಸ್ಥಾಪನೆಗೆ ಮುಂದಾಗಿರುವುದು ರೈತರಿಗೆ ಆಶಾಭಾವನೆ ಹುಟ್ಟಿಸಿದೆ. ಪಾಮ್ ರೋಜ್ ನತ್ತ ಆಸಕ್ತಿ ವಹಿಸಿ ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ರೈತ ವಿಜಯ್ ಅವರು ಬೆಳೆ ಬೆಳೆದಿದ್ದು, ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಸದ್ಯ ಐಟಿಸಿ ಸಂಸ್ಥೆಯ ಅಧಿಕಾರಿಗಳ ತಂಡ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದು, ರೈತರಿಗೆ ಪಾಮ್ ರೋಜ್ ಬೆಳೆಯ ಬಗ್ಗೆ ಅರಿವು ಮೂಡಿಸುವುದರೊಂದಿಗೆ ರೈತರಿಗೆ ದೊರೆಯುವ ಲಾಭದ ಕುರಿತಂತೆಯೂ ಮಾಹಿತಿ ನೀಡುತ್ತಿದ್ದಾರೆ.
ಐಟಿಸಿಯಿಂದ ರೈತರಿಗೆ ಉಚಿತ ಬೀಜ ವಿತರಣೆ
ಇನ್ನು ಪಾಮ್ ರೋಜ್ ಬೆಳೆ ಕುರಿತಂತೆ ಮಾಹಿತಿ ನೀಡಿರುವ ಐಟಿಸಿ ಸಂಸ್ಥೆಯ ಡಾ.ಚೈತ್ರ ನಾರಾಯಣ್ ಕದಂಬ ಅವರು ಒಂದು ಎಕರೆ ಪ್ರದೇಶದಲ್ಲಿ ಕನಿಷ್ಟ ಮೂರು ಟನ್ ಬೆಳೆ ಬೆಳೆಯಬಹುದು, ವರ್ಷಕ್ಕೆ ೫ ಬಾರಿ ಕಠಾವು ಮಾಡಿ ಪ್ರತಿ ಟನ್ಗೆ ೩೫೦೦ ರೂ. ಬೆಲೆ ಸಿಗುತ್ತದೆ. ಈ ಬೆಳೆ ಬೆಳೆಯುವ ಜಮೀನಿಗೆ ಯಾವುದೇ ಬೇಲಿ ಹಾಕುವ ಅಗತ್ಯವಿಲ್ಲ. ಏಕೆಂದರೆ ಪ್ರಾಣಿಗಳು ಇದರ ಸುವಾಸನೆಗೆ ತಿನ್ನುವುದಿಲ್ಲ ಎಂದಿರುವ ಅವರು ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಉಚಿತವಾಗಿ ಬೀಜ ನೀಡಿ ಪ್ರತಿ ಹಂತದಲ್ಲಿ ರೈತರ ಜಮೀನಿಗೆ ತೆರಳಿ ಬೆಳೆ ಬೆಳೆಯುವ ಮಾಹಿತಿ ನೀಡುವುದರೊಂದಿಗೆ ಬೆಳೆದ ಬೆಳೆಯನ್ನು ಖರೀದಿಸಲು ಖರೀದಿ ಕೇಂದ್ರ ಸ್ಥಾಪಿಸಿದ್ದಾಗಿಯೂ ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಪಾಮ್ ರೋಜ್ ರೈತರಿಗೆ ಆದಾಯ ತರುವುದರೊಂದಿಗೆ ತಂಬಾಕಿಗೆ ಪರ್ಯಾಯ ಬೆಳೆಯಾಗಿ ಜನಪ್ರಿಯವಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.