ಫೆ. 8ರಿಂದ ಐದು ದಿನಗಳ ರಾಷ್ಟ್ರೀಯ ತೋಟಗಾರಿಕೆ ಮೇಳ-2021
ಬೆಂಗಳೂರು, ಫೆ. 05: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಇದೇ ಫೆಬ್ರವರಿ 8 ರಿಂದ 12ವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ಆಯೋಜಿಸಿದೆ. 'ಸ್ಟಾರ್ಟ್ ಅಪ್ ಮತ್ತು ಸ್ಟ್ಯಾಂಡ್ ಅಪ್ ಭಾರತಕ್ಕಾಗಿ ತೋಟಗಾರಿಕೆ' ಎಂಬ ಉದ್ದೇಶದದೊಂದಿಗೆ ಐದು ದಿನಗಳ ಕಾಲ ಮೇಳ ನಡೆಯಲಿದೆ. ವರ್ಚವಲ್ ಮೂಲಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ.
ಕೊರೊನಾವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಆಫ್ಲೈನ್ ಹಾಗೂ ಆನ್ಲೈನ್ ಮೂಲಕ ತೋಟಗಾರಿಕಾ ಮೇಳ ನಡೆಯಲಿದೆ. ಈ ಬಾರಿ ಮೇಳದಲ್ಲಿ ಭಾಗವಹಿಸಲು ರೈತರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕಾಗಿರುವುದರಿಂದ ಭೌತಿಕ ಮೇಳದಲ್ಲಿ ವಿವಿಧ ರಾಜ್ಯಗಳ 30 ಸಾವಿರ ರೈತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಂದು ಸಂಸ್ಥೆಯ ನಿರ್ದೇಶಕ ಎಂ.ಆರ್. ದಿನೇಶ್ ತಿಳಿಸಿದ್ದಾರೆ.
ಬೀಜೋತ್ಪಾದನೆ ಸೇರಿದಂತೆ ಮುಖ್ಯವಾಗಿ ಸಂಸ್ಥೆಯು ಸಂಶೋಧಿಸಿದ ತಳಿಗಳು ರೋಗ ನಿರೋಧಕ ಶಕ್ತಿ ಹೊಂದಿವೆ. ಅದೇ ರೀತಿ ಮೌಲ್ಯಧಾರಿತ ಉತ್ಪನ್ನಗಳು ಹಾಗೂ ತೋಟಗಾರಿಕೆ ಸಂಬಂಧಿಸಿದ ಸುಲಭ ತಂತ್ರಜ್ಞಾನಗಳು, ಯಂತ್ರಗಳು ಈ ತೋಟಗಾರಿಕಾ ಮೇಳದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಈ ಬಾರಿಯ ತೋಟಗಾರಿಕಾ ಮೇಳದಲ್ಲಿ ಖಾಸಗಿ ಕಂಪನಿಗಳು ಕೂಡ ಭಾಗವಹಿಸುತ್ತಿವೆ.
ಆನ್ಲೈನ್ ಮೂಲಕ ಭಾಗವಹಿಸುವಿಕೆ
ಆನ್ಲೈನ್ ಮೂಲಕ ದೇಶದಾದ್ಯಂತ ರೈತರು ಭಾಗವಹಿಸಲು ಅವಕಾಶವಿದೆ. ಆನ್ಲೈನ್ ನೋಂದಣಿಗೆ ಕೃಷಿ ವಿಜ್ಞಾನ ಕೇಂದ್ರಗಳ ನೆರವು ಪಡೆಯಲಾಗಿದೆ. 11 ಅಟಾರಿ ಕೇಂದ್ರಗಳ 721 ಕೆವಿಕೆಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೇಳದಲ್ಲಿ 211 ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ಪ್ರದರ್ಶಿಸಲಾಗುತ್ತದೆ. ಆಯಾ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ರೈತರು ಆನ್ಲೈನ್ ಮೂಲಕ ನೋಂದಾಯಿಸಿ ಮೇಳದಲ್ಲಿ ಪಾಲ್ಗೊಳ್ಳಬಹುದು. ಕೃಷಿ ವಿಜ್ಞಾನಿಗಳ ಜತೆ ದ್ವಿಮುಖ ಸಂಹವನದ ವ್ಯವಸ್ಥೆ ಇದೆ. ಜೊತೆಗೆ ರೈತರು ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಜ್ಞಾನಿಗಳ ಜತೆ ಹಂಚಿಕೊಂಡು ಪರಿಹಾರ ಪಡೆಯಬಹುದಾಗಿದೆ.
ಉದ್ಯಮವಾಗಿ ತೋಟಗಾರಿಕೆ
ಪ್ರಧಾನ ಕೃಷಿ ವಿಜ್ಞಾನಿ ಡಾ. ಎಂ.ಎ. ಧನಂಜಯ ಮಾತನಾಡಿ, ಈ ಬಾರಿಯ ಮೇಳದಲ್ಲಿ ತೋಟಗಾರಿಕೆಯನ್ನು ಉದ್ಯಮವಾಗಿ ಉತ್ತೇಜಿಸಲು ವಿಶೇಷ ಆಸಕ್ತಿ ವಹಿಸಲಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಸಂಕಷ್ಟವನ್ನೇ ಕಂಡಿರುವ ರೈತರಿಗೆ ನೆರವಾಗಲು ತೋಟಗಾರಿಕೆಯನ್ನು ಒಂದು ಉದ್ಯಮವನ್ನಾಗಿ ಸ್ವೀಕರಿಸಲು ಅವರಿಗೆ ಮೇಳದಲ್ಲಿ ಎಲ್ಲಾ ರೀತಿಯ ಸಲಹೆ-ಸಹಕಾರವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಅಗತ್ಯ ಮಾರ್ಗದರ್ಶನ
ಸಂಸ್ಥೆಯ ಕೃಷಿ ವಿಜ್ಞಾನಿಗಳು ರೈತರಿಗೆ ಈ ಕುರಿತು ಅಗತ್ಯ ಮಾರ್ಗದರ್ಶನಗಳನ್ನು ನೀಡುತ್ತಾರೆ. ಜತೆಗೆ ತೋಟಗಾರಿಕೆ ಪ್ರಾತ್ಯಕ್ಷಿಕೆಗಳ ನೈಜ ಮಾದರಿಗಳನ್ನು ರೈತರಿಗೆ ತೋರಿಸುವ ಮೂಲಕ ಅವರಿಗೆ ತೋಟಗಾರಿಕೆ ಉತ್ಪನ್ನಗಳನ್ನು, ಬೆಳೆಯುವ ವಿಧಾನ ಕುರಿತು ಇನಷ್ಟು ಉತ್ತೇಜನ ನೀಡಲಾಗುವುದು. ಸಂಸ್ಥೆಯು ಅಭಿವೃದ್ದಿಪಡಿಸಿರುವ ತೋಟಗಾರಿಕೆ ಸಂಬಂಧಿಸಿದ ತಂತ್ರಜ್ಞಾನವನ್ನು ರೈತರಿಗೆ ಮೇಳದಲ್ಲಿ ಪರಿಚಯಿಸಲಾಗುವುದು.
ಸಮಗ್ರ ತೋಟಗಾರಿಕೆ ಬೆಳೆ ಪದ್ದತಿ
ಪ್ರಧಾನ ವಿಜ್ಞಾನಿ ಡಾ. ಅಶ್ವಥ್ ಮಾತನಾಡಿ, ಮಾವಿನ ತೋಟದಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುವುದು ಹೇಗೆ ಮತ್ತು ಇದರಿಂದ ರೈತರು ತಮ್ಮ ಆದಾಯವನ್ನು ಯಾವ ರೀತಿ ದ್ವಿಗುಣಗೊಳಿಸ ಬಹುದು ಎನ್ನುವ ಕುರಿತು ಸಂಶೋಧನಾ ಸಂಸ್ಥೆಯು ಮೇಳದಲ್ಲಿ ರೈತರಿಗೆ ಮಾಹಿತಿ ನೀಡಲಿದೆ. ರೈತರು ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ, ಆವರನ್ನು ಸಮಗ್ರ ಬೆಳೆ ಪದ್ದತಿಗೆ ಉತ್ತೇಜಿಸಿ ಆದಾಯವನ್ನು ದ್ವಿಗುಣಗೊಳಿಸುವ ಕ್ರಮಕ್ಕೆ ಸಂಸ್ಥೆ ಉತ್ತೇಜನ ನೀಡಲಿದೆ. ಮೇಳದಲ್ಲಿ ಈ ಕುರಿತು ಮಾಹಿತಿಯನ್ನು ರೈತರ ಜತೆಗೆ ಹಂಚಿಕೊಳ್ಳಲಾಗುವುದು ಎಂದು ಹೇಳಿದರು.
ಆನ್ಲೈನ್ ಸೀಡ್ ಪೋರ್ಟಲ್
ಪ್ರಧಾನ ವಿಜ್ಞಾನಿ ಡಾ. ಸಿ.ಕೆ. ನಾರಾಯಣ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಪೈಫೋಟಿ ನಡೆಸಲು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ತನ್ನನ್ನು ತಾನು ಸಜ್ಜಗೊಳಿಸಿಕೊಂಡಿದೆ. ಆನ್ ಲೈನ್ ಸೀಡ್ ಪೋರ್ಟಲ್ ಮೂಲಕ ಸುಮಾರು 40 ವಿವಿಧ ತರಕಾರಿ ಹಾಗೂ ಹೂ ಗಳ ಬೀಜಗಳನ್ನು ದೇಶದ ಎಲ್ಲ ಪ್ರದೇಶಗಳ ರೈತರ ಮನೆ ಬಾಗಿಲಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವ ವಿನೂತನ ಪ್ರಯತ್ನದಲ್ಲಿ ಯಶಸ್ಸುಗಳಿಸಿದೆ ಎಂದು ಮಾಹಿತಿ ನೀಡಿದರು.
ಬೀಜ ಗ್ರಾಮ ಯೋಜನೆ
20 ವಿವಿಧ ತರಕಾರಿಗಳ 60 ತಳಿಗಳ ಬೀಜಗಳನ್ನು ಬೀಜ ಗ್ರಾಮ ಯೋಜನೆ ಮೂಲಕ ರೈತರಿಂದ ಖರೀದಿಸಿ, ಅವುಗಳನ್ನು ಆನ್ಲೈನ್ ಪೋರ್ಟಲ್ ಮೂಲಕ ಮಾರಾಟ ಮಾಡಲಾಗುತ್ತಿದೆ. 2020ರ ಮೇ ತಿಂಗಳಲ್ಲಿ ಚಾಲನೆಗೊಂಡ ಆನ್ಲೈನ್ ಸೀಡ್ ಪೋರ್ಟಲ್, ಕೇವಲ 7 ರಿಂದ 8 ತಿಂಗಳ ಆವಧಿಯಲ್ಲಿ 70 ಲಕ್ಷ ರೂ.ಗಳ ವಹಿವಾಟು ನಡೆಸಿದೆ. ಆನ್ ಲೈನ್ ಸೀಡ್ ಪೋರ್ಟಲ್ಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಪ್ರಸಕ್ತ ವರ್ಷದಲ್ಲಿ 40 ರಿಂದ 50 ಟನ್ ಬೀಜ ಮಾರಾಟವನ್ನು ಆನ್ಲೈನ್ ಪೋರ್ಟಲ್ನಲ್ಲಿ ನಡೆಸುವ ಗುರಿ ಹೊಂದಲಾಗಿದೆ ಎಂದು ಪಿ. ನಂದೀಶ್ ಹೇಳಿದರು.