ರಾಷ್ಟ್ರೀಯ ಕ್ಷೀರ ದಿನ; ಗ್ರಾಮೀಣ ಭಾರತದ ಸ್ವಾವಲಂಬನಾ ಹಾದಿಯ ಸ್ಮರಣೆ...
ನವೆಂಬರ್ 26, ಭಾರತದ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಸ್ಮರಣೀಯ ದಿನ. ರಾಷ್ಟ್ರ ಮಟ್ಟದಲ್ಲಿ ಕ್ಷೀರ ಕ್ರಾಂತಿಗೆ ನಾಂದಿ ಹಾಡಿದ ಡಾ.ವರ್ಗೀಸ್ ಕುರಿಯನ್ ಅವರ ಜನ್ಮದಿನವನ್ನು ಸ್ಮರಣೀಯವಾಗಿಸಲು ನ.26ರನ್ನು ರಾಷ್ಟ್ರೀಯ ಕ್ಷೀರ ದಿನವನ್ನಾಗಿ ಆಚರಿಸಲಾಗುತ್ತದೆ.
ಕ್ಷೀರ ಕ್ರಾಂತಿಯ ಪಿತಾಮಹ ಎಂದೇ ಕರೆಸಿಕೊಂಡಿರುವ ಕುರಿಯನ್ ಅವರು ಭಾರತದಲ್ಲಿ ಕ್ಷೀರೋದ್ಯಮಕ್ಕೆ ನೀಡಿರುವ ಕೊಡುಗೆಯನ್ನು ಮೆಲುಕು ಹಾಕಲು ಈ ದಿನವನ್ನು ಮುಡಿಪಾಗಿರಿಸಲಾಗಿದೆ. ರಾಷ್ಟ್ರೀಯ ಕ್ಷೀರ ದಿನ, ಈ ದಿನದ ಇತಿಹಾಸ, ಪ್ರಾಮುಖ್ಯದ ಕುರಿತು ಈ ಲೇಖನ ವಿವರಿಸಿದೆ. ಮುಂದೆ ಓದಿ...
ದೇಶದ ಸಬಲತೆ, ಸ್ವಾವಲಂಬನೆಗೆ ಕುರಿಯನ್ ಕೊಡುಗೆ
1921ರಲ್ಲಿ ಕೇರಳದ ಕೋಯಿಕೋಡ್ ನಲ್ಲಿ ಜನಿಸಿದ ಕುರಿಯನ್ ಅವರು ಗ್ರಾಮೀಣ ಭಾಗದ ಜನರಿಗೆ ಹೈನುಗಾರಿಕೆ, ಕ್ಷೀರೋದ್ಯಮದಲ್ಲಿ ಹೊಸ ದಾರಿ ತೋರಿಸಿಕೊಟ್ಟವರು. ಮದರಾಸ್ ವಿವಿಯಿಂದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವಿ, ಅಮೆರಿಕದ ಮಿಚಿಗನ್ ಸ್ಟೇಟ್ ಯುನಿವರ್ಸಿಟಿಯಲ್ಲಿ ಲೋಹ ವಿಜ್ಞಾನ ಮತ್ತು ನ್ಯೂಕ್ಲಿಯರ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕ್ಷೀರ ಕ್ರಾಂತಿಯ ಮೂಲಕ ದೇಶ ಸಬಲತೆ, ಸ್ವಾವಲಂಬನೆಗೆ ನೆರವಾಗುವಲ್ಲಿ ವರ್ಗೀಸ್ ಕುರಿಯನ್ ಅವರ ಕೊಡುಗೆ ಅಪಾರ. ಅವರ ಕೊಡುಗೆಯ ಕುರಿತು ಸ್ಮರಿಸಲೆಂದೇ ಈ ದಿನ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಕ್ಷೀರಕ್ರಾಂತಿ ಹರಿಕಾರ ಕುರಿಯನ್ ಗೆ ಗೂಗಲ್ ನಮನ
ರಾಷ್ಟ್ರೀಯ ಕ್ಷೀರ ದಿನದ ಆಚರಣೆ...
ರಾಷ್ಟ್ರೀಯ ಕ್ಷೀರ ದಿನ ಹಾಗೂ ವಿಶ್ವ ಹಾಲು ದಿನ ಈ ಎರಡೂ ದಿನಗಳ ಕುರಿತು ಗೊಂದಲವಿದೆ. ಆದರೆ ಇವೆರಡೂ ಬೇರೆ ಬೇರೆಯಾಗಿದೆ. ಭಾರತೀಯ ಡೈರಿ ಸಂಘ (indian dairy association) 2014ರಲ್ಲಿ ಮೊದಲ ಬಾರಿ ರಾಷ್ಟ್ರೀಯ ಕ್ಷೀರ ದಿನವನ್ನು ಆಚರಿಸಲು ಮುಂದಾಯಿತು. 2014ರ ನವೆಂಬರ್ 26ರಂದು ಮೊದಲ ಬಾರಿ ರಾಷ್ಟ್ರೀಯ ಕ್ಷೀರ ದಿನ ಆಚರಿಸಿದ್ದು, 22 ರಾಜ್ಯಗಳ ಹಾಲು ಉತ್ಪಾದಕರು ಇದರಲ್ಲಿ ಭಾಗವಹಿಸಿದ್ದರು.
ಹೈನು ಉದ್ಯಮಕ್ಕೆ ಶ್ರಮಿಸಿದ ಕುರಿಯನ್
ದೇಶವು ಅಧಿಕ ಹಾಲು ಉತ್ಪಾದಕ ಕೇಂದ್ರಗಳನ್ನು ಹೊಂದಿ, ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದೊಂದಿಗೆ ಕುರಿಯನ್ ಅವರು ಅಮುಲ್ ಮಾದರಿ ಹೈನುಗಾರಿಕೆ, ಹೊನಲು ಕಾರ್ಯಾಚರಣೆ ಆರಂಭಿಸಿದ್ದು, ಇವು ಭಾರತದಲ್ಲಿ ಯಶಸ್ವಿಯಾಯಿತು. ಈ ಮೂಲಕ ಗ್ರಾಮೀಣ ಹೈನುಗಾರಿಕೆ ಕ್ಷೇತ್ರವೂ ಅಭಿವೃದ್ಧಿ ಪಥದತ್ತ ಸಾಗಿತು. ಹೀಗಾಗೇ ಕುರಿಯನ್ ಅವರು "ರಾಷ್ಟ್ರೀಯ ಕ್ಷೀರ ಕ್ರಾಂತಿಯ ಪಿತಾಮಹ" ಎಂದು ಕರೆಸಿಕೊಂಡರು.
ಕ್ಷೀರಕ್ರಾಂತಿ ಹರಿಕಾರ ಕುರಿಯನ್ ಯುಗಾಂತ್ಯ
Recommended Video
ಕುರಿಯನ್ ಕೊಡುಗೆ ಸ್ಮರಣೆಯ ದಿನ...
ಕುರಿಯನ್ ಅವರ ಈ ಆಲೋಚನೆ ಗ್ರಾಮೀಣ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಯಿತು. ಗ್ರಾಮೀಣ ಆದಾಯವಾಗಿಯೂ ಪರಿವರ್ತನೆಯಾಯಿತು. ಭಾರತವು ವಿಶ್ವದ ಅತಿ ಹೆಚ್ಚು ಹಾಲು ಉತ್ಪಾದನಾ ರಾಷ್ಟ್ರವನ್ನಾಗಿ ಮಾಡಲು ಸಹಕಾರಿಯಾಯಿತು. ಪ್ರತಿ ವ್ಯಕ್ತಿಗೆ ನಿಗದಿತ ಪ್ರಮಾಣದ ಹಾಲು ಸಿಗುವ ಹಾಗೂ ಗ್ರಾಮೀಣ ಭಾರತದಲ್ಲಿ ಹೈನುಗಾರಿಕೆ ಅತಿ ಹೆಚ್ಚು ಉದ್ಯೋಗ ನೀಡುವ ಹಾಗೆ ಮಾಡಿದರು. ಕ್ಷೀರ ಅಭಿವೃದ್ಧಿ ಕ್ಷೇತ್ರದಲ್ಲಿ ಕುರಿಯನ್ ಅವರ ಪ್ರಮುಖ ಕೊಡುಗೆಯ ಸ್ಮರಣಾರ್ಥವಾಗಿ ರಾಷ್ಟ್ರೀಯ ಕ್ಷೀರ ದಿನವನ್ನಾಗಿ, ಅವರ ಜನ್ಮದಿನದಂದೇ ಆಚರಿಸಲಾಗುತ್ತದೆ.