ಕೋಲಾರದ ಮಾವು ಬೆಳೆಗಾರ ಸಹಾಯಕ್ಕೆ ಬಂದಿದೆ ಆನ್ ಲೈನ್ ವಹಿವಾಟು
ಕೋಲಾರ, ಮೇ 20: ಈಗ ಮಾವಿನ ಸೀಸನ್. ಆದರೆ ಈ ಸೀಸನ್ ಗೆಂದೇ ಥರಾವರಿ ಮಾವು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ಎಷ್ಟೋ ರೈತರಿಗೆ ಲಾಕ್ ಡೌನ್ ತಣ್ಣೀರೆರೆಚಿದೆ. ಲಾಕ್ ಡೌನ್ ನಿಂದಾಗಿ ಬೆಳೆದ ಮಾವನ್ನು ಮಾರುಕಟ್ಟೆಗೆ ಸರಿಯಾಗಿ ಸಾಗಿಸಲೂ ಆಗದೇ ನಷ್ಟ ಅನುಭವಿಸುವಂತಾಗಿ ಮಾವು ಬೆಳೆದ ರೈತರು ಕಂಗಾಲಾಗಿದ್ದರು.
ಆದರೆ ಕೋಲಾರದ ಮಾವು ಬೆಳೆದ ರೈತರಿಗೆ ನೆರವಾಗುವ ದೃಷ್ಟಿಯಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಅಂಚೆ ಇಲಾಖೆ ಮೂಲಕ ಬೆಂಗಳೂರಿನ ಗ್ರಾಹಕರ ಮನೆ ಬಾಗಿಲಿಗೆ ಮಾವಿನ ಹಣ್ಣು ತಲುಪಿಸುವ ವಿನೂತನ ಸೇವೆ ಆರಂಭಿಸಿದೆ. ಅದರ ಕುರಿತ ವಿವರ ಇಲ್ಲಿದೆ...
ನೇರ ಗ್ರಾಹಕರ ಕೈ ಸೇರಲಿವೆ
ಅಂಚೆ ಇಲಾಖೆ ಜತೆ ಒಪ್ಪಂದ ಮಾಡಿಕೊಂಡಿರುವ ನಿಗಮವು ಮಾವು ಬೆಳೆಗಾರರು ಮತ್ತು ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಾಜಾ ಹಾಗೂ ರುಚಿಕರ ಮಾವಿನ ಹಣ್ಣುಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರಿಂದ ನೇರವಾಗಿ ಗ್ರಾಹಕರ ಕೈ ಸೇರುತ್ತಿವೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದ್ದು, ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಮಾವು ರಫ್ತು ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಸದ್ಯ 52,371 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ಈ ಬಾರಿ ಸುಮಾರು 2.35 ಲಕ್ಷ ಟನ್ ಫಸಲು ನಿರೀಕ್ಷಿಸಲಾಗಿದೆ.
ಮಾರುಕಟ್ಟೆಗೆ ಕೊಪ್ಪಳ ಮಾವು; ಮನೆ ಬಾಗಿಲಿಗೆ ಬರಲಿದೆ ತಾಜಾ ಹಣ್ಣು
ರೈತರ ಸಂಕಷ್ಟ ನಿವಾರಣೆಗೆ ಬಂದ ನಿಗಮ
ಲಾಕ್ಡೌನ್ ಕಾರಣಕ್ಕೆ ಮಾವು ಬೆಳೆಗಾರರಿಗೆ ಬೆಲೆ ಕುಸಿತದ ಆತಂಕ ಎದುರಾಗಿದ್ದು, ರೈತರ ಸಂಕಷ್ಟ ನಿವಾರಣೆಗಾಗಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಮಾವಿನ ಆನ್ಲೈನ್ ವಹಿವಾಟು ಆರಂಭಿಸಿದೆ. ಈ ಉದ್ದೇಶಕ್ಕಾಗಿ ನಿಗಮವು ಜಿಲ್ಲೆಯ ಮಾವು ಬೆಳೆಗಾರರ ಜತೆಗೆ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 68 ರೈತರು ಮಾವು ಮಾರಾಟಕ್ಕೆ ಆಸಕ್ತಿ ತೋರಿ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿದ್ದಾರೆ. ಜಿಲ್ಲೆಯಲ್ಲಿ ಮೇ ಆರಂಭದಿಂದ ಮಾವು ಕೊಯ್ಲು ಆರಂಭವಾಗಿದ್ದು, ಈವರೆಗೆ 28 ಮಂದಿ ಮಾವು ಬೆಳೆಗಾರರು ಪೋರ್ಟಲ್ ನಲ್ಲಿ ಹೆಸರು ದಾಖಲಿಸಿದ್ದಾರೆ.
ಆರ್ಡರ್ ಗೆ ತಕ್ಕಂತೆ ಮಾವಿನ ರವಾನೆ
ರೈತರು ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯ ಜತೆ ತಾವು ಬೆಳೆದಿರುವ ಮಾವಿನ ತಳಿ, ಹಣ್ಣಿನ ಬೆಲೆಯ ವಿವರವನ್ನು ಪೋರ್ಟಲ್ ನಲ್ಲಿ ದಾಖಲಿಸಿದ್ದಾರೆ. ಗ್ರಾಹಕರು ಈ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿ ತಮಗೆ ಇಷ್ಟವಾದ ತಳಿಯ ಮಾವಿನ ಹಣ್ಣು ಮತ್ತು ಬೆಲೆ ಪರೀಕ್ಷಿಸಿ ಎಷ್ಟು ಪ್ರಮಾಣದಲ್ಲಿ ಹಣ್ಣು ಬೇಕೆಂದು ಬುಕ್ಕಿಂಗ್ ಮಾಡಿದರೆ ನಿಗಮಕ್ಕೆ ಹಾಗೂ ಸಂಬಂಧಪಟ್ಟ ರೈತರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ.
ಮಂಡ್ಯ ನಗರದ ಜನಕ್ಕೆ ಆನ್ ಲೈನ್ನಲ್ಲೇ ಮಾವಿನ ಹಣ್ಣು ಮಾರಾಟ!
ನಂತರ ರೈತರು ತಮಗೆ ಬರುವ ಬುಕ್ಕಿಂಗ್ ಆರ್ಡರ್ ಕ್ರೋಢೀಕರಿಸಿ ಬಾಕ್ಸ್ನಲ್ಲಿ ಮಾವಿನ ಹಣ್ಣುಗಳನ್ನು ಪ್ಯಾಕ್ ಮಾಡಿ ಗ್ರಾಹಕರ ವಿಳಾಸ ನಮೂದಿಸಿ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಗೆ ರವಾನಿಸುತ್ತಿದ್ದಾರೆ. ಅಲ್ಲಿಂದ ಪೋಸ್ಟ್ಮನ್ಗಳು ಗ್ರಾಹಕರ ಮನೆಗೆ ಮಾವಿನ ಹಣ್ಣು ತಲುಪಿಸುತ್ತಿದ್ದಾರೆ. ಸದ್ಯ ವಾರದಲ್ಲಿ 2 ದಿನ ಮಾತ್ರ (ಮಂಗಳವಾರ ಮತ್ತು ಶುಕ್ರವಾರ) ಈ ಸೇವೆ ನೀಡಲಾಗುತ್ತಿದ್ದು, ಮಾವಿನ ಹಣ್ಣಿನ ಬಾಕ್ಸ್ಗಳ ಸಾಗಣೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ.
ಗ್ರಾಹಕರಿಂದ ಉತ್ತಮ ಸ್ಪಂದನೆ
ಗ್ರಾಹಕರು ಹಣ್ಣು ಬುಕ್ಕಿಂಗ್ ಮಾಡುವ ಸಂದರ್ಭದಲ್ಲೇ ಅದರ ಮೊತ್ತವನ್ನು ನಿಗಮಕ್ಕೆ ಪಾವತಿಸಬೇಕು. ಜತೆಗೆ ಪ್ರತಿ ಕೆ.ಜಿ ಹಣ್ಣಿಗೆ ಸೇವಾ ಶುಲ್ಕವಾಗಿ ₹ 27 ಅನ್ನು ಅಂಚೆ ಇಲಾಖೆಗೆ ಪಾವತಿಸಬೇಕು. ಹಣ್ಣು ಗ್ರಾಹಕರ ಕೈ ಸೇರಿದ ನಂತರ ನಿಗಮವು ಸಂಬಂಧಪಟ್ಟ ರೈತರ ಖಾತೆಗೆ ಹಣ ಜಮಾ ಮಾಡುತ್ತಿದೆ. ನಿಗಮದ ಈ ಸೇವೆಗೆ ಮಾವು ಬೆಳೆಗಾರರು ಹಾಗೂ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸುವ ರೈತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.