ಭೂಸುಧಾರಣೆ ಕಾಯ್ದೆ: ಮೋದಿ ವಿರುದ್ಧ ಸಂಘ ಪರಿವಾರದ ಅಸಮಾಧಾನ!
ಬೆಂಗಳೂರು, ಅ. 10: ಭೂ ಸುಧಾರಣಾ ಕಾಯ್ದದೆ ತಿದ್ದುಪಡಿ ಕುರಿತಂತೆ ಇದೀಗ ಸಂಘ ಪರಿವಾರದಲ್ಲಿಯೇ ವಿರೋಧ ಶುರುವಾಗಿದೆ. ಬಿಜೆಪಿಯ ಹಲವು ನಾಯಕರೂ ಕೂಡ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘವು ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿದೆ.
ವಿಶೇಷ ಎಂದರೆ ಭಾರತೀಯ ಕಿಸಾನ್ ಸಂಘವು ಸಂಘ ಪರಿವಾರದ ಅಂಗ ಸಂಸ್ಥೆ. ಸಂಘ ಪರಿವಾರದ ಅಂಗ ಸಂಸ್ಥೆಯೇ ಕೇಂದ್ರ ಸರ್ಕಾರದ ಕಾಯ್ದೆ ವಿರುದ್ಧ ಬೀದಿಗೆ ಇಳಿದು ಪ್ರತಿಭಟನೆ ಮಾಡಿದೆ. ಯಾವುದೇ ಕಾರಣಕ್ಕೂ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಬಾರದು ಎಂದು ಮನವಿ ಮಾಡಿಕೊಂಡಿದೆ. ಇವತ್ತು ಸಾಂಕೇತಿಕವಾಗಿ ರಾಜ್ಯದ ಸಚಿವರು, ಸಂದರು ಹಾಗೂ ಶಾಸಕರಿಗೆ ಮನವಿ ಕೊಡುವ ಮೂಲಕ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರವು ನಮ್ಮ ಮನವಿಗೆ ಮನ್ನಣೆ ನೀಡದೆ, ಸದನದಲ್ಲಿ ಚರ್ಚೆಯನ್ನೂ ಮಾಡದೇ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲು ಮತ್ತೆ ಸುಗ್ರೀವಾಜ್ಞೆ ತರಲು ಮುಂದಾಗಿದೆ. ಇದನ್ನು ಖಂಡಿಸಿ ನಾವು ಹೋರಾಟ ಮುಂದುವರೆಸಿದ್ದೇವೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಪಿ.ಎಸ್. ಪುಟ್ಟಸ್ವಾಮಿ ಗೌಡ ಅವರು 'ಒನ್ಇಂಡಿಯಾ ಕನ್ನಡ'ದ ಜೊತೆಗೆ ಮಾತನಾಡಿ ಮಾಹಿತಿ ನೀಡಿದ್ದಾರೆ.
ಸರ್ಕಾರದ ವಿರುದ್ಧ ಸಂಘದ ಪ್ರತಿಭಟನೆ
ಭೂ ಸುಧಾರಣಾ ಕಾಯಿದೆಗೆ ಸದನದಲ್ಲಿ ಅಂಗೀಕಾರ ಪಡೆದುಕೊಳ್ಳುವುದು ಸಾಧ್ಯವಾಗದೇ ರಾಜ್ಯ ಸರ್ಕಾರ ಮತ್ತೆ ಸುಗ್ರೀವಾಜ್ಞೆ ಮೂಲಕ ಆದೇಶ ಮಾಡಲು ಮುಂದಾಗಿದೆ. ರಾಜ್ಯ ಸರ್ಕಾರದ ಈ ನಡೆಯನ್ನು ಕಿಸಾನ್ ಸಂಘ ಖಂಡಿಸುತ್ತದೆ. ಇದನ್ನು ವಿರೋಧಿಸಿ ಇಂದಿನಿಂದ ಸಂಘದ ಕಾರ್ಯಕರ್ತರು, ರಾಜ್ಯದ ಎಲ್ಲ ಸಚಿವರು, ಸಂಸದರು ಹಾಗೂ ಶಾಸಕರ ಮನೆಗಳಿಗೆ ಜಾಥಾ ಮೂಲಕ ತೆರಳಿ ಸುಗ್ರೀವಾಜ್ಞೆ ಜಾರಿಗೆ ತರದಂತೆ ಮನವಿ ಕೊಟ್ಟಿದ್ದೇವೆ ಎಂದು ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ ಅವರು ಹೇಳಿದ್ದಾರೆ.
ಬಿಜೆಪಿ ಕಚೇರಿಗೆ ಜಾಥಾ
ಬೆಂಗಳೂರಿನ ಶೇಷಾದ್ರಿಪುರಂ ರಸ್ತೆಯ ಭಾರತೀಯ ಕಿಸಾನ್ ಸಂಘದ ಕಚೇರಿಯಿಂದ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಗೆ ಜಾಥಾದಲ್ಲಿ ತೆರಳಿ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲೇಬಾರದು ಎಂದು ಆಗ್ರಹಿಸಲಾಯ್ತು. ಸಂಘದ ನೂರಾರು ಜನರು ಭಾಗವಹಿಸಿದ್ದರು. ಕೃಷಿ ಜಮೀನಿನಲ್ಲಿ ಕೃಷಿಗೆ ಮಾತ್ರ ಅವಕಾಶ ಇರಬೇಕು, ಕೃಷಿ ಜಮೀನನ್ನು ಗಣಿಗಾರಿಕೆಗೆ ಕೊಡಬಾರದು, ಭೂಮಿತಿ ಹೆಚ್ಚಳ ಮಾಡಬಾರದು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಬೇಡ
ಭೂಸುಧಾರಣಾ ಕಾಯ್ದೆಯ 79 ಎ, ಬಿ, ಸಿ ಮತ್ತು 80ನೇ ಕಲಂಗಳಿಗೆ ರದ್ದು ಮಾಡುವ ಮೂಲಕ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಎಲ್ಲ ಸಚಿವರು, ಸಂಸದರು ಹಾಗೂ ಶಾಸಕರ ಮನೆಗಳಿಗೆ ಜಾಥಾ ಮೂಲಕ ತೆರಳಿ ಮನವಿ ಸಲ್ಲಿಸಲಾಗಿದೆ. ಇವತ್ತು ಸಾಂಕೇತಿಕವಾಗಿ ಆರಂಭವಾಗಿರುವ ಈ ಪ್ರತಿಭಟನೆಯ ಹೋರಾಟದ ಸ್ವರೂಪ ಮುಂದೆ ಬದಲಾಗಲಿದೆ ಎಂದು ಸಂಘ ತಿಳಿಸಿದೆ.
ಇವತ್ತು ಸಾಂಕೇತಿಕವಾಗಿ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಗೆ ತೆರಳಿ ಮನವಿ ಕೊಡಲಾಗಿದೆ.
ತಪ್ಪು ಹೇಳಬೇಕಲ್ಲವಾ?
ದೇಶದಲ್ಲಿ ಶೇಕಡಾ 80ರಷ್ಟು ರೈತರಿದ್ದಾರೆ. ನಮ್ಮ ಪೂರ್ವಜರ ಬಳುವಳಿ ಈ ಭೂಮಿ. ಹಾಗಂತ ಈ ಭೂಮಿ ನಮ್ಮದಲ್ಲ. ನಮ್ಮ ಮುಂದಿನ ಪೀಳಿಗೆಗೆ ಕೊಡಬೇಕಾದ ಜವಾಬ್ದಾರಿ ನಮಗಿದೆ. ಹೀಗಾಗಿ ಮನೆಯಲ್ಲಿ ಯಾರಾದರೂ ತಪ್ಪು ಮಾಡಿದಾಗ ತಿದ್ದಿ ಹೇಳುವುದಿಲ್ಲವಾ? ಹಾಗೆ ಇದು ಕೂಡ. ಸರ್ಕಾರ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ತಪ್ಪು ಮಾಡುತ್ತಿದೆ. ಹೀಗಾಗಿ ಅದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಪಿ.ಎಸ್. ಪುಟ್ಟಸ್ವಾಮಿ ಗೌಡ ಅವರು 'ಒನ್ಇಂಡಿಯಾ'ಕ್ಕೆ ವಿವರಿಸಿದರು.
ರಾಜ್ಯಾಧ್ಯಕ್ಷರ ಪರವಾಗಿ ಮನವಿ ಸ್ವೀಕಾರ
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ರಾಜ್ಯ ಪ್ರವಾಸದಲ್ಲಿ ಇರುವುದರಿಂದ ಜಾಥಾದಲ್ಲಿ ಬಂದಿದ್ದ ಕಿಸಾನ್ ಸಂಘದವರಿಂದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ಮನವಿ ಸ್ವೀಕರಿಸಿದರು.
ಸಂಘದ ಒತ್ತಾಯವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುವ ಭರವಸೆಯನ್ನು ಕೊಡಲಾಗಿದೆ. ಇದೀಗ ಸಂಘ ಪರಿವಾರದಲ್ಲಿಯೇ ಭೂಸುಧಾರಣಾ ಕಾಯ್ದೆಗೆ ವಿರೋಧ ವ್ಯಕ್ತವಾಗಿರುವುದರಿಂದ, ಪ್ರಧಾನಿ ನರೇಂದ್ರ ಮೋದಿ ಅವರ ನೀತಿಯ ವಿರುದ್ಧ ಸಂಘ ಪರಿವಾರ ಅಸಮಾಧಾನ ವ್ಯಕ್ತಪಡಿಸಿದಂತಾಗಿದೆ.