ಮಾ.5 ರಂದು 'ಕನಿಷ್ಠ ಬೆಂಬಲ ಬೆಲೆ ಕೊಡಿಸಿ’ ರಾಷ್ಟ್ರೀಯ ಆಂದೋಲನ ಉದ್ಘಾಟನೆ
ದಿಲ್ಲಿ ರೈತರ ಹೋರಾಟದ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರ ಮತ್ತು ಸಂಸತ್ತಿನಲ್ಲಿ ನಡೆದ ಚರ್ಚೆಗಳಿಗೆ ಉತ್ತರ ನೀಡಿದ ಪ್ರಧಾನಮಂತ್ರಿಗಳು, ಕನಿಷ್ಠ ಬೆಂಬಲ ಬೆಲೆ' ಈ ಹಿಂದೆಯೂ ಇತ್ತು, ಈಗಲೂ ಇದೆ ಮತ್ತು ಮುಂದಿನ ದಿನಗಳಲ್ಲಿ ಇರುತ್ತೆ" ಎಂದು ಉತ್ತರಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕನಿಷ್ಠ ಬೆಂಬಲ ಬೆಲೆ ಕೊಡಿಸಿ' ಆಂದೋಲನವನ್ನು ಸಂಘಟಿಸುವುದರ ಮೂಲಕ ಕನಿಷ್ಠ ಬೆಂಬಲ ಬೆಲೆ'ಯ ವಾಸ್ತವ ಚಿತ್ರಣವನ್ನು ದೇಶದ ಜನತೆಯ ಮುಂದೆ ಇಡಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರಾಷ್ಟ್ರೀಯ ಸಮಿತಿ ನಿರ್ಧರಿಸಿದೆ.
ಈ ರಾಷ್ಟ್ರೀಯ ಆಂದೋಲನದ ಉದ್ಘಾಟನೆಯನ್ನು ಮಾ.5, 2021 ರಂದು ಕಲಬುರಗಿಯಲ್ಲಿ ನಡೆಯಲಿದ್ದು, ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ)ದ ರಾಷ್ಟ್ರೀಯ ನಾಯಕರಾದ ಯೋಗೇಂದ್ರ ಯಾದವ್ ರವರು ಉದ್ಘಾಟನೆ ಮಾಡಲಿದ್ದಾರೆ.
ನಾವೂ ನಿಮ್ಮೊಂದಿಗಿದ್ದೇವೆ-ಕ.ರಾ.ರೈ.ಸಂ: ಚುಕ್ಕಿ ನಂಜುಂಡಸ್ವಾಮಿ-ಕೆ.ಟಿ. ಗಂಗಾಧರ್
ಮಾ.5 ರಂದು ರಾಜ್ಯದ ಕಲಬುರಗಿಯಲ್ಲಿ ಉದ್ಘಾಟನೆಗೊಳ್ಳುವ ಈ ಆಂದೋಲನ 2021, ಮಾ.6 ರಂದು ಬಳ್ಳಾರಿ ಮತ್ತು ಮಾರ್ಚ್ 7 ರಂದು ಬೆಂಗಳೂರಿನಲ್ಲಿ ನಡೆಸಿ, ಆಂಧ್ರಪ್ರದೇಶ, ತೆಲಂಗಾಣ ಇತ್ಯಾದಿ ರಾಜ್ಯಗಳಲ್ಲಿ ಮುಂದುವರಿಸಲಾಗುವುದು.
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ಕೊಡಿಸಿ' ರಾಷ್ಟ್ರೀಯ ಆಂದೋಲನವನ್ನು ಸಂಯುಕ್ತ ಹೋರಾಟ-ಕರ್ನಾಟಕ' ಸಂಘಟಿಸಿದ್ದು, ರಾಜ್ಯದ ರೈತರು ಈ ಆಂದೋಲನವನ್ನು ಯಶಸ್ವಿಗೊಳಿಸಬೇಕೆಂದು ಸಂಯುಕ್ತ ಹೋರಾಟ-ಕರ್ನಾಟಕ' ವಿನಂತಿಸಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಹಿನ್ನೆಲೆಯಲ್ಲಿ ಡಾ.ಎಂ.ಎಸ್ ಸ್ವಾಮಿನಾಥನ್ ವರದಿಯನ್ವಯ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ'ಯನ್ನು ಖಾತರಿ ಮಾಡುವ ಕಾನೂನನ್ನು ರೂಪಿಸಬೇಕು. ಇಡೀ ದೇಶ ಹಾಗೂ ಮೂರು ತಿಂಗಳುಗಳಿಂದ ದಿಲ್ಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ಲಕ್ಷಾಂತರ ರೈತರ ಪ್ರಮುಖ ಬೇಡಿಕೆಯಾಗಿದೆ.
ಈ ಚರ್ಚೆಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸುವ ಜವಾಬ್ದಾರಿ ಇದ್ದ ಪ್ರಧಾನಮಂತ್ರಿಗಳು ತೀರಾ ಉಡಾಫೆಯಾಗಿ ಉತ್ತರವನ್ನು ನೀಡಿದ್ದಾರೆ. ತಾವು ಪ್ರಧಾನಮಂತ್ರಿಗಳು ಆಗುವ ಮುಂಚಿನ ಲೋಕಸಭಾ ಚುನಾವಣೆಗಳ ಸಂದರ್ಭದ ನೂರಾರು ಬಹಿರಂಗ ಸಭೆಗಳಲ್ಲಿ ಡಾ.ಎಂ.ಎಸ್ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿ, ಆ ನಂತರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಇದನ್ನು ಜಾರಿ ಮಾಡಲು ಸಾಧ್ಯವಿಲ್ಲವೆಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ.
ಅದನ್ನು ಮರೆಮಾಚಿ ಈಗ ಕಳೆದ ಆರು ವರ್ಷಗಳಲ್ಲಿಕನಿಷ್ಠ ಬೆಂಬಲ ಬೆಲೆ' ಯನ್ನು ಡಾ.ಎಂ.ಎಸ್ ಸ್ವಾಮಿನಾಥನ್ ವರದಿಯಂತೆ ಹೆಚ್ಚಳ ಮಾಡಿರುವುದಾಗಿ ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಮಾತ್ರವಲ್ಲ ಒಂದು ಕಡೆ ಕೆಲವು ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚಕ್ಕಿಂತ' ಕಡಿಮೆ ಕನಿಷ್ಠ ಬೆಂಬಲ ಬೆಲೆ' ನಿಗದಿ ಮಾಡಿರುವುದು, ಹೀಗೆ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ'ಯನ್ನೂ ರೈತರಿಗೆ ನೀಡಲು ವಿಫಲವಾಗಿರುವುದು ಸರ್ವೇ ಸಾಮಾನ್ಯ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ಇಡೀ ಕನಿಷ್ಠ ಬೆಂಬಲ ಬೆಲೆ'ಯ ವಾಸ್ತವ ಜಾರಿ ಹಾಗು ಕೇಂದ್ರದ ಮೂರು ಕೃಷಿ ಕಾಯ್ದೆಗಳಿಗೂ ಕನಿಷ್ಠ ಬೆಂಬಲ ಬೆಲೆ' ಇರುವ ಸಂಬಂಧಗಳ ಬಗ್ಗೆ ರೈತರು, ಜನತೆಯಲ್ಲಿ ಜಾಗೃತಿಯನ್ನು ಉಂಟು ಮಾಡಲು ಈ ಆಂದೋಲನವನ್ನು ಸಂಘಟಿಸಲಾಗುತ್ತಿದೆ. ಈ ಹೋರಾಟದಲ್ಲಿ ರಾಜ್ಯದ ರೈತರು, ದೇಶ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಯುಕ್ತ ಕಿಸಾನ್ ಮೋರ್ಚಾ ವಿನಂತಿಸಿದೆ.