ಮಳೆ ಕೊರತೆ; ಉತ್ತರ ಭಾರತದ ರಾಜ್ಯಗಳ ಕೃಷಿಗೆ ಎರಡು ವಾರ ನಿರ್ಣಾಯಕ
ನವದೆಹಲಿ, ಜೂನ್ 23: ದೇಶದ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಹೆಕ್ಟೇರ್ ಜಮೀನಿನಲ್ಲಿ ಭತ್ತ, ಸೋಯಾಬಿನ್, ಹತ್ತಿ ಸೇರಿದಂತೆ ವಿವಿಧ ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯಲಾಗಿದೆ. ಈ ಎಲ್ಲ ಬೆಳೆಗಳಿಗೆ ಮಳೆ ಅಗತ್ಯವಾಗಿದ್ದು, ಮುಂದಿನ ಎರಡು ವಾರದಲ್ಲಿ ಬರಲಿರುವ ಮಳೆ ನಿರ್ಣಾಯಕವಾಗಿದೆ.
ದೇಶದಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿರುವುದು ರೈತರಿಗೆ ವರದಾನವಾಗಿದೆ. ಮಧ್ಯಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಗುಜರಾತ್ ಹಾಗೂ ಇನ್ನಿತರ ಭಾಗದಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಈ ರಾಜ್ಯಗಳಲ್ಲಿ ಜೂನ್ 10ರವರೆಗೆ ಭತ್ತ, ಸೋಯಾಬಿನ್, ಹತ್ತಿ, ಮೆಕ್ಕೆ ಜೋಳ ಇನ್ನಿತರ ಬೆಳೆ ಒಳಗೊಂಡ ಮುಂಗಾರು ಹಂಗಾಮಿನ ಬೆಳೆಗಳನ್ನು 79.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಆದರೆ ಮುಂಗಾರಿನ ಹಂಗಾಮಿನ ಕೃಷಿ ಚುಟುವಟಿಕೆಗಳು ಎಲ್ಲೆಡೆ ಸಂಪೂರ್ಣವಾಗಿ ಮುಗಿದಿಲ್ಲ. ಕೆಲವು ಪ್ರದೇಶಗಳಲ್ಲಿ ಬಿತ್ತನೆ ಬಾಕಿ ಇದೆ. ಕೃಷಿ ಚಟುವಟಿಕೆ ಆರಂಭಿಸಲು ಹಾಗೂ ಈಗಾಗಲೇ ಬೆಳೆಯಲಾದ ಸಣ್ಣ ಪೈರಿಗೆ ಮಳೆಯ ಅಗತ್ಯತೆ ಇದೆ.
ಮುಂದಿನ 15ದಿನದ ಮಳೆ ನಿರ್ಣಾಯಕ
ಭಾರತೀಯ ಹವಾಮಾನ ಇಲಾಖೆ ಮುಂದಿನ ಐದು ದಿನಗಳಲ್ಲಿ ವಾಯುವ್ಯ ಭಾರತ, ಮಧ್ಯಪ್ರದೇಶ ಭಾಗಗಳಲ್ಲಿ ತಾಪಮಾನ ಹೆಚ್ಚಾಗುವ ಸಂಭವವಿದೆ ಎಂದು ಹೇಳಿದೆ. ಇದರಿಂದ ಈ ಭಾಗದಲ್ಲಿ ಸದ್ಯಕ್ಕೆ ಮಳೆ ಮುನ್ಸೂಚನೆ ಇಲ್ಲ. ಮುಂದಿನ ಎರಡು ವಾರದಲ್ಲಿ ವಾತಾವರಣದಲ್ಲಿ ಯಾವುದೇ ಬದಲಾವಣೆಗಳು ಘಟಿಸುವುದು ಕಡಿಮೆ. ಇದು ಮಳೆ ಆಧಾರಿತ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ. ಹೀಗಿದ್ದರು ಭರವಸೆ ಕಳೆದುಕೊಳ್ಳದ ರೈತರು ತಕ್ಕಮಟ್ಟಿನ ಮಳೆ ಬೀಳಬಹುದು ಎಂದು ಕಾಯುತ್ತಿದ್ದಾರೆ. ಒಂದು ವೇಳೆ ನಿರೀಕ್ಷಿತ ಮಳೆ ಬಾರದಿದ್ದರೆ ಬಿತ್ತಿರುವ ಬೆಳೆಗಳು ಒಣಗುವ ಇಲ್ಲವೇ ಹಾಳಾಗುವ ಸ್ಥಿತಿ ಎದುರಾಗಬಹುದು. ಈ ಕಾರಣಕ್ಕೆ ಮುಂದಿನ ಎರಡು ವಾರದಲ್ಲಿ ವಾತಾವರಣದಲ್ಲಾಗುವ ಮಳೆ ಕೃಷಿಯ ಪಾಲಿಗೆ ನಿರ್ಣಾಯಕ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿರೀಕ್ಷಿತ ಮಳೆ ಮೇಲೆ ಕೃಷಿ ಅವಲಂಬನೆ
ಪ್ರಸ್ತುತದಲ್ಲಿ ಬಿದ್ದ ಮಳೆಯು ಸೋಯಾಬೀನ್ ಬಿತ್ತನೆ ಮಾಡಲು ಯೋಗ್ಯವಾಗಿದೆ. ಮಧ್ಯಪ್ರದೇಶದ ಮಾಲ್ವಾದಲ್ಲಿ ಕಡಿಮೆ ಮಳೆಯಾಗಿದ್ದು, ಇಲ್ಲಿ ಸದ್ಯಕ್ಕೆ ಯಾವ ಬೆಳೆಗಳನ್ನು ಬಿತ್ತಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆ, ಇನ್ನಿತರ ಕೃಷಿ ಚಟುವಟಿಕೆಗಳು ಮಳೆಯ ಮೇಲೆ ಆಧಾರಿತವಾಗಿವೆ ಎಂದು ಸೋಯಾಬಿನ್ ಪ್ರೊಸೆಸರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಎಸ್ಒಪಿಎ) ಕಾರ್ಯ ನಿರ್ವಾಹಕ ನಿರ್ದೇಶಕ ಡಿ. ಎನ್. ಪಾಠಕ್ ಮಾಹಿತಿ ನೀಡಿದ್ದಾರೆ.
ಶೇ.15ರಷ್ಟು ಅಧಿಕ ಹತ್ತಿ ಬೆಳೆ ನಿರೀಕ್ಷೆ
ಕೃಷಿ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ 127.20 ಲಕ್ಷ ಟನ್ ಗಳಷ್ಟು ಸೋಯಾಬಿನ್ ಉತ್ಪಾದಿಸಲಾಗಿತ್ತು. ಈ ವರ್ಷವು ಸೋಯಾಬಿನ್ನ ಉತ್ತಮ ಇಳುವರಿಯ ನಿರೀಕ್ಷೆ ಇದೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹತ್ತಿಗೆ ಉತ್ತಮ ಬೇಡಿಕೆ ಇದ್ದು, ಬೇಡಿಕೆ ತಕ್ಕಂತೆ ಬೆಲೆಯು ಉತ್ತಮವಾಗಿದೆ. ಈ ಹಂಗಾಮಿನಲ್ಲಿ ಗುಜರಾತಿನಲ್ಲಿ ಕಳೆದ ವರ್ಷಕ್ಕಿಂತಲೂ ಶೇ. 15ರಷ್ಟು ಅಧಿಕ ಹತ್ತಿ ಉತ್ಪಾದನೆ ಆಗುವ ಸಾಧ್ಯತೆ ಇದೆ ಎಂದು ಕಾಟನ್ ಉದ್ಯಮದ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭತ್ತ ಬಿತ್ತನೆಗೆ ಸಜ್ಜಾದ ರೈತರು
ಮೂಲಗಳ ಅಂಕಿಅಂಶ ಗಮನಿಸಿದರೆ ಭಾರತ ಕಳೆದ ವರ್ಷ 107.04ಮಿಲಿಯನ್ ಟನ್ ನಷ್ಟು ಅಕ್ಕಿ ಉತ್ಪಾದಿಸಿತ್ತು. ಹೆಚ್ಚು ಅಕ್ಕಿ ಬೆಳೆಯವ ಪಶ್ಚಿಮ ಬಂಗಾಳದಲ್ಲಿ ವಿವಿಧ ತಳಿಯ ಭತ್ತ (ಅಕ್ಕಿ) ಬೆಳೆಯಲಾಗುತ್ತದೆ. ಈ ಭಾಗದ ಕೆಲವೆಡೆ ಕಳೆದ 3-4 ದಿನದಿಂದ ಮುಂಗಾರು ಉತ್ತಮವಾಗಿದೆ. ಇದರಿಂದ ಪಶ್ಚಿಮ ಬಂಗಾಳದಲ್ಲಿ ಬಿತ್ತನೆಗೆ ಹದವಾಗುವಷ್ಟು ವಾತಾವರಣ ನಿರ್ಮಾಣವಾಗಿದೆ. ರೈತರು ಬಾಸುಮತಿ ಹಾಗೂ ಇನ್ನಿತರ ತಳಿಯ ಭತ್ತ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಪ್ರದೇಶಗಳಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಮಳೆ ಇನ್ನಷ್ಟು ಹೆಚ್ಚಾಗಲಿದೆ ಇದೆ ಎಂದು ಬರ್ದಾನ್ ರೈಸ್ ಮಿಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸುಬ್ರತಾ ಮಾಂಡೋಲ್ ಅವರು ತಿಳಿಸಿದ್ದಾರೆ.
ಒಟ್ಟಾರೆ ಹವಾಮಾನ ಇಲಾಖೆ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಅಗತ್ಯದಷ್ಟು ಮಳೆ ದಾಖಲಾಗಿದೆ. ವಾಯುವ್ಯ ಭಾರತ, ಮಧ್ಯಪ್ರದೇಶ ಸೇರಿದಂತೆ ಕೆಲವು ಕಡೆಗಳಲ್ಲಿ ತಾಪಮಾನ 2-4ರಷ್ಟು ಹೆಚ್ಚಾಗಲಿದೆ. ಆ ಮೂಲಕ ಮಳೆ ಕೊರತೆ ಉಂಟಾಗಬಹುದು ಎಂದು ತಿಳಿಸಿದೆ.
Recommended Video