ಕೃಷಿ ಕಾಯ್ದೆಗಳಿಗೂ ಮುನ್ನ ಅಭಿಪ್ರಾಯ ಸಂಗ್ರಹ: ಕೃಷಿ ಸಚಿವಾಲಯದ ಬಳಿ ಮಾಹಿತಿಯೇ ಇಲ್ಲ!
ನವದೆಹಲಿ, ಜನವರಿ 12: ಮೂರು ಕೃಷಿ ಸುಧಾರಣಾ ಕಾಯ್ದೆಗಳನ್ನು ರಚಿಸುವ ಮುನ್ನ ಶಾಸನಪೂರ್ವ ಸಮಾಲೋಚನೆಗಳನ್ನು ನಡೆಸಿರುವುದಕ್ಕೆ ಕೇಂದ್ರ ಕೃಷಿ ಸಚಿವಾಲಯದಿಂದ ಯಾವುದೇ ಪುರಾವೆಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಕೋರಲಾಗಿದ್ದ ಮಾಹಿತಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವಾಲಯ, ಕಾಯ್ದೆಗೆ ಮೊದಲು ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮಾಲೋಚಿಸಿದ ವಿವರ ತನ್ನ ಬಳಿ ಇಲ್ಲ ಎಂದು ಹೇಳಿದೆ.
ಆದರೆ ಮೂರು ಕೃಷಿ ಕಾಯ್ದೆಗಳನ್ನು ಸಿದ್ಧಪಡಿಸುವ ಮುನ್ನ ವ್ಯಾಪಕ ಸಲಹೆ ಸೂಚನೆಗಳನ್ನು ಪಡೆದು ಚರ್ಚೆ ನಡೆಸಲಾಗಿತ್ತು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅನೇಕ ಬಾರಿ ಹೇಳಿದ್ದರು.
ರೈತರ ಪ್ರತಿಭಟನೆ: ಟ್ರ್ಯಾಕ್ಟರ್ Rally ವಿರುದ್ಧ ಸುಪ್ರೀಂಕೋರ್ಟ್ಗೆ ಕೇಂದ್ರದ ಅರ್ಜಿ
ಜೂನ್ನಲ್ಲಿ ಕೃಷಿ ಸುಧಾರಣೆಗಾಗಿ ಕೇಂದ್ರ ಸರ್ಕಾರ ಮೂರು ಕೃಷಿ ಸುಗ್ರೀವಾಜ್ಞೆಗಳನ್ನು ಹೊರಡಿಸುವ ಮುನ್ನ ಸಂಬಂಧಿತ ಕ್ಷೇತ್ರದ ಪರಿಣತರ ಜತೆಗೆ ಸಮಾಲೋಚನೆ ನಡೆಸಿದ್ದರ ಕುರಿತು ಎಲ್ಲ ವಿವರಗಳನ್ನು ನೀಡುವಂತೆ 2020ರ ಡಿಸೆಂಬರ್ನಲ್ಲಿ ಆರ್ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಕೃಷಿ ಸಚಿವಾಲಯಕ್ಕೆ ಆರ್ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
'ನಮಗೆ ತಾಳ್ಮೆಯ ಪಾಠ ಮಾಡಬೇಡಿ': ಕೃಷಿ ಕಾಯ್ದೆ ಬಗ್ಗೆ 'ಸುಪ್ರೀಂ'ನ 5 ಪ್ರಮುಖ ಹೇಳಿಕೆಗಳು
ಕೃಷಿ ಕಾಯ್ದೆಗಳನ್ನು ರೂಪಿಸುವ ಮೊದಲು ನಡೆಸಲಾದ ಸಭೆಗಳ ದಿನಾಂಕ, ಹಾಜರಾದವರ ವಿವರ, ಕಾಯ್ದೆಗಳ ಕುರಿತು ಸಂಪರ್ಕಿಸಲಾದ ರೈತ ಸಂಘಟನೆಗಳು, ಪರಿಣತರು, ರಾಜ್ಯಗಳ ವಿವರಗಳ ಪಟ್ಟಿ, ಚರ್ಚಿಸಲಾದ ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಅವರು ಕೋರಿದ್ದರು. ಮುಂದೆ ಓದಿ.
ರಾಜ್ಯದೊಂದಿಗಿನ ಸಮಾಲೋಚನೆ ವಿವರ
ಮಸೂದೆ ರೂಪಿಸುವುದಕ್ಕೂ ಮುನ್ನ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವುಗಳು ನೀಡಿರುವ ಹೇಳಿಕೆ ಮತ್ತು ಸಂವಹನದ ವಿವರಗಳ ಪ್ರತಿಯನ್ನು ನೀಡುವಂತೆ ಅಂಜಲಿ ಭಾರದ್ವಾಜ್ ಅವರು ಕೇಳಿದ್ದರು.
ಮಾಹಿತಿ ಪ್ರಕಟಿಸಿದ್ದರ ವಿವರ ನೀಡಿ
ಮತ್ತೊಂದು ಪ್ರತ್ಯೇಕ ಆರ್ಟಿಐ ಅರ್ಜಿ ಸಲ್ಲಿಸಿದ್ದ ಅವರು, ಕೇಂದ್ರ ಮಾಹಿತಿ ಆಯೋಗ ಮತ್ತು ಕೇಂದ್ರ ಸರ್ಕಾರದ್ದೇ ಆದ ಶಾಸನ ಪೂರ್ವ ಸಮಾಲೋಚನಾ ನೀತಿ ಅಡಿಯಲ್ಲಿನ ನಿಯಮಗಳ ಪ್ರಕಾರ ಕರಡು ಮಸೂದೆಯನ್ನು ಸಾರ್ವಜನಿಕ ವೇದಿಕೆಯಲ್ಲಿ 30 ದಿನಗಳ ಕಾಲ ಪ್ರಕಟಿಸಿದ್ದರ ವಿವರಗಳನ್ನು ನೀಡುವಂತೆ ಕೂಡ ಕೋರಿದ್ದರು.
ಕೃಷಿ ಕಾಯ್ದೆ: ರೈತರನ್ನು ಪ್ರತಿನಿಧಿಸುವ ಸಮಿತಿ ಸದಸ್ಯರ ಕಿರು ಪರಿಚಯ
ಹಲವು ಇಲಾಖೆಗಳ ಮಧ್ಯೆ ಅರ್ಜಿ ವರ್ಗಾವಣೆ
ಈ ಮನವಿಗಳನ್ನು ಸಚಿವಾಲಯದ ಹಲವು ಇಲಾಖೆಗಳ ನಡುವೆ ವರ್ಗಾಯಿಸಲಾಗಿದೆ. ಇಬ್ಬರು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಈ ಮನವಿಯನ್ನು ಮುಂದಕ್ಕೆ ಕಳುಹಿಸಿದ್ದರು ಮತ್ತು ವರ್ಗಾವಣೆ ಮಾಡಿದ್ದರು. ಇನ್ನು ಇಬ್ಬರು ಈ ಮನವಿಯನ್ನು ವಜಾಗೊಳಿಸಿದ್ದರು. 'ಈ ಸಿಪಿಐಒ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಹೊಂದಿಲ್ಲ' ಎಂದು ಸಚಿವಾಲಯದ ಮಾರುಕಟ್ಟೆ ಘಟಕ ಹೇಳಿತ್ತು.
ಮಾಹಿತಿ ಇಲ್ಲ ಎಂಬ ಉತ್ತರ
ಕೃಷಿ ಮಾರುಕಟ್ಟೆ ವಿಭಾಗೀಯ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುವ ಮತ್ತೊಂದು ವಿಭಾಗದಲ್ಲಿ ಅಂಜಲಿ ಅವರು ಕೇಳಿರುವ ವರ್ಗದಲ್ಲಿನ ಮಾಹಿತಿಯು ತನ್ನ ಬಳಿ ಇಲ್ಲ ಎಂದು ಉತ್ತರಿಸಲಾಗಿದೆ. ಅರ್ಜಿಗಳನ್ನು ವಜಾಗೊಳಿಸಿ ಪ್ರತಿಕ್ರಿಯೆಗಳನ್ನು ರವಾನಿಸಲಾಗಿದೆ.