ಮಾರುಕಟ್ಟೆಗೆ ಕೊಪ್ಪಳ ಮಾವು; ಮನೆ ಬಾಗಿಲಿಗೆ ಬರಲಿದೆ ತಾಜಾ ಹಣ್ಣು
ಕೊಪ್ಪಳ, ಮೇ 15 : ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಈ ಬಾರಿ ಮಾವು ಮೇಳ ಆಯೋಜನೆ ಮಾಡುತ್ತಿಲ್ಲ. ಆದರೆ, 'ಕೊಪ್ಪಳ ಮಾವು' ಶೀರ್ಷಿಕೆಯಡಿ ಮಾವಿನ ಹಣ್ಣುಗಳ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಮನೆ ಬಾಗಿಲಿಗೆ ತಾಜಾ ಹಣ್ಣುಗಳು ಬರಲಿವೆ.
ಕೊಪ್ಪಳ ಜಿಲ್ಲಾಡಳಿತ, ಕೊಪ್ಪಳ ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮ (ನಿ.), ಬೆಂಗಳೂರು ಜಂಟಿಯಾಗಿ 'ಕೊಪ್ಪಳ ಮಾವು' ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಸಂಸದ ಸಂಗಣ್ಣ ಕರಡಿ ಮತ್ತು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಶೀರ್ಷಿಕೆ ಅನಾವರಣ ಮಾಡಿದರು.
ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ!
ಈ ಬಾರಿ ಕೇಸರ್, ಆಪುಸ್, ಬೆನೆಸಾನ್, ಸಿಂಧೂರ್, ದಸೇರಿ ಸೇರಿದಂತೆ 14 ವಿವಿಧ ತಳಿಯ ಮಾವುಗಳನ್ನು ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಂದ ಖರೀದಿಸಲಾಗಿದೆ. ಈ ತಳಿಗಳಲ್ಲಿ 'ಕೇಸರ್' ತಳಿಗೆ ಅತಿ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಲ್ಲಿ ಮಾವು ಮಾರಾಟಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.
ಮಾರುಕಟ್ಟೆಗೆ ಬಂದ ಹಾವೇರಿ ಆಲ್ಫಾನ್ಸೋ ಮಾವು; ರುಚಿ ನೋಡಿದ್ರಾ?
ಈ ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ, ಬಾಕ್ಸ್ಗಳ ಮುಖಾಂತರ ಮಾರಾಟ ಮಾಡಲಾಗುತ್ತದೆ. 2.5 ಕೆ.ಜಿ. ಮಾವಿನ ಹಣ್ಣಿಗೆ ರೂ. 250 ದರ ನಿಗದಿಯಾಗಿದೆ. ಹಣ್ಣು ಮತ್ತು ತರಕಾರಿ ಮಾರಾಟ ಮಾಡುವ ಸಂಚಾರಿ ವಾಹನಗಳಲ್ಲಿ ಪ್ರತಿ ವಾರ್ಡ್ಗಳಿಗೆ ಹೋಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ.
ಅಕಾಲಿಕ ಮಳೆ; ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳು
ಕೊಪ್ಪಳ ಮಾವು ಬ್ರಾಂಡ್
ಕೊಪ್ಪಳ ಮಾವು ಬ್ರಾಂಡ್ ಪ್ಯಾಕೆಟ್ಗಳನ್ನು ರೈತರಿಗೆ ನೀಡಲಾಗುತ್ತಿದ್ದು, ರೈತರು ಇದನ್ನು ಸದುಪಯೋಗ ಪಡಿಸಿಕೊಂಡು ಮಾವು ಮಾರಾಟ ಮಾಡಬಹುದಾಗಿದೆ. ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಮಾರ ಬಯಸುವ ರೈತರು ಅಥವಾ ಖರೀದಿ ಮಾಡುವವರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದಾಗಿದೆ.
ಒಂದು ಬಾಕ್ಸ್ ಬೆಲೆ ಎಷ್ಟು?
ಉಪ್ಪಿನ ಕಾಯಿಗಾಗಿ ಬಳಸುವ ಕುನಾಸ್/ ರುಮೇನಿಯಾ ತಳಿಯ ಮಾವಿನ ಕಾಯಿ ಪ್ರತಿ ಕೆ.ಜಿ. ಗೆ ರೂ. 30ರಂತೆ ಒಂದು ಬಾಕ್ಸ್ಗೆ ರೂ. 100 ರಂತೆ ಮಾರಾಟ ಮಾಡಲಾಗುತ್ತಿದೆ. ಮಾವಿನ ಹಣ್ಣಿನ ಸೀಜನ್ನಲ್ಲಿ ಮಾರಾಟಗಾರರು ತೋಟಗಾರಿಕಾ ಇಲಾಖೆ ಬಿಡುಗಡೆ ಮಾಡಿದ ಮಾವುಗಳನ್ನೇ ಖರೀದಿಸಿ ರೈತರಿಗೆ ನೆರವಾಗಬಹುದು.
ಮಾರಾಟಕ್ಕೆ ಚಾಲನೆ
'ಕೊಪ್ಪಳ ಮಾವು' ಮಾರಾಟದ ಸಂಚಾರಿ ವಾಹನಗಳಲ್ಲಿ ಇಡಲಾಗಿದ್ದ ಮಾವುಗಳನ್ನು ಸಂಸದ ಸಂಗಣ್ಣ ಕರಡಿ ವೀಕ್ಷಿಸಿದರು. ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುವ ಮೂಲಕ ಮಾವಿನ ಹಣ್ಣು ಮಾರಾಟಕ್ಕೆ ಚಾಲನೆಯನ್ನು ನೀಡಿದರು.
ಹಲವರ ಉಪಸ್ಥಿತಿ
ಕೊಪ್ಪಳ ಮಾವು ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಂಟಿ ಕೃಷಿ ನಿರ್ದೇಶಕಿ ಶಬಾನ್ ಎಂ. ಶೇಖ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.