ಮತ್ತಷ್ಟು ಟ್ರೆಂಡ್ ಆಗುತ್ತಿದೆ ಜಿಯೋ ಸಿಮ್ ಬಹಿಷ್ಕಾರ ಅಭಿಯಾನ
ಬೆಂಗಳೂರು, ಡಿಸೆಂಬರ್ 12: ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದ್ದು, ಪ್ರತಿಭಟನೆ ವಿವಿಧ ಸ್ವರೂಪಗಳನ್ನು ಪಡೆದುಕೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಅದರ ಮೊದಲ ಹೆಜ್ಜೆಯಾಗಿ ರಿಲಯನ್ಸ್ ಜಿಯೋ ಸಿಮ್ಗಳನ್ನು ಬಹಿಷ್ಕರಿಸುವ ಅಭಿಯಾನ ನಡೆಯುತ್ತಿದೆ. ಜತೆಗೆ ಅಂಬಾನಿ ಮತ್ತು ಅದಾನಿ ಕಂಪೆನಿಗಳ ಎಲ್ಲ ಉತ್ಪನ್ನಗಳನ್ನು ಬಹಿಷ್ಕರಿಸುವಂತೆಯೂ ಕರೆ ನೀಡಲಾಗುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ಬಹಿಷ್ಕಾರದ ಚರ್ಚೆ ಜೋರಾಗಿ ನಡೆಯುತ್ತಿದೆ.
ಮೋದಿ ಸರ್ಕಾರವು ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಅಂಬಾನಿ ಮತ್ತು ಅದಾನಿಗಳಿಗೆ ನೆರವಾಗಲು ಹೊರಟಿದೆ. ಕೃಷಿ ಮಾರುಕಟ್ಟೆಗಳು ಮತ್ತು ರೈತರ ಬೆಳೆಗಳು ಕ್ರಮೇಣವಾಗಿ ಖಾಸಗಿ ಉದ್ದಿಮೆದಾರರ ಪಾಲಾಗಲಿವೆ. ಭವಿಷ್ಯದಲ್ಲಿ ರೈತರು ಬೆಳೆದ ಬೆಳೆಗಳಿಗೆ ಖಾಸಗಿ ಒಡೆತನದ ಉದ್ದಿಮೆಗಳೇ ಬೆಲೆ ನಿರ್ಧಾರ ಮಾಡಲಿವೆ. ಅವರು ನಿರ್ಧರಿಸಿದ ಬೆಲೆಗೆ ಬೆಳೆಗಳನ್ನು ಮಾರುವ ಸ್ಥಿತಿ ಎದುರಾಗುತ್ತದೆ. ಆಗ ರೈತರು ಮತ್ತು ಖರೀದಿದಾರರ ನಡುವೆ ಸರ್ಕಾರವೇ ಇರುವುದಿಲ್ಲ. ಸರ್ಕಾರದಿಂದ ಯಾವುದೇ ನೆರವು ಕೂಡ ರೈತರಿಗೆ ಸಿಗುವುದಿಲ್ಲ. ಇದರಿಂದ ರೈತರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.
17ನೇ ದಿನಕ್ಕೆ ರೈತರ ಪ್ರತಿಭಟನೆ; ಗೃಹ ಸಚಿವ ಅಮಿತ್ ಶಾ ಸಭೆ
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದೇ ಅಂದಾನಿ, ಅಂಬಾನಿಗಳಂತಹ ಉದ್ಯಮಿಗಳು. ಹೀಗಾಗಿ ತಮಗೆ ಬೇಕಾದಂತೆ ಕಾನೂನು ರೂಪಿಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ವಲಯದ ಹಸ್ತಕ್ಷೇಪ ಹೆಚ್ಚಾಗುವ ಮೊದಲು ಅದಕ್ಕೆ ಕಡಿವಾಣ ಹಾಕಬೇಕು. ಅದಕ್ಕೆ ಸರ್ಕಾರಕ್ಕೆ ಹಾಗೂ ಉದ್ಯಮಗಳಿಗೆ ಪಾಠ ಕಲಿಸಲು ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಕರೆ ನೀಡಿದ್ದಾರೆ. ಮುಂದೆ ಓದಿ.
ಕಾಯ್ದೆಗಳಿಂದ ಉದ್ಯಮಿಗಳಿಗೆ ಲಾಭ
ಉದ್ಯಮಿಗಳಿಗೆ ನೆರವಾಗುವ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಲು ಮೊದಲು ಉದ್ಯಮಿಗಳ ಕೈಗಾರಿಕೆಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಕರೆ ನೀಡಲಾಗಿದೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯನಿಕೇಷನ್ನ ಜಿಯೋ ಸಿಮ್ಗಳ ಬಳಕೆಯನ್ನು ಕೈಬಿಡುವ ಅಭಿಯಾನ ನಡೆಯುತ್ತಿದ್ದು, ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
#ಬಾಯ್ಕಾಟ್ ಅಂದಾನಿ ಅಂಬಾನಿ
ದೂರಸಂಪರ್ಕ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವತ್ತ ಸಾಗುತ್ತಿರುವ ಜಿಯೋ ಮೊಬೈಲ್ ನೆಟ್ವರ್ಕ್ ಅನ್ನು ತ್ಯಜಿಸುವ ಮೂಲಕ ಅಂಬಾನಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಕರೆ ನೀಡಲಾಗಿದೆ. ಇದಕ್ಕೆ ವಿವಿಧ ವಲಯಗಳ ಜನರೂ ದನಿಗೂಡಿಸಿದ್ದಾರೆ. ಬಾಯ್ಕಾಟ್ ಜಿಯೋ ಮತ್ತು ಬಾಯ್ಕಾಟ್ ಅಂದಾನಿ ಅಂಬಾನಿ ಎಂಬ ಹ್ಯಾಷ್ಟ್ಯಾಗ್ಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿವೆ.
ಎಡಪಂಥೀಯರು, ಮಾವೋವಾದಿಗಳಿಂದ ರೈತರ ಪ್ರತಿಭಟನೆ ಮೇಲೆ ನಿಯಂತ್ರಣ ಹೊಂದಲು ಯತ್ನ: ಸರ್ಕಾರ
ಜಿಯೋದ ಎಲ್ಲ ಸೇವೆಗಳಿಗೂ ಬಹಿಷ್ಕಾರ
ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು ಮುಂತಾದವರು ತಾವು ಇನ್ನು ಮುಂದೆ ರಿಲಯನ್ಸ್ ಜಿಯೋ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಜಿಯೋ ಬಳಸದಂತೆ ಇತರರಿಗೂ ಮನವಿ ಮಾಡುತ್ತಿದ್ದಾರೆ. ಜಿಯೋದಿಂದ ಬೇರೆ ನೆಟ್ವರ್ಕ್ಗೆ 'ಪೋರ್ಟ್' ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಜಿಯೋದ ಫೈಬರ್ ಸಂಪರ್ಕ, ವೈಫೈಗಳನ್ನು ತ್ಯಜಿಸುವುದಾಗಿ ತಿಳಿಸಿದ್ದಾರೆ. ರಿಲಯನ್ಸ್ ಫ್ರೆಶ್ನಂತಹ ಅಂಬಾನಿ ಒಡೆತನದ ಮಾರುಕಟ್ಟೆಗಳು, ಅವರ ಉತ್ಪನ್ನಗಳನ್ನು ಖರೀದಿ ಮಾಡುವುದಿಲ್ಲ ಎಂದೂ ಶಪಥ ಮಾಡುತ್ತಿದ್ದಾರೆ.
ರೈತರ ಪ್ರತಿಭಟನೆಗೆ ಬಿಜೆಪಿ ಪ್ರತಿತಂತ್ರ: ಕಾಯ್ದೆಗಳ ಬಗ್ಗೆ ವ್ಯಾಪಕ ಪ್ರಚಾರ
ಅದಾನಿ ಸಮೂಹಕ್ಕೂ ತಟ್ಟಿದ ಬಿಸಿ
ಇನ್ನೊಂದೆಡೆ ಈ ಪ್ರತಿಭಟನೆ ಅದಾನಿ ಸಮೂಹಕ್ಕೂ ತಟ್ಟಿದೆ. ಆಹಾರ ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಉತ್ಪನ್ನಗಳಿದ್ದು, ಅವು ಯಾವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪಟ್ಟಿ ನೀಡಲಾಗುತ್ತಿದೆ. ಜತೆಗೆ ದೇಶಿ ಮಟ್ಟದ ಸಣ್ಣಪುಟ್ಟ ಕಂಪೆನಿಗಳ ಉತ್ಪನ್ನಗಳನ್ನು ಖರೀದಿಸುವಂತೆ ಕರೆ ನೀಡಲಾಗುತ್ತಿದೆ. ತಾನು ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸುವುದೂ ಇಲ್ಲ, ಅವುಗಳ ಬೆಲೆಯನ್ನೂ ನಿರ್ಧರಿಸುವುದಿಲ್ಲ. ಭಾರತೀಯ ಆಹಾರ ನಿಗಮಕ್ಕೆ (ಎಫ್ಸಿಐ) ಆಹಾರ ಉತ್ಪನ್ನಗಳನ್ನು ಶೇಖರಿಸುವ ಕಾರ್ಯದಲ್ಲಿ ಮಾತ್ರ ನೆರವಾಗುತ್ತಿದ್ದೇವೆ ಎಂದು ಅದಾನಿ ಸಮೂಹ ಸ್ಪಷ್ಟೀಕರಣ ನೀಡಿದೆ.
ಎರಡು ತಿಂಗಳ ಹಿಂದೆಯೇ ಶುರುವಾಗಿತ್ತು
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಜಿಯೋ ಸಿಮ್ಗಳನ್ನು ತಿರಸ್ಕರಿಸುವ ಅಭಿಯಾನವನ್ನು ಅಕ್ಟೋಬರ್ ತಿಂಗಳಲ್ಲಿಯೇ ಆರಂಭಿಸಿದ್ದರು. ಆದರೆ ಆಗ ಅದು ಹೆಚ್ಚು ಸುದ್ದಿಯಾಗಿರಲಿಲ್ಲ. ಪಂಜಾಬ್ನ ಅಮೃತಸರದಲ್ಲಿ 'ಸಿಮ್ ಸತ್ಯಾಗ್ರಹ'ವನ್ನು ಆರಂಭಿಸಿ ಜಿಯೋ ಸಿಮ್ಗಳನ್ನು ಮುರಿದು ಹಾಕಲಾಗಿತ್ತು. ರಿಲಯನ್ಸ್ ಪೆಟ್ರೋಲ್ ಬಂಕ್ಗಳಿಗೆ ತೆರಳದಂತೆ, ಇತರೆ ಉತ್ಪನ್ನಗಳನ್ನು ಖರೀದಿಸದಂತೆ ಕರೆ ನೀಡಲಾಗಿತ್ತು.
ಬಹಿಷ್ಕಾರ ಅಭಿಯಾನಕ್ಕೆ ವ್ಯಂಗ್ಯ
ಜಿಯೋ ತಿರಸ್ಕರಿಸುವ ಬಹಿಷ್ಕಾರ ಅಭಿಯಾನಕ್ಕೆ ಬಿಜೆಪಿ ಬೆಂಬಲಿಗರಿಂದ ಟೀಕೆಯೂ ಕೇಳಿಬಂದಿದೆ. ಇದಕ್ಕೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಇಷ್ಟು ದಿನ ಜಿಯೋ ಸಿಮ್ ಬಳಸುತ್ತಿದ್ದವರಿಗೆ ಅದು ಅಂಬಾನಿಗಳ ಕಾರ್ಪೊರೇಟ್ ಸಂಸ್ಥೆಯದ್ದು ಎನ್ನುವುದು ತಿಳಿದಿರಲಿಲ್ಲವೇ? ಉಚಿತವಾಗಿ ಸೌಲಭ್ಯ ನೀಡುವಾಗ ಎಲ್ಲರೂ ಮುಗಿಬಿದ್ದು ಅದನ್ನು ಬಳಸಿದ್ದರು ಎಂದು ಲೇವಡಿ ಮಾಡುತ್ತಿದ್ದಾರೆ. ಜಿಯೋದಿಂದ ಪೋರ್ಟ್ ಆಗುವವರು ಯಾವ ನೆಟ್ವರ್ಕ್ಗೆ ಹೋಗುತ್ತಿದ್ದಾರೆ? ಬಿಎಸ್ಎನ್ಎಲ್ಗೆ ಹೋಗುವುದಾದರೆ ಅದರಿಂದ ಸರ್ಕಾರಕ್ಕೆ ಮತ್ತಷ್ಟು ಒಳಿತಾಗುತ್ತದೆ ಎನ್ನುತ್ತಿದ್ದಾರೆ. ಅಲ್ಲದೆ, ಜಿಯೋ ಸಿಮ್ ತಿರಸ್ಕರಿಸುವುದಕ್ಕೂ ರೈತರ ಬೆಳೆಗೂ ಎಲ್ಲಿಂದ ಎಲ್ಲಿಗೆ ಸಂಬಂಧ ಎಂದು ಪ್ರಶ್ನಿಸುತ್ತಿದ್ದಾರೆ.
Recommended Video