ರೈತರ ಪ್ರತಿಭಟನೆ, ಅಶ್ರುವಾಯು ಪ್ರಯೋಗ, ದೆಹಲಿ ಗಡಿಯಲ್ಲಿ ಸ್ಥಿತಿ ಉದ್ವಿಗ್ನ
ನವದೆಹಲಿ, ನವೆಂಬರ್ 27: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ಶುಕ್ರವಾರ ಕೂಡ ಮುಂದುವರಿದಿದ್ದು ದೆಹಲಿ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ರೊಹ್ಟಕ್-ಜ್ಹಜ್ಜರ್ ಗಡಿಯಲ್ಲಿ ಇಂದು ಬೆಳಗ್ಗೆಯೇ ರೈತರು ಬಂದಿದ್ದಾರೆ. ದೆಹಲಿ-ಗುರುಗ್ರಾಮ್ ಗಡಿಯಲ್ಲಿ ಸಿಐಎಸ್ಎಫ್ ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
ಸಾವಿರಾರು ಮಂದಿ ಪಂಜಾಬ್ ನ ರೈತರು ಪಾಣಿಪತ್ ಟೋಲ್ ಪ್ಲಾಜಾ ಮತ್ತು ಕರ್ನಲ್ ನಲ್ಲಿ ಜಮಾಯಿಸಿರುವುದರಿಂದ ದೆಹಲಿ ಪೊಲೀಸ್ ಸಿಬ್ಬಂದಿಯ ನಿಯೋಜನೆಯನ್ನು ವಿಸ್ತರಿಸಲಾಗಿದೆ.
ರೈತರ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ದೇವೇಗೌಡ ಕಿಡಿ
ಮರಳು ತುಂಬಿದ ಟ್ರಕ್ಕ್ ಗಳು ಮತ್ತು ಜಲ ಫಿರಂಗಿಗಳು ಮತ್ತು ಸಿಂಘು ಗಡಿಯಲ್ಲಿ ಬೇಲಿಗಳಿರುವ ಬ್ಯಾರಿಕೇಡ್ ಗಳನ್ನು ಪ್ರತಿಭಟನಾಕಾರರು ನಗರ ಪ್ರವೇಶಿಸದಂತೆ ಹಾಕಲಾಗಿದೆ.
ಪ್ರತಿಭಟನಾಕಾರರನ್ನು ದೆಹಲಿ ಪ್ರವೇಶಿಸಲು ಬಿಡುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ಹರ್ಯಾಣ-ದೆಹಲಿ ಗಡಿ ಭಾಗದಲ್ಲಿ ಭದ್ರತೆ
ರೈತರ ಪ್ರತಿಭಟನೆ ಮಧ್ಯೆ ಹರ್ಯಾಣ-ದೆಹಲಿ ಗಡಿಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಿಂಘು ಗಡಿಯತ್ತ ವಾಹನಗಳು ಸಂಚರಿಸಲು ಪೊಲೀಸರು ಬಿಡುತ್ತಿಲ್ಲ. ಅಂತರಾಜ್ಯ ವಾಹನಗಳು ಪೂರ್ವ ಮತ್ತು ಪಶ್ಚಿಮ ಫೆರಿಫೆರಲ್ ಎಕ್ಸ್ ಪ್ರೆಸ್ ವೇ ಮೂಲಕ ಸಂಚಾರ ನಡೆಸಬಹುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ರೈತರತ್ತ ಅಶ್ರುವಾಯು ಸಿಡಿಸಿದ ಪೊಲೀಸರು
ಇಂದು ಕೂಡ ಹರ್ಯಾಣ ದೆಹಲಿಯ ಗಡಿಯಲ್ಲಿ ಜಮಾಯಿಸಿದ ಪ್ರತಿಭಟನಾ ನಿರತ ರೈತರತ್ತ ಪೊಲೀಸರು ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಲು ನೋಡುತ್ತಿದ್ದಾರೆ.
ಪೊಲೀಸರಿಂದ ವಾಹನ ತಪಾಸಣೆ
ಪಂಜಾಬ್ ನ ರೈತರ ಗುಂಪು ಈಗ ಬದದ್ದೂರ್ ಘರ್ ಬಳಿ ತಲುಪಿದ್ದು ದೆಹಲಿಯತ್ತ ಮುಖಮಾಡಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ-ಗುರುಗ್ರಾಮ್ ಗಡಿಭಾಗದಲ್ಲಿ ಪೊಲೀಸರು ಎಲ್ಲಾ ಪ್ರಯಾಣಿಕರ ವಾಹನಗಳನ್ನು ತಪಾಸಣೆ ಮಾಡಿಯೇ ಮುಂದೆ ಕಳುಹಿಸುತ್ತಿರುವುದರಿಂದ ಸಂಚಾರ ವಾಹನ ದಟ್ಟಣೆ ಉಂಟಾಗಿದೆ.
ಅಡೆತಡೆ ಬೇಧಿಸಿ ಪ್ರತಿಭಟನೆ
ಆದರೆ, ಈ ಎಲ್ಲಾ ಅಡೆತಡೆಗಳನ್ನು ಭೇದಿಸಿ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಹರ್ಯಾಣದ ಮೂಲಕ ದೆಹಲಿಯೆಡೆಗೆ ತಮ್ಮ ಯಾತ್ರೆಯನ್ನು ಮುಂದುವರೆಸಿದ್ದಾರೆ.