ಕ್ಯಾಮೆರಾದಲ್ಲಿ ಹುಲಿ ಚಿತ್ರ ಸೆರೆ; ಬಂಡೀಪುರದಲ್ಲಿ ಆನೆಗಳಿಂದ ಕಾರ್ಯಾಚರಣೆ
ಚಾಮರಾಜನಗರ, ಏಪ್ರಿಲ್ 20: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಕಾಡಂಚಿನ ಕುಂದಕೆರೆ ಗ್ರಾಮ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಕಂಟಕವಾಗಿರುವ ಹುಲಿಯ ಸೆರೆಗಾಗಿ ನಾಲ್ಕು ಸಾಕಾನೆಗಳ ಸಹಕಾರದೊಂದಿಗೆ ಹುಡುಕಾಟ ಆರಂಭಿಸಲಾಗಿದೆ. ಆದರೆ ಹುಲಿ ಮಾತ್ರ ಇನ್ನೂ ಪತ್ತೆಯಾಗಿಲ್ಲ.
ಕುಂದಕೆರೆ ವಲಯದ ಕಾಡಂಚಿನ ಗ್ರಾಮಗಳಾದ ಕಡಬೂರು, ಚಿರಕನಹಳ್ಳಿ ಹಾಗೂ ಕುಂದಕೆರೆ ಗ್ರಾಮಗಳಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಅಡ್ಡಾಡುತ್ತಿರುವ ಹುಲಿ ಈಗಾಗಲೇ ಐದು ಜಾನುವಾರುಗಳ ಮೇಲೆ ದಾಳಿ ಮಾಡಿ ಸಾಯಿಸಿದೆ. ಇದರಿಂದ ಇಲ್ಲಿನ ಜನ ಆತಂಕಗೊಂಡಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು.
ಹುಲಿ ಸೆರೆಗೆ 40 ಕ್ಯಾಮೆರಾ ಅಳವಡಿಕೆ
ಹುಲಿಯ ಸೆರೆಗಾಗಿ ಅರಣ್ಯ ಇಲಾಖೆ 40 ಕ್ಯಾಮೆರಾ ಅಳವಡಿಸಿದ್ದು, ಈಗಾಗಲೇ ಕ್ಯಾಮೆರಾದಲ್ಲಿ ಐದರಿಂದ ಆರು ವರ್ಷದ ಹೆಣ್ಣು ಹುಲಿಯೊಂದರ ಚಿತ್ರ ಸೆರೆಯಾಗಿದೆ. ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿ ಅದೇನಾ? ಎಂಬುದು ಖಾತ್ರಿಯಾಗಬೇಕಾಗಿದೆ. ಸದ್ಯ ಹುಲಿಯ ಸೆರೆಗಾಗಿ ಕಾಡಂಚಿನ ಗ್ರಾಮಗಳಾದ ಕುಂದಕೆರೆ, ಕಡಬೂರು, ಚಿರಕನಹಳ್ಳಿ ವ್ಯಾಪ್ತಿಯಲ್ಲಿ ಕ್ಯಾಮೆರಾ ಅಳವಡಿಸುವುದರೊಂದಿಗೆ ನಾಲ್ಕು ಬೋನ್ ಇಡಲಾಗಿದೆ.
ಗುಂಡ್ಲುಪೇಟೆ ಕಾಡಂಚಿನ ರೈತರ ನಿದ್ದೆಗೆಡಿಸಿರುವ ಹುಲಿ; ಐದು ಹಸು ಬಲಿ
ಅಧಿಕಾರಿಗಳಿಂದ ಕಾರ್ಯಾಚರಣೆ ಆರಂಭ
ಇನ್ನೊಂದೆಡೆ ರಾಮಾಪುರ ಆನೆ ಶಿಬಿರಗಳಿಂದ ಸಾಕಾನೆಗಳಾದ ಜಯಪ್ರಕಾಶ್, ಪಾರ್ಥ ಸಾರಥಿ, ಗಣೇಶ ಹಾಗೂ ಕೃಷ್ಣ ನಾಲ್ಕು ಆನೆಗಳನ್ನು ಕರೆಸಿಕೊಂಡು ಕಾರ್ಯಾಚರಣೆಯನ್ನು ಅರಣ್ಯಾಧಿಕಾರಿಗಳು ಆರಂಭಿಸಿದ್ದಾರೆ. ಹುಲಿ ಜಾನುವಾರುಗಳ ಬಲಿ ಪಡೆದಂತಹ ಜಾಗದಲ್ಲಿ ಜಾನುವಾರುಗಳ ಮೃತದೇಹ ಬಿಟ್ಟರೆ ಹುಲಿ ಹಿಡಿಯಲು ಅನುಕೂಲವಾಗುತ್ತದೆ. ಬಲಿ ಪಡೆದಂತಹ ಜಾನುವಾರುಗಳನ್ನು ಊಳುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ಆತಂಕದಲ್ಲಿಯೇ ದಿನದೂಡುತ್ತಿರುವ ರೈತರು
ಮೂರು ದಿನಗಳ ಹಿಂದೆ ರಾಮಾಪುರ ಆನೆ ಶಿಬಿರದಿಂದ ಕಾಲ್ನಡಿಗೆಯಲ್ಲಿ ಆನೆಗಳನ್ನು ಮೇಲುಕಾಮನಹಳ್ಳಿ ಬಳಿಗೆ ಕರೆದುಕೊಂಡು ಬರಲಾಗಿದ್ದು, ನಂತರ ಉಪಕಾರ ಕಾಲೋನಿ ಸಮೀಪ ಆನೆಗಳನ್ನು ಬಿಡಲಾಗಿದೆ. ಆನೆಗಳಿಗೆ ಸರಿಯಾದ ಮೇವು ನೀರು ದೊರೆಯುತ್ತಿಲ್ಲ ಎಂಬ ಆರೋಪವೂ ಇದೆ. ಇದೆಲ್ಲದರ ನಡುವೆ ಅರಣ್ಯ ಸಿಬ್ಬಂದಿ ಆನೆಗಳ ಸಹಕಾರದಿಂದ ಹುಡುಕಾಟ ಆರಂಭಿಸಿದ್ದಾರೆ. ಒಟ್ಟಾರೆ ಹುಲಿ ಸೆರೆ ಸಿಗುವ ತನಕ ಇಲ್ಲಿನ ರೈತರು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ.
ಮನವಿ ಮಾಡಿಕೊಂಡಿದ್ದ ಗ್ರಾಮಸ್ಥರು
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯದಲ್ಲಿ ಹುಲಿ ಉಪಟಳ ಜಾಸ್ತಿಯಾಗಿದ್ದು, ಹೊಂಚು ಹಾಕಿ ಜಾನುವಾರುಗಳ ಮೇಲೆ ದಾಳಿ ಮಾಡಿ ಬಲಿ ತೆಗೆದುಕೊಳ್ಳುತ್ತಿದೆ. ಕಳೆದ ಆರು ದಿನಗಳಿಂದ ಗ್ರಾಮದ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿರುವ ಹುಲಿ ಇದುವರೆಗೆ ಸುಮಾರು ಐದು ಹಸುವನ್ನು ಕೊಂದು ಹಾಕಿದೆ. ಪ್ರತಿನಿತ್ಯ ಹುಲಿಗಳು ಜಾನುವಾರುಗಳನ್ನು ಬಲಿಪಡೆಯುತ್ತಿದ್ದರೂ ಜನಪ್ರತಿನಿಧಿಗಳು ನಮ್ಮ ಸಮಸ್ಯೆಯನ್ನು ಕೇಳುತ್ತಿಲ್ಲ. ಹೀಗಾಗಿ ಹುಲಿಯನ್ನು ಸೆರೆ ಹಿಡಿದು ಹಸುಗಳ ಜೀವ ಉಳಿಸಿ ಎಂದು ರೈತರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.