ಈರುಳ್ಳಿ ಬೆಲೆ ಕುಸಿತ; ಪರಿಹಾರ ನೀಡುವಂತೆ ಸಿಎಂಗೆ ಮನವಿ ಮಾಡಿದ ರೈತ ಮಹಿಳೆ
ಚಿತ್ರದುರ್ಗ, ಮೇ 11: ರಾಜ್ಯಾದ್ಯಂತ ಕೊರೊನಾ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಅನ್ನದಾತರ ಬದುಕು ದುಸ್ಥಿತಿಗೆ ಬಂದು ತಲುಪಿದೆ. ಲಾಕ್ಡೌನ್ ಅವಧಿಯಲ್ಲಿ ರೈತರು, ಕೃಷಿ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸುಮಾರು 50 ಚೀಲ ಈರುಳ್ಳಿ ಬೆಳೆದು, ಬೆಲೆ ಕುಸಿತ ಕಂಡಿರುವುದರಿಂದ ಸಿಎಂ ಯಡಿಯೂರಪ್ಪ ಅವರಿಗೆ ಹಿರಿಯೂರು ತಾಲೂಕಿನ ರೈತ ಮಹಿಳೆಯೊಬ್ಬರು ಸೂಕ್ತ ಪರಿಹಾರ ನೀಡುವಂತೆ ವಿಡಿಯೋ ಮೂಲಕ ಕೈ ಮುಗಿದು ಮನವಿ ಮಾಡಿದ್ದಾರೆ.
ಲಾಕ್ಡೌನ್ ಎಫೆಕ್ಟ್: ದ.ಕ ಜಿಲ್ಲೆಯಲ್ಲಿ ನೆಲಕಚ್ಚಿದ ತರಕಾರಿ, ಮೀನುಗಾರಿಕಾ ಉದ್ಯಮ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿ ಗ್ರಾಮದ ರೈತ ಮಹಿಳೆ ಲಕ್ಷ್ಮಕ್ಕ 50ಕ್ಕೂ ಹೆಚ್ಚು ಚೀಲ ಈರುಳ್ಳಿ ಬೆಳೆದು ಮನೆಯಲ್ಲಿ ಶೇಖರಿಸಿಕೊಂಡಿದ್ದಾರೆ.
ಕೊರೊನಾ ಲಾಕ್ಡೌನ್ ಅವಧಿಯಲ್ಲಿ ರೈತರು, ಕೃಷಿ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸಿದರು. ಹಿನ್ನೆಲೆಯಲ್ಲಿ ಮಾರಾಟ ಮಾಡಲು ಮಾರುಕಟ್ಟೆ ಇಲ್ಲ, ಜೊತೆಗೆ ಈರುಳ್ಳಿ ಖರೀದಿಸಲು ಯಾರೂ ಸಹ ಮುಂದೆ ಬರುತ್ತಿಲ್ಲ ಇದರಿಂದ ರೈತ ಮಹಿಳೆ ಕಂಗಾಲಾಗಿದ್ದು, ಈರುಳ್ಳಿಗೆ ಸೂಕ್ತ ಪರಿಹಾರ ನೀಡುವಂತೆ ಮಹಿಳೆ ಕೈಮುಗಿದು ಸಿಎಂ ಅವರಿಗೆ ಮನವಿ ಮಾಡಿದ್ದಾರೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆಯಲಾಗಿದೆ. ಮಾರಾಟ ಮಾಡೋಣವೆಂದರೆ ಲಾಕ್ಡೌನ್ ಇದ್ದು, ಈಗ ಈರುಳ್ಳಿ ಕೊಳೆಯುತ್ತಿದೆ ಎಂದು ಮಹಿಳೆ ಅಳಲನ್ನು ತೋಡಿಕೊಂಡಿದ್ದಾರೆ.
ಒಂದು ಚೀಲಕ್ಕೆ 500 ರೂಪಾಯಿ ಖರ್ಚು ಮಾಡಿದ್ದು, ಈಗ 300 ರೂಪಾಯಿಗೆ ಕೇಳುತ್ತಿದ್ದಾರೆ. ನಮಗೆ ತುಂಬಾ ನಷ್ಟ ಉಂಟಾಗಿದೆ. ಇದನ್ನು ತುಂಬಾ ದಿನ ಇಟ್ಟುಕೊಳ್ಳುವ ವಸ್ತು ಅಲ್ಲ ಎಂದು ನೋವು ತೋಡಿಕೊಂಡರು. ಇದರಿಂದ ರೈತರಿಗೆ ಏನಾದರೂ ಪರಿಹಾರ ಕೊಡಿ ಸ್ವಾಮಿ, ನಾವು ಬಡವರು, ಸಾಲ ಮಾಡಿ ಈರುಳ್ಳಿ ಬೆಳೆದಿದ್ದೇವೆ, ಸಾಲಗಾರರ ಕಾಟ ಹೆಚ್ಚಾಗಿದೆ ಎಂದು ಅಲವತ್ತುಕೊಂಡರು.
ಬೇಡ ಬೇಡ ಎಂದರೂ, ನಾನು ಸಾಲ ಮಾಡಿ ಈರುಳ್ಳಿ ಬೆಳೆದಿದ್ದೇನೆ, ಬಡ್ಡಿ ಕಟ್ಟಲು ಆಗುತ್ತಿಲ್ಲ. ಮಕ್ಕಳು ಬೆಂಗಳೂರು ಕಡೆ ಹೋಗಿರುವವರು ಬಂದಿಲ್ಲ. ಸಾಲದವರ ಕಾಟ ಹೆಚ್ಚಾಗಿದ್ದು, ಮನೆ ಹತ್ತಿರ ಬಂದು ಬಂದು ಹೋಗುತ್ತಿದ್ದಾರೆ. ಈರುಳ್ಳಿ ಕೊಳ್ಳುವವರು ಯಾರೂ ಇಲ್ಲದಂತಾಗಿದೆ. ದಯಮಾಡಿ ಸಿಎಂ ಸಾಹೇಬರು ಒಳ್ಳೆಯ ಬೆಲೆ ಕೊಟ್ಟು ಉಳಿಸಿ ಸ್ವಾಮಿ, ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ರೈತ ಮಹಿಳೆ ಲಕ್ಷ್ಮಕ್ಕ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.