ಒಂದು ಜಿಲ್ಲೆ, ಒಂದು ಉತ್ಪನ್ನಕ್ಕೆ ಮೈಸೂರಿನ ಬಾಳೆ, ಕೊಡಗಿನ ಕಾಫಿ ಆಯ್ಕೆ
ಮೈಸೂರು, ಜನವರಿ 7: ಒನ್ ಡಿಸ್ಟ್ರಿಕ್ಟ್, ಒನ್ ಪ್ರಾಡಕ್ಟ್ ಯೋಜನೆಗೆ ಮೈಸೂರು ಜಿಲ್ಲೆಯಿಂದ ಬಾಳೆ ಬೆಳೆ ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಳೆ ಬೆಳೆಯನ್ನು ಉತ್ಪನ್ನ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಯ್ಕೆ ಮಾಡಲಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ರಸಬಾಳೆಯು ಉತ್ಕೃಷ್ಟ ಗುಣಮಟ್ಟ ಮತ್ತು ಸುವಾಸನೆಯನ್ನು ಹೊಂದಿರುವುದರಿಂದ ದಶಕಗಳಿಂದಲೇ ಜನಪ್ರಿಯವಾಗಿದೆ.
ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಅಡಿಯಲ್ಲಿ ಬಾಳೆ ಬೆಳೆ ಆಯ್ಕೆಯಾಗಿದೆ. ಪ್ರತಿ ಜಿಲ್ಲೆಯ ಒಂದೊಂದು ಬೆಳೆಯನ್ನು ಆಯ್ಕೆ ಮಾಡಿ ಬಳಿಕ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ಈ ಯೋಜನೆ ಮೂಲಕ ಬಾಳೆ ಬೆಳೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಹಾಗೂ ಬಾಳೆ ಹಣ್ಣಿನಿಂದ ಇತರೆ ವಸ್ತುಗಳ ತಯಾರಿಸುವ ಗುರಿ ಹೊಂದಲಾಗಿದೆ.
ಮೇಕ್ ಇನ್ ಇಂಡಿಯಾ ಕರ್ನಾಟಕದ ಒಂದು ಜಿಲ್ಲೆ ಒಂದು ಉತ್ಪನ್ನಗಳು
ಅದೇ ರೀತಿ ಪ್ರವಾಸಿ ಜಿಲ್ಲೆ ಕೊಡಗಿನಿಂದ ಕಾಫಿಯನ್ನು ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಕಾಫಿಯಿಂದ ತಯಾರಿಸಬಹುದಾದ ಮತ್ತಷ್ಟು ಉತ್ಪನ್ನಗಳ ಸಂಶೋಧನೆಗೆ ಹೆಚ್ಚಿನ ಅನುದಾನ ಮತ್ತು ಇದನ್ನು ಜನಪ್ರಿಯಗೊಳಿಸಲು ನೆರವಾಗಲಿದೆ.
ಚಾಮರಾಜನಗರ ಜಿಲ್ಲೆಯಿಂದ ಅರಿಶಿನ ಬೆಳೆ
ಕಿರು ಉದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಆತ್ಮನಿರ್ಭರ ಯೋಜನೆಯಡಿ ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ (ಒಡಿಒಪಿ) ಯೋಜನೆ ಜಾರಿಗೆ ಬಂದಿದೆ. ಚಾಮರಾಜನಗರ ಜಿಲ್ಲೆಯಿಂದ ಅರಿಶಿನ ಬೆಳೆ, ಮಂಡ್ಯ ಜಿಲ್ಲೆಯಿಂದ ಬೆಲ್ಲವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಪಿಎಂ-ಫಾರ್ಮಲೈಸೇಶನ್ ಆಫ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ (ಪಿಎಂಎಫ್ಎಂಇ) ಯೋಜನೆಯಡಿ ಕರ್ನಾಟಕದ ಒಡಿಒಪಿ ಪಟ್ಟಿಯನ್ನು ಕೇಂದ್ರವು ಅನುಮೋದಿಸಿದೆ. ಇದರ ಭಾಗವಾಗಿ, ಅಸಂಘಟಿತ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಸಣ್ಣ ಉದ್ಯಮಗಳನ್ನು ನಡೆಸುವವರು ಸರ್ಕಾರದ ಬೆಂಬಲದಿಂದ ಲಾಭ ಪಡೆಯುತ್ತಾರೆ. ಅದು ಸಾಲವನ್ನು ಪಡೆಯುವುದಕ್ಕಾಗಿ ಅಥವಾ ತಮ್ಮ ಉತ್ಪನ್ನಗಳನ್ನು ಉತ್ತಮವಾಗಿ ಮಾರಾಟ ಮಾಡಲು ತರಬೇತಿ ಪಡೆಯುವುದಕ್ಕಾಗಿಯೂ ನೆರವನ್ನು ಪಡೆಯಲಿದ್ದಾರೆ.
ಪ್ರಧಾನವಾಗಿ ಬೆಳೆಯುವ ಆಧಾರದ ಮೇಲೆ ಆಯ್ಕೆ
ಈ ಬಗ್ಗೆ ಮಾತನಾಡಿದ ಈ ಯೋಜನೆಯ ನೋಡಲ್ ಏಜೆನ್ಸಿಯ ಕರ್ನಾಟಕ ರಾಜ್ಯ ಕೃಷಿ ಉತ್ಪಾದನಾ ಸಂಸ್ಕರಣ ಮತ್ತು ರಫ್ತು ನಿಗಮ ಲಿಮಿಟೆಡ್ (ಕೆಎಪಿಇಸಿ)ಯ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವರಾಜು, ಪ್ರತಿ ಜಿಲ್ಲೆಯ ಉತ್ಪನ್ನಗಳನ್ನು ಆ ಪ್ರದೇಶದಲ್ಲಿ ಪ್ರಧಾನವಾಗಿ ಬೆಳೆಯುವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಮತ್ತು ಉತ್ಪನ್ನಕ್ಕಾಗಿ ಪ್ರತಿ ಜಿಲ್ಲೆಯ ವಿಶಿಷ್ಟ ಮಾರುಕಟ್ಟೆ ಸಾಮರ್ಥ್ಯವನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮ ಉತ್ತೇಜನೆ
ಉದಾಹರಣೆಗೆ, ಬೆಂಗಳೂರು ನಗರದಲ್ಲಿ ಕೃಷಿಗೆ ಹೆಚ್ಚಿನ ಅವಕಾಶವಿಲ್ಲದ ಕಾರಣ ಬೇಕರಿ ಉತ್ಪನ್ನಗಳನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ಉಡುಪಿಗೆ ಸಮುದ್ರ ಉತ್ಪನ್ನಗಳನ್ನು ಆಯ್ಕೆ ಮಾಡಲಾಗಿದೆ. ಪಿಎಂಎಫ್ಎಂಇ ಯೋಜನೆಯು ಅಸಂಘಟಿತ ವಲಯದಲ್ಲಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಪ್ರತಿ ಜಿಲ್ಲೆಯೊಳಗೆ ಆಯ್ದ ಉದ್ಯಮಗಳಿಗೆ ಸಬ್ಸಿಡಿಗಳು, ಬ್ಯಾಂಕ್ ಸಾಲ ನೀಡುವುದು ಮತ್ತು ರಾಜ್ಯ ಸರ್ಕಾರವು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ತರಬೇತಿ ನೀಡಲಾಗುವುದು.
ಒಟ್ಟು 10,784 ಉದ್ಯಮಗಳನ್ನು ತಲುಪುವ ಗುರಿ
ಈ ಯೋಜನೆಯಡಿಯಲ್ಲಿ ಈಗ ಮಾಸ್ಟರ್ ತರಬೇತುದಾರರಿಗೆ ತರಬೇತಿ ನೀಡಲಾಗುತ್ತಿದೆ. ಶೀಘ್ರದಲ್ಲೇ ಜಿಲ್ಲಾ ಮಟ್ಟದ ತರಬೇತುದಾರರು ಜಿಲ್ಲಾ ಕೇಂದ್ರಗಳಲ್ಲಿ ನೇಮಕಗೊಂಡು ರೈತರಿಗೆ ನೆರವಾಗಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ವೆಬ್ ಪೋರ್ಟಲ್ನ್ನು ತೆರೆಯಲಾಗುವುದು ಅದರಲ್ಲಿ ಅರ್ಜಿದಾರನು ತನ್ನ ವ್ಯವಹಾರ (ಬಿಸಿನೆಸ್) ಪ್ರಸ್ತಾಪವನ್ನು ಸಲ್ಲಿಸಬೇಕು. ನಂತರ ಪರಿಶೀಲಿಸಿ ಸರ್ಕಾರ ಬ್ಯಾಂಕ್ ಸಾಲಗಳಿಗೆ ಸಹಾಯ ಮಾಡುತ್ತದೆ. ಈ ಯೋಜನೆಯಡಿಯಲ್ಲಿ ಪಡೆಯುವ ಸಾಲಕ್ಕೆ ಶೇ.35% ಸಬ್ಸಿಡಿ ನೀಡುವುದಲ್ಲದೆ, ಉದ್ಯಮಿಗಳಿಗೆ ತರಬೇತಿಯನ್ನೂ ನೀಡುತ್ತದೆ. ಕೇಂದ್ರ ಸರ್ಕಾರವು ಶೇ.60% ರಷ್ಟು ವೆಚ್ಚವನ್ನು ಹೂಡಿಕೆ ಮಾಡುತ್ತದೆ ಮತ್ತು ಉಳಿದ ಶೇ.40% ಹಣವನ್ನು ರಾಜ್ಯ ಸರ್ಕಾರವು ತೊಡಗಿಸಲಿದೆ. ಮುಂದಿನ ಐದು ವರ್ಷಗಳಲ್ಲಿ 493 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಇದು ಒಟ್ಟು 10,784 ಉದ್ಯಮಗಳನ್ನು ತಲುಪುವ ಗುರಿಯನ್ನು ಹೊಂದಿದೆ.